Sunday, 28 August 2016

ಅಳುವಿನಲ್ಲೇ ಇದೆ ನಗು

♻️ಅಳುವಿನಲ್ಲೇ ಇದೆ ನಗು♻️


ಮನುಷ್ಯನ ಮನಸ್ಸು ಯಾವಾಗಲೂ ಸುಖವನ್ನು ಬಯಸುತ್ತದೆ; ಆದರೆ ಯಾರ ಜೀವನದಲ್ಲೇ ಆಗಲಿ ಬರಿಯ ಸುಖವಷ್ಟೆ ಇರಲು ಸಾಧ್ಯವೆ? ಝೆನ್‌ಗುರು ಕ್ಯೊಂಗ್‌ ಹೊ ‘ಅದಕ್ಕೇ ಜೀವನದ ಸುಖವನ್ನು ದುಃಖದಲ್ಲಿಯೇ ನೋಡಬೇಕಾಗುತ್ತದೆ; ಅನಾರೋಗ್ಯದಲ್ಲಿಯೇ ಆರೋಗ್ಯದ ಮದ್ದನ್ನು ಕಂಡುಕೊಳ್ಳಬೇಕು’ ಎಂದು ಉಪದೇಶಿಸಿದ್ದು. ಅವನ ಕೆಲವೊಂದು ಉಪದೇಶಗಳು ಇಂತಿವೆ:

* ಪೂರ್ಣಾರೋಗ್ಯವನ್ನು ಬಯಸದಿರಿ; ಏಕೆಂದರೆ ರೋಗವೇ ಬರದಿದ್ದರೆ ಲೋಭ ಮತ್ತು ಕಾಮಗಳು ಸದಾ ನಿಮ್ಮನ್ನು ಕಾಡಲು ತೊಡಗುತ್ತವೆ. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಅನಾರೋಗ್ಯದ ನರಳಾಟದಲ್ಲಿ ಉತ್ತಮ ಆರೋಗ್ಯದ ಔಷಧವನ್ನು ಹುಡುಕಿ.’

* ಸಮಸ್ಯೆಗಳೇ ಇಲ್ಲದ ಬದುಕನ್ನು ನಿರೀಕ್ಷಿಸಬೇಡಿ. ಸುಲಭವಾದ ಜೀವನದಿಂದ ನಿಮ್ಮ ಬುದ್ದಿ ಸೋಮಾರಿತನ ಮತ್ತು ಪೂರ್ವಗ್ರಹದ ಕಡೆಗೆ ತಿರುಗಬಹುದು. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಜೀವನದಲ್ಲಿ ಎದುರಾಗುವ ಅಡ್ಡಿಗಳನ್ನೂ ಕಷ್ಟಗಳನ್ನೂ ಒಪ್ಪಿಕೊಳ್ಳಿ.’

* ಅನಿರೀಕ್ಷಿತವಾದುದು ಏನೂ ಎದುರಾಗದೆಂಬ ಎಣಿಕೆಯಲ್ಲಿ ಯಾವುದೇ ಕೆಲಸದಲ್ಲಿ ತೊಡಗಬೇಡಿ. ಆಕಸ್ಮಿಕತೆಯನ್ನು ಒದಗಿಸದ ಕೆಲಸವು ಗಟ್ಟಿಯಿರದ ತೀರ್ಮಾನವನ್ನಷ್ಟೆ ಕೊಡಬಲ್ಲದು. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಎದುರಾಗುವ ಎಲ್ಲ ಅನಿರೀಕ್ಷಿತ ಭೂತಗಳನ್ನು ಸ್ನೇಹದಿಂದಲೇ ಸ್ವೀಕರಿಸಿ ನಿಮ್ಮ ಕಠಿಣಾಭ್ಯಾಸವನ್ನು ಮುಂದುವರಿಸಿ.’

* ಸುಲಭವಾಗಿ ಕೆಲಸ ಮುಗಿದುಹೋಗಲಿ ಎಂದು ಆಶಿಸಬೇಡಿ. ಸುಲಭವಾಗಿ ಸಿಕ್ಕುವ ಸಂಗತಿಗಳು ನಿಮ್ಮ ಬಲವನ್ನು ಕಡಿಮೆ ಮಾಡಬಹುದು. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ನಿರಂತವಾಗಿಯೂ ಮತ್ತೆ ಮತ್ತೆ ತೊಡಗಿಕೊಳ್ಳುವುದರಿಂದಲೂ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ.’

*ಸ್ನೇಹಿತರನ್ನು ಸಂಪಾದಿಸಿಕೊಳ್ಳಿ; ಆದರೆ ಅವರಿಂದ ನಿಮಗಾಗಿ ಯಾವ ಸಹಾಯವನ್ನೂ ನಿರೀಕ್ಷಿಸಬೇಡಿ. ನಿಮ್ಮ ಸ್ವಾರ್ಥಕ್ಕಾಗಿ ಏರ್ಪಟ್ಟ ಸ್ನೇಹವು ವಿಶ್ವಾಸವನ್ನು ನಾಶ ಮಾಡುತ್ತದೆ. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಹೃದಯದಲ್ಲಿ ಪರಿಶುದ್ಧತೆಯನ್ನು ತುಂಬಿಕೊಂಡು ದೀರ್ಘಕಾಲೀನ ಸ್ನೇಹವನ್ನು ಪಡೆಯಿರಿ.’

*ಪ್ರತಿಯೊಬ್ಬರೂ ನಿಮ್ಮ ಹೆಜ್ಜೆಯಲ್ಲೇ ಮುಂದುವರಿಯಬೇಕೆಂದು ಆಶಿಸಬೇಡಿ. ಎಲ್ಲರೂ ನಿಮ್ಮನ್ನೇ ಹಿಂಬಾಲಿಸುವಂತಾದರೆ ಆಗ ಅಹಂಕಾರ ನಿಮ್ಮ ಮೇಲೆ ಸವಾರಿ ಮಾಡಬಹುದು. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಜನರಿಗೆ ಶಾಂತಿ ಸಿಗಬೇಕೆಂಬುದುದೇ ನಿಮ್ಮ ಯೋಚನೆಯ ಗುರಿಯಾಗಲಿ.’

*ನೀವು ಮಾಡಿದ ದಾನದಿಂದ ಫಲವನ್ನು ಅಪೇಕ್ಷಿಸಬೇಡಿ. ಪ್ರತಿಫಲವನ್ನು ಅಪೇಕ್ಷಿಸುವುದರಿಂದ ನಿಮ್ಮ ಮನಸ್ಸು ವ್ಯಾಪಾರಕ್ಕೆ ಇಳಿಯುತ್ತದೆ. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಡಂಭಾಚಾರವನ್ನು ಹಳೆಯ ಚಪ್ಪಲಿಗಳನ್ನು ಎಸೆಯುವಂತೆ ಬಿಸಾಡಿ.’

*ನಿಮ್ಮ ಕೆಲಸದ ಮೌಲ್ಯವನ್ನು ಮೀರಿದ ಸಂಭಾವನೆಯನ್ನು ಸ್ವೀಕರಿಸಬೇಡಿ. ಅಕ್ರಮದಿಂದ ಸಾಧಿಸಿದ ಲಾಭವು ನಿಮ್ಮನೇ ಮೂರ್ಖನನ್ನಾಗಿಸುತ್ತದೆ. ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಪ್ರಾಮಾಣಿಕತೆಯಲ್ಲಿ ಶ್ರೀಮಂತರಾಗಿರಿ.’

*ಮನಸ್ನಿನ ಏಕಾಗ್ರತೆಯನ್ನು ಸಾಧಿಸಲು ನಿಮ್ಮನ್ನು ನೀವೇ ಹಿಂಸಿಸಿಕೊಳ್ಳಬೇಡಿ. ಮನಸ್ಸು ಎಂದಿಗೂ ಶೋಷಣೆಯನ್ನು ಇಷ್ಟಪಡದು; ಇಷ್ಟಕ್ಕೂ ಮನಸ್ಸಿನ ಸ್ಪಷ್ಟತೆ ಎನ್ನುವುದು ದಂಡನೆಯ ಭಾಗವಲ್ಲವಷ್ಟೆ? ಅದಕ್ಕೆಂದೇ ಋಷಿಗಳು ಹೇಳಿದ್ದು: ‘ಸಾಧನೆಯ ದಾರಿಯನ್ನು ನಿರಂತರ ಅಭ್ಯಾಸದಿಂದ ಶುದ್ಧಗೊಳಿಸಿಕೊಳ್ಳಿ.’

*ಎಲ್ಲ ಅಡ್ಡಿಗಳನ್ನೂ ಸಮಾನವಾಗಿ ಸ್ವೀಕರಿಸಿ. ಸಮಸ್ಯೆಗಳ ಗರಡಿಯಲ್ಲಿ ಪಳಗಿದವರಷ್ಟೆ ಸತ್ಯವನ್ನು ಹುಡುಕಬಲ್ಲವರಾಗಿರುತ್ತಾರೆ. ಯಾವುದೇ ಅಡ್ಡಿಯೂ ಅವರನ್ನು ಸೋಲಿಸಲಾರದು. ಸಮಸ್ಯೆಯನ್ನು ಎದುರಿಸುವುದೇ ಅವರ ದಿಟವಾದ ಸಂಪತ್ತು.

ಸೋಲು–ಗೆಲುವು, ಸುಖ–ದುಃಖ, ಲಾಭ–ನಷ್ಟ – ಇವೆಲ್ಲವೂ ಹಗಲು–ರಾತ್ರಿಗಳಂತೆ ಒಂದು ಇನ್ನೊಂದನ್ನು ಬಿಟ್ಟಿರಲಾರವು ಎನ್ನುವುದು ಝೆನ್‌ಗುರುವಿನ ಉಪದೇಶದ ಸಾರ.

ನಾವು ಜೀವನದ ಒಂದು ಮುಖವನ್ನಷ್ಟೆ ನೋಡಲು ಬಯಸುತ್ತಿರುತ್ತೇವೆ. ಆದರೆ ಜೀವನದ ಸೌಂದರ್ಯ ಇರುವುದು ಅದರ ಸಮಗ್ರತೆಯಲ್ಲಿ; ಎಂದರೆ ನಗು–ಅಳುಗಳ ಹೊಂದಾಣಿಕೆಯಲ್ಲಿ.

No comments:

Post a Comment