Sunday, 7 August 2016

ಮತ್ತೆ ಬರಬಾರದೆ ಆ ಬಾಲ್ಯದ ದಿನಗಳು

ಮತ್ತೆ ಬರಬಾರದೆ ಬಾಲ್ಯದ ದಿನಗಳು…..

ಒಂದೆರಡು ದಿನಗಳ ಹಿಂದೆ ಯವುದೋ ಘಾಡವಾದ ಯೋಚನೆಯಲ್ಲಿ ಮುಳುಗಿಹೋಗಿದ್ದ ನನ್ನನ್ನು ಒಂದೆರಡು ಕ್ಷಣಕ್ಕಾದರೂ ಸರಿ, ಮತ್ತೆ ಹಳೇ ಸಿಹಿ ದಿನಗಳಿಗೆ ನನ್ನ ಮನಸ್ಸನ್ನು ಕರೆದೊಯ್ದು, ಹಳೇ ದಿನಗಳ ಸವಿ ರುಚಿಯನ್ನು ಮತ್ತೊಮ್ಮೆ ಸವಿಯುವಂತೆ ಮಾಡಿದ ಒಂದು ದೃಶ್ಯ ನನ್ನ ಕಣ್ಣಿನಿಂದ ಜಾರುತ್ತಲೇ ಇಲ್ಲ. ಹೀಗೆ ಯಾವುದೋ ಒಂದು ಕೆಲಸಕ್ಕಾಗಿ ಹೊರಗೆ ಹೋಗಿದ್ದ ನಾನು ತುಸು ವಿರಾಮ ಪಡೆಯೋಣವೆಂದು ಒಂದು ರಸ್ತೆ ಬದಿಯಲ್ಲಿ ನಿಂತಿದ್ದೆ. ಅದು ಸ್ವಲ್ಪ ಜನನಿಭಿಡ ರಸ್ತೆಯಾದರೂ ರಸ್ತೆ ಬದಿಯಲ್ಲಿ ನಿಂತು ಅಲ್ಲಿ ಅಡ್ಡಾಡುತ್ತಿದ್ದ ವಾಹನಗಳನ್ನು, ಜನರನ್ನು ನೋಡುತ್ತಾ ನನ್ನ ಮನಸ್ಸಿನಲ್ಲಗುತ್ತಿದ್ದ ಗೊಂದಲಗಳನ್ನು ಹಾಗೇ ಸುಮ್ಮನೆ ಅನುಭವಿಸುತ್ತಾ, ಆಸ್ವಾಧಿಸುತ್ತಾ, ಚಿಂತಿಸುತ್ತಾ ನನ್ನನ್ನೇ ನಾನು ಮರೆತು ಹೋಗಿದ್ದೆ. ಆಕಾಶದಲ್ಲಿ ಮಿಂಚು ಬಂದು ಹೋಗುವಷ್ಟು ವೇಗದಲ್ಲಿ ಒಂದಷ್ಟು ಚಿಕ್ಕ ಹುಡುಗರ ಗುಂಪು ಮೋಡಗಳು ಆರ್ಭಟಿಸುವ ಗುಡುಗಿನಂತೆ ಅಬ್ಬರಿಸುತ್ತಾ ನನ್ನ ಮುಂದೆ ಹಾದು ಹೋದರು. ಅದ್ಯಾವುದೋ ಆಟವಾಡುತ್ತಿದ್ದರು ಅಂತ ಅನ್ನಿಸುತ್ತದೆ. ಒಬ್ಬೊಬ್ಬರ ಮುಖದಲ್ಲೂ ಅದೆಷ್ಟು ಸಂತೋಷ, ಲವಲವಿಕೆ, ಉತ್ಸಾಹ. ಒಂದೇ ಕ್ಷಣಕ್ಕೆ ಜೀವನವೆಂದರೆ ಇದಲ್ಲವೆ ಅಂದೆನ್ನಿಸಿಬಿಟ್ಟಿತು. ಅದೆಷ್ಟು ಸಂತಸದಿಂದ ಕೂಡಿತ್ತು ಅವರ ಮುಖ. ಒಂದಿಷ್ಟೂ ಮೋಸದ, ದ್ವೇಷದ, ಅಸೂಯೆಯ ಕುರುಹೂ ನನಗೆ ಕಾಣಲಿಲ್ಲ.
ಅವರ ಮುಖದಲ್ಲಿ ಕಾಣುತ್ತಿದ್ದ ಮುಗ್ಧತೆ, ಸಂತೋಷ ನಾನು ನನ್ನ ಬಾಲ್ಯದ ದಿನಗಳಲ್ಲಿ ಕಳೆದ ಕ್ಷಣಗಳನ್ನು ನೆನೆಯುವಂತೆ ಮಾಡಿತು. ದಿನಗಳಲ್ಲಿ ನಾವಾಡುತ್ತಿದ್ದ ಚಿಕ್ಕ-ಚಿಕ್ಕ ಆಟ, ಹೆಚ್ಚು ಸಮಯ ಉಳಿಯದಂತಹ ಮುನಿಸು, ಸಣ್ಣ-ಪುಟ್ಟ ವಿಷಯಗಳಿಗೆ ಮಾಡುತ್ತಿದ್ದ ಹಟ ಎಲ್ಲವೂ ಅಲೆ-ಅಲೆಯಾಗಿ ಮನಸ್ಸನ್ನು ಅಪ್ಪಳಿಸತೊಡಗಿತು. ಯಾವ ಯಾವ ಆಟಾವಾಡುತ್ತಿದ್ದೆವು ನಾವು
*
ಶರಾಪ್-ಕರೆಂಟ್
*
ಐಸ್-ಪೈಸ್
*
ಅವರ್ ಬಿಟ್ ಇವರ್ ಬಿಟ್ ಅವರ್‍ಯಾರು
*
ಬಾಗೆ ಕಾಯಿ ಕಾರ್ಕ್ ಬಾಲ್
*
ಕೋಳಿ ಜಗಳ
*
ರಾಮ ಭೀಮ ಸೋಮ(ಚೂರ್ ಚಂಡು)
*
ಲಗೋರಿ
*
ಬುಗುರಿ
*
ಗೋಲಿ
*
ಗಿಲ್ಲಿ-ದಾಂಡು
*
ಜೇಡಿ ಮಣ್ಣು
*
ಕಪ್ಪೆ-ಚಿಪ್ಪು
ಮಧ್ಯಾಹ್ನದ ಊಟದ ಸಮಯದಲ್ಲಿ ಬೇಗ ಊಟ ಮುಗಿಸಿ ಆಟವಾಡುತ್ತಿದ್ದ ಆಟ ರಾಮ ಭೀಮ ಸೋಮ ಹಾಗೂ ಲಗೋರಿ. ಚೆಂಡು ಕೈಗೆ ಸಿಕ್ಕಿದೊಡನೆ ಎದುರು ಯಾರಿದ್ದಾರೆಂದು ನೋಡದೆ ಬಲವಾಗಿ ಹೊಡೆಯುತ್ತಿದ್ದ ಹೊಡೆತ. ಲಗೋರಿ ಆಟದಲ್ಲಿ ಕಲ್ಲುಗಳನ್ನು ಜೋಡಿಸುವ ಅಬ್ಬರದಲ್ಲಿ ವೇಗವಾಗಿ ಓಡುತ್ತಿದ್ದುದು, ಚೆಂಡಿನಿಂದ ಏಟು ತಿನ್ನುತ್ತಿದ್ದುದು, ಗೆದ್ದರೆ ಖುಷಿಯಿಂದ ಕುಪ್ಪಳಿಸುತ್ತಿದ್ದುದು ಮರೆಯಲಾಗದು.
ಯಾವುದಾದರು ಬಾಗೆಕಾಯಿ ಮರ ಸಿಕ್ಕಿದರೆ ಕಾಯಿಗಳನ್ನೆಲ್ಲಾ ಸಂಗ್ರಹಿಸಿ, ಅದರೊಳಗಿನ ಬೀಜಗಳನ್ನು ತೆಗೆದು ನುಣ್ಣಗೆ ಕಲ್ಲಿನಿಂದ ಜೆಜ್ಜಿ, ಎಣ್ಣೆ ಹಾಕಿ, ಸಜ್ಜದ ಮೇಲೆ ಬಿಸಿಲಿಗೆ ಕಾಯಲು ಇಡುತ್ತಿದ್ದುದು ನನಗೆ ನೆನಪಿದೆ. ಆದರೆ ದುರಂತವೆಂದರೆ ನನಗೆ ಒಂದು ದಿವಸವೂ ನನಗೆ ಕಾರ್ಕ್ ಬಾಲ್ ದೊರೆಯಲೇ ಇಲ್ಲ!!!
ಸಂಜೆಯಾದೊಡನೆ ಎಲ್ಲರೂ ಸೇರಿ ಶರಾಪ್-ಕರೆಂಟ್ ಅಥವಾ ಐಸ್-ಪೈಸ್ ಆಟವಾಡಲು ಶುರು ಮಾಡುತ್ತಿದ್ದೆವು. ಸಾಧ್ಯವಾದಷ್ಟು ವೇಗವಾಗಿ ಓಡಿ, ಕಡೆಗೆ ಸಿಕ್ಕಿ ಬೀಳುವ ಸಮಯದಲ್ಲಿ ಶರಾಪ್ ಎಂದು ಕೇಳಿ ಯಾರಾದರು ಕರೆಂಟ್ ಕೊಡುವವರೆಗು ಕಾಯುತ್ತಿದ್ದೆವು. ಐಸ್-ಪೈಸ್ ಆಟವಾಡಿದರೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಅವಿತುಕೊಂಡು ಆಟವಾಡಿಸುತ್ತಿದ್ದ ನೆನಪು ಕಣ್ಣಲ್ಲಿ ಹಾಗೇ ಇದೆ. ಶಾಲೆಯಿಂದ ಮನೆಗೆ ಬರುವಾಗ ಅದ್ಯಾವುದೋ ಒಂದು ಕಾಯಿಯಲ್ಲಿ ಬರುತ್ತಿದ್ದ ಸಣ್ಣ-ಸಣ್ಣ ಕಡ್ಡಿಗಳಂತಿದ್ದ ಕೋಳಿಗಳನ್ನು ಕಿತ್ತು ಕೋಳೀ ಜಗಳವೆಂದೂ ಆಟವಾಡುತ್ತಿದ್ದ ಸಣ್ಣ-ಸಣ್ಣ ಆಟ ಮನಸ್ಸಿಗೆ ಅದೆಷ್ಟು ಮುದ ನೀಡುತ್ತಿದ್ದವು.
ಎಲ್ಲ ಹುಡುಗರು ಸೇರಿ ಆಡುತ್ತಿದ್ದ ಬಣ್ಣ-ಬಣ್ಣದ ಬುಗುರಿ, ಗೋಲಿ, ಗಿಲ್ಲಿ-ದಾಂಡು ಆಟಗಳ ಮಜವೇ ಬೇರೆ.
ಚೀಟಿಗಳನ್ನು ಬರೆದು ಆಡುತ್ತಿದ್ದ ರಾಜ, ರಾಣಿ, ಮಂತ್ರಿ, ಕಂತ್ರಿ, ಸೈನಿಕ ಆಟ. ಯಾವುದೇ ಹಣದ ಖರ್ಚಿಲ್ಲದೆ ಸಿಗುತ್ತಿದ್ದ ಸಂತೋಷಕ್ಕೆ ನನ್ನ ಮಟ್ಟಿಗೆ ಹೆಳುವುದಾದರೆ ಹೋಲಿಕೆಯೇ ಇಲ್ಲವೆನಿಸುತ್ತದೆ.
ಎಲ್ಲಿ ಹೋಯಿತು ದಿನಗಳು, ಸಂತಸದ ಕ್ಷಣಗಳು??? ಕಾಲ ಕಳೆದಂತೆ ಜೇಬಿನಲ್ಲಿ ಇರುತ್ತಿದ್ದ ಚಿಲ್ಲರೆ ಕಾಸುಗಳು ನೂರು-ನೂರರ ನೋಟುಗಳಾಗಿ ಬದಲಾದುವು. ಸೈಕಲ್-ನಲ್ಲಿ ಓಡಾಡುತ್ತಿದ್ದ ನಾವು ಈಗ ಬೈಕ್ ಹಾಗೂ ಕಾರ್ ಗಳಲ್ಲಿ ಓಡಾಡುತ್ತಿದ್ದೇವೆ. ಮುಗ್ಧತೆಯು ಮುಖದಿಂದ ಮಾಸು ಹೋಗಿದೆ. ಮುಕ್ತವಾಗಿ ಯಾರ ಬಳಿಯೂ ಎಲ್ಲವನ್ನೂ ಹೇಳಿಕೊಳ್ಳಲಾಗುವುದಿಲ್ಲ. ಎಲ್ಲಾ ಸಂತೋಷಗಳೂ ಕೃತಕವಾಗಿ ಕಾಣಿಸುತ್ತದೆ. ಕ್ಷಣಕ್ಕೂ ಬಾಲ್ಯದ ದಿನಗಳು ಮನಸ್ಸಿನಾಳದಿಂದ ಹೊರಗೆ ಬಂದು ಕಣ್ಣ ಮುಂದೆ ಹಾದು ಹೋಗುತ್ತದೆ. ಈಗ ಉಳಿದಿರುವುದು ಕೇವಲ ಬಾಲ್ಯದ ನೆನಪುಗಳು.
ಮನಸ್ಸಿನಲ್ಲಿ ಆಗಾಗ ಮಿಂಚಿನಂತೆ ಪ್ರಕಾಶಮಾನವಾಗಿ ಬಂದು ಮಾಯವಾಗುವ ವೇದನೆಮತ್ತೆ ಬರಬಾರದೆ ಬಾಲ್ಯದ ದಿನಗಳು”……….

ಸುಂದರ ಜೀವನಕ್ಕೆ ಕೆಲವು ಸೂತ್ರಗಳು:
1.   ದಿನಾ 10-30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, 7 ಘಂಟೆಗಳ ಕಾಲ ನಿದ್ದೆ ಮಾಡಿ.
2.   ದಿನಾಲೂ ಪ್ರಾರ್ಥನೆ, ಧ್ಯಾನ ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಜೀವನದ ಜಂಜಡವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.
3.   ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ.
4.   ಧಾರಾಳವಾಗಿ ನೀರು ಕುಡಿಯಿರಿ. ಇಷ್ಟವಾದ ಆಟವಾಡಿ.
5.   ತಿಂಡಿ ರಾಜನಂತೆ ತಿನ್ನಿ. ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ. ರಾತ್ರಿ ಊಟ ಭಿಕ್ಷುಕನಂತೆ ಇರಲಿ.
6.   ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ.
7.   ಜಾಸ್ತಿ ಮುಗುಳುನಗಿ. ಹೆಚ್ಚೆಚ್ಚು ನಕ್ಕುಬಿಡಿ. ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ.
8.   ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ.
9.   ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕೊಲ್ಲಬೇಡಿ. ಜೀವನ ಚಿಕ್ಕದು. ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ. ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ.
1 0.               ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಡನೆ ಕಾಲ ಕಳೆಯಿರಿ.
11.                ಎಲ್ಲಾ ವಾದಗಳನ್ನೂ ಗೆಲ್ಲಬೇಕಿಂದಿಲ್ಲ. ಸೋತು ಗೆದ್ದುಬಿಡಿ.
12.                ನಿಮ್ಮ ಸಂಗಾತಿಗೆ ಅವರ ಹಿಂದಿನ ತಪ್ಪುಗಳನ್ನು ಜ್ಞಾಪಿಸಿ ನಿಮ್ಮ ಇಂದಿನ ಸಂತೋಷವನ್ನು ಕೊಲ್ಲಬೇಡಿ.
13.                ನಿಮ್ಮನ್ನು ನೀವೇ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಯಾಕೆಂದರೆ ಬೇರೆ ಯಾರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
14.                ಜೀವನ ಒಂದು ಶಾಲೆಯಿದ್ದಂತೆ. ಸಮಸ್ಯೆಗಳು ಬೀಜಗಣಿತದ ಲೆಕ್ಕಗಳಂತೆ ಕರಗಿ ಉತ್ತಮ ಪಾಠ ಕಲಿಸುತ್ತವೆ. ಸಮಸ್ಯೆಗಳನ್ನು ಉತ್ಸಾಹದಿಂದ ಎದುರಿಸಿ.
15.                ನಿಮ್ಮ ಉದ್ಯೋಗ ನಿಮ್ಮನ್ನು ನೀವು ನಿವೃತ್ತಿಯಾಗುವವರೆಗೂ ಕಾಯುವುದು. ನಿಮ್ಮ ಕುಟುಂಬ, ಸಂಬಂಧಿಗಳು ಮತ್ತು ಮಿತ್ರರು ಮಾತ್ರ ನಿಮ್ಮೊಡನೆ ಯಾವಾಗಲೂ ಇರುವವರು. ಅವರಿಗೆ ಯಾವಾಗಲೂ ಸಮಯ ಕೊಡಿ.
16.                ಎಲ್ಲರನ್ನೂ ಕ್ಷಮಿಸುತ್ತಾ, ಅವರ ತಪ್ಪುಗಳನ್ನು ಮರೆಯುತ್ತಾ ಮುಂದೆ ಸಾಗಿ.



 collected

No comments:

Post a Comment