Monday, 1 August 2016

ಶ್ರೀವಾಣಿ......ಗೋಚರವಾದುದು ಸತ್ಯ

ಗೋಚರವಾದುದು ಸತ್ಯ

ಮನಸ್ಸು ಸದಾ ಕ್ರಿಯಾಶೀಲ, ಚುರುಕು, ಸಶಕ್ತ. ದಿನದ 24 ಘಂಟೆಯೂ ಅದು ದಣಿವಿಲ್ಲದೆ ದುಡಿಯಬಲ್ಲುದು. ಇಂಥ ಮನಸ್ಸನ್ನು ಪವಿತ್ರ ಕಾರ್ಯದಲ್ಲಿ ತೊಡಗಿಸಿದರೆ ನಮ್ಮ ಜೀವನ ಸಾರ್ಥಕ!
ಹಿಟ್ಲರನೂ ತನ್ನ ಮನಸ್ಸನ್ನೂ ಬಳಸಿದ, ಪ್ರಚಂಡ ಸಾಮರ್ಥ್ಯ ಗಳಿಸಿದ. ಲಕ್ಷಾಂತರ ಜನ ಅಸುನೀಗಿದರು. ಕೋಟಿ ಕೋಟಿ ಸಿರಿಸಂಪದ ಮಣ್ಣುಗೂಡಿತು. ಯುರೋಪ್ ಮಾತ್ರವಲ್ಲ, ಸಮಸ್ತ ಜಗತ್ತೇ ಅಲ್ಲೋಲಕಲ್ಲೋಲವಾಯಿತು! ಇದು ಹಿಟ್ಲರನ ವಿಕೃತ ಮನಸ್ಸು!
ಈ ಮನಸ್ಸು ಪ್ರಪಂಚದ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಅರಿಯಬಲ್ಲುದು. ಬಯಸಿದ ಏನೆಲ್ಲವನ್ನೂ ಕರತಲಾಮಲಕ ಮಾಡಿಕೊಡಬಲ್ಲುದು. ಇಂಥ ಮನಸ್ಸು ಮುಖ್ಯವಾಗಿ ಅರಿಯಬೇಕಾದ ಸಂಗತಿಗಳೆಂದರೆ ಇಂದ್ರಿಯಗಮ್ಯವಾದ ಭೌತಜಗತ್ತು ಹಾಗೂ ಇಂದ್ರಿಯಾತೀತವಾದ ಅಭೌತ ಜಗತ್ತು. ಒಂದು ಗೋಚರ, ಇನ್ನೊಂದು ಅಗೋಚರ. ಗೋಚರವಾದುದು ಸತ್ಯವಾದರೆ, ಅಗೋಚರವಾದುದು ಪರಮ ಸತ್ಯ!!
ಹೂವು ಕಣ್ಣಿಗೆ ಕಾಣುತ್ತದೆ, ಸುಗಂಧ ಕಾಣುವುದಿಲ್ಲ. ಆದರೆ ಎರಡೂ ಇಂದ್ರಿಯಗೋಚರ. ವಿಷಯವಸ್ತುಗಳಲ್ಲಿ ಸ್ಥೂಲ-ಸೂಕ್ಷ್ಮ ಎಂದು ಎರಡು ಪ್ರಕಾರ. ಭೂಮಿ ಸ್ಥೂಲ. ಗಾಳಿ ಸೂಕ್ಷ್ಮ. ಗುರುತ್ವಾಕರ್ಷಣ ಸೂಕ್ಷ್ಮಾತೀತ. ಅದು ಕಣ್ಣಿಗೆ ಕಾಣುವುದಿಲ್ಲ, ಕೈಗೆ ಸಿಗುವುದಿಲ್ಲ, ಕಿವಿಗೆ ಕೇಳಿಸುವುದಿಲ್ಲ. ಆದರೆ ಅನುಭವಕ್ಕೆ ಬರುತ್ತದೆ. ಇಷ್ಟು ಸೂಕ್ಷ್ಮವಾದ ಈ ಗುರುತ್ವಾಕರ್ಷಣ ಶಕ್ತಿಯೂ ಜಗತ್ತನ್ನೇ ವ್ಯಾಪಿಸಿದೆ. ಹೀಗೆ ಜಗತ್ತು ಸ್ಥೂಲ, ಸೂಕ್ಷ್ಮ, ಹಾಗೂ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಿಂದ ಕೂಡಿದೆ.
ಲವು ಗುಡಿಗಳು, ಹಲವು ದೇವರುಗಳು. ಒಂದು ಹೆಣ್ಣು ದೇವರು, ಇನ್ನೊಂದು ಗಂಡು ದೇವರು. ಒಂದು ಸಿರಿವಂತ ದೇವರು, ಇನ್ನೊಂದು ಸಿರಿವಂತವಲ್ಲದ ದೇವರು. ಒಂದು ಗುಡಿಯ ದೇವರು ಸಣ್ಣದು. ಇನ್ನೊಂದು ಗುಡಿಯ ದೇವರು ದೊಡ್ಡದು. ಹೀಗೆ ಹಲವು ತಾರತಮ್ಯ, ಬೇಧಭಾವಗಳಿಂದ ಕೂಡಿದ್ದು ಗುಡಿಯ ದೇವರು! ಇದು ಭಾವಗತ ದೇವರು. ಆದರೆ ನಿಜವಾದ ದೇವರು ಹೆಣ್ಣಲ್ಲ, ಗಂಡಲ್ಲ, ಸಣ್ಣದಲ್ಲ, ದೊಡ್ಡದಲ್ಲ, ಸಿರಿವಂತವಲ್ಲ, ಬಡವಲ್ಲ! ಗುಡಿಯೊಳಗಿನ ದೇವರನ್ನು ಒಂದು ದಿನ ಕರೆದುತರುತ್ತೇವೆ. ಇನ್ನೊಂದು ದಿನ ಕಳುಹಿಸಿಕೊಡುತ್ತೇವೆ. ಆದರೆ ಬಯಲಿನಂತೆ ಸದಾ ಸರ್ವತ್ರ ಇರುವ ಪರಮಸತ್ಯ ಪರಮಾತ್ಮನಿಗೆ ಆಹ್ವಾನ-ವಿಸರ್ಜನೆ, ಸ್ಥಾಪನೆ-ಸ್ಥಾಪನಾಂತರ ಯಾವುದೂ ಇಲ್ಲ!


BY SHREE SIDDHESWAR SWAMIJI

No comments:

Post a Comment