Thursday, 4 August 2016

ಸರ್ಕಾರಿ ಕಾರ್ನರ್

ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಬಹುದೇ?

BY ವಿಜಯವಾಣಿ ಸುದ್ದಿಜಾಲ · JUL 28, 2016


2005ರಲ್ಲಿ ನನ್ನ ಪತಿ ಸರ್ಕಾರಿ ನೌಕರರಾಗಿ ಸೇವೆಗೆ ಸೇರಿರುತ್ತಾರೆ. 2008ರಲ್ಲಿ ನಮ್ಮ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕ್ಷುಲ್ಲಕ ಕಾರಣಗಳಿಂದ ಪತಿ ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗ, ದಿನಾಂಕ 10.06.2016ರಂದು ಹೃದಯಾಘಾತದಿಂದ ಪತಿ ನಿಧನರಾಗಿದ್ದಾರೆ. ಇದರಿಂದ ನನಗೆ ಪಿಂಚಣಿ ಕುಟುಂಬ ಸೌಲಭ್ಯ ಸಿಗಲಿದೆಯೇ? ಅನುಕಂಪ ಆಧಾರದಲ್ಲಿ ಸರ್ಕಾರಿ ನೌಕರಿ ಪಡೆಯಬಹುದೇ?

ಐ ಜ್ಯೋತಿ ಎಸ್.ಪಾಟೀಲ್ ಬೆಳಗಾವಿ.

ವಿವಾಹ ವಿಚ್ಛೇದನ ಆಗದಿರುವುದರಿಂದ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 292ಬಿಯಂತೆ ನಿಮಗೆ ಮರಣ ಉಪದಾನ ಹಾಗೂ ಕರ್ನಾಟಕ ಸರ್ಕಾರಿ ಸೇವಾ(ಕುಟುಂಬ ಪಿಂಚಣಿ) ನಿಯಮಗಳು 2002ರಂತೆ ಕುಟುಂಬ ನಿವೃತ್ತಿ ವೇತನ ಲಭ್ಯ. ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಗಳು 1996 ನಿಯಮ 3ರಂತೆ ನಿಮಗೆ ಅನುಕಂಪದ ಮೇರೆಗೆ ಉದ್ಯೋಗಾವಕಾಶ ಲಭ್ಯ. ಈ ದೃಷ್ಟಿಯಿಂದ ಒಂದು ವರ್ಷದೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು.




 ಸರ್ಕಾರಿ ಕಾರ್ನರ್

BY ವಿಜಯವಾಣಿ ಸುದ್ದಿಜಾಲ · JUL 26, 2016


ನಾನು ಅನುದಾನಿತ ಪ್ರೌಢಶಾಲೆಯಲ್ಲಿ ದಿನಾಂಕ: 23.11.1983ರಿಂದ ಶಿಕ್ಷಕಿಯಾಗಿ ಸೇರಿ ದಿನಾಂಕ: 23.11.2013ಕ್ಕೆ 30 ವರ್ಷಗಳ ಸೇವೆ ಪೂರ್ಣಗೊಳಿಸಿದ್ದೇನೆ. ಏತನ್ಮಧ್ಯೆ 24.04.2014ಕ್ಕೆ ನನಗೆ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ದೊರಕಿದೆ. ದಿನಾಂಕ: 31.05.2016ರಂದು ನಾನು ಸೇವೆಯಿಂದ ನಿವೃತ್ತಿ ಹೊಂದಿದ್ದು ಮಹಾಲೇಖಪಾಲರು ನನ್ನ ನಿವೃತ್ತಿ ವೇತನ ನಿಗದಿಪಡಿಸುವಾಗ 30 ವರ್ಷದ ವಿಶೇಷ ವೇತನ ಬಡ್ತಿಯನ್ನು ಕಡಿತಗೊಳಿಸಿರುವರು. ನಾನು 30 ವರ್ಷದ ವಿಶೇಷ ಬಡ್ತಿಗೆ ಅರ್ಹಳೇ, ಇಲ್ಲವೋ ದಯವಿಟ್ಟು ತಿಳಿಸಿ.

ದಿನಾಂಕ: 14.06.2012ರ ಸರ್ಕಾರಿ ಆದೇಶ ಸಂಖ್ಯೆ: ಎಫ್​ಡಿ12ಎಸ್​ಆರ್​ಪಿ2012 ರಂತೆ ರಾಜ್ಯ ವೇತನ ಶ್ರೇಣಿಗಳಲ್ಲಿನ ಮೊದಲ 15 ಶ್ರೇಣಿಗಳಲ್ಲಿರುವ ಯಾವುದೇ ಒಂದು ಹುದ್ದೆಯಲ್ಲಿ 30 ವರ್ಷಗಳ ಕಾಲ ಒಂದೂ ಪದೋನ್ನತಿಯನ್ನು ಪಡೆಯದೆ ಮುಂದುವರೆದಿರುವ ನೌಕರರಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ ಶ್ರೇಣಿಯಲ್ಲಿ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಬಹುದೆಂದು ಸೂಚಿಸಲಾಗಿದೆ. ಈ ಹೆಚ್ಚುವರಿ ವೇತನ ಬಡ್ತಿಯನ್ನು ನೇಮಕಾತಿ ಪ್ರಾಧಿಕಾರವೇ ಷರತ್ತುಗಳು ಪೂರ್ಣಗೊಂಡಿದ್ದಲ್ಲಿ ಮಂಜೂರು ಮಾಡಬಹುದೆಂದು ಸೂಚಿಸಿದೆ. ಆದರೆ ಆರನೇ ಕಂಡಿಕೆಯಲ್ಲಿ ಈಗಾಗಲೇ ಕನಿಷ್ಟ 1 ಪದೋನ್ನತಿಯನ್ನು ಪಡೆದಿರುವ ನೌಕರರಿಗೆ ಈ ಆದೇಶವು ಅನ್ವಯಿಸುವುದಿಲ್ಲವೆಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಮಗೆ 30 ವರ್ಷಗಳ ಒಂದೇ ಹುದ್ದೆಯಲ್ಲಿನ ಸೇವಾ ಹುದ್ದೆ ಮುಗಿದ ನಂತರ ಮುಖ್ಯೋಪಾಧ್ಯಾಯರ ಪದೋನ್ನತಿ ಲಭ್ಯವಾಗಿರುವುದರಿಂದ ಈ ವಿಶೇಷ ವೇತನ ಬಡ್ತಿಯನ್ನು ಮಹಾಲೇಖಪಾಲರು ಕಡಿತಗೊಳಿಸಿರುವುದು ಕ್ರಮಬದ್ಧವಾಗಿಲ್ಲ.





ಸರ್ಕಾರಿ ಕಾರ್ನರ್

ಮರಣ ಉಪದಾನ ಮಾತ್ರ ನೀಡಿದ್ದಾರೆ ಕಮ್ಯುಟೇಷನ್ ನೀಡಿರುವುದಿಲ್ಲ

BY ವಿಜಯವಾಣಿ ಸುದ್ದಿಜಾಲ · JUL 25, 2016


ದಿನದ ಪ್ರಶ್ನೆ

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ನನ್ನ ಪತಿ ದಿನಾಂಕ: 31.01.2016ರಂದು ನಿವೃತ್ತಿ ಹೊಂದಿ ದಿನಾಂಕ: 04.02.2016ರಂದು ನಿಧನರಾಗಿರುತ್ತಾರೆ. ನನ್ನ ಪತಿಯವರು ಲಿಖಿತವಾಗಿ ನಿವೃತ್ತಿ ಹೊಂದಲು ಅನುಮತಿ ಕೋರಿದಾಗ ಅದಕ್ಕೆ ಸ್ಪಂದಿಸದೇ ಇದ್ದುದರಿಂದ ಪಿಂಚಣಿ ದಾಖಲೆಗಳಿಗೆ ನಾನೇ ಸಹಿ ಮಾಡಿದ್ದು ನನಗೆ ಮರಣ ಉಪದಾನ ಮಾತ್ರ ನೀಡಿದ್ದಾರೆ ಕಮ್ಯುಟೇಷನ್ ನೀಡಿರುವುದಿಲ್ಲ. ಇದಕ್ಕೆ ಸೂಕ್ತ ಪರಿಹಾರ ಸೂಚಿಸಿ.

|ವಿಜಯಲಕ್ಷ್ಮಿ, ಕಲಬುರಗಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 292 (ಬಿ) ರೀತ್ಯಾ ನಿವೃತ್ತಿ ವೇತನದ ಸೌಲಭ್ಯಗಳನ್ನು ಪಡೆಯುವ ಮೊದಲೇ ಸರ್ಕಾರಿ ನೌಕರ ನಿಧನರಾದರೆ ಅವನ ಕುಟುಂಬಕ್ಕೆ ಮರಣ ಉಪದಾನ ನೀಡಬೇಕೆಂದು ನಿಯಮಾವಳಿಯು ಸೂಚಿಸುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 376ರಂತೆ ಕಮ್ಯುಟೇಷನ್ ಮೊಬಲಗನ್ನು ನೀಡಲು ಬರುವುದಿಲ್ಲ. ಆದ್ದರಿಂದ ನಿಮಗೆ ಕುಟುಂಬ ಪಿಂಚಣಿ ಹಾಗೂ ಮರಣ ಉಪದಾನ ನೀಡಿರುವುದು ನಿಯಮಾವಳಿ ರೀತ್ಯಾ ಕ್ರಮಬದ್ಧವಾಗಿದೆ.




ಸರ್ಕಾರಿ ಕಾರ್ನರ್

BY ವಿಜಯವಾಣಿ ಸುದ್ದಿಜಾಲ · JUL 22, 2016


ನಮ್ಮ ತಾಯಿ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿಕೊಡುತ್ತಿದ್ದೇನೆ. ಈ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದ್ದು ಇದನ್ನು ಯಾವ ರೀತಿ ಮರುಪಾವತಿ ಪಡೆಯಲು ನಿಯಮಾವಳಿಯಲ್ಲಿ ಅವಕಾಶವಿದೆ?

ಐ ಬಿ.ಎನ್. ಬಿರಾದಾರ್ ವಿಜಯಪುರ

ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲು ಜ್ಯೋತಿ ಸಂಜೀವಿನಿ ಎಂಬ ನೂತನ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ 7 ಮಾರಣಾಂತಿಕ ಕಾಯಿಲೆಗೆ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಅಥವಾ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ ಕೊಡಿಸಿದರೆ ಸುವರ್ಣ ಆರೋಗ್ಯ ಟ್ರಸ್ಟ್ ಮುಖಾಂತರ ವೆಚ್ಚವಾಗಿರುವ ಮೊಬಲಗನ್ನು ಆಯಾ ಆಸ್ಪತ್ರೆಗೆ ನೇರವಾಗಿ ಸಂದಾಯ ಮಾಡಲು ಸೂಚಿಸಲಾಗಿದೆ. ಹೀಗಾಗಿ ಜ್ಯೋತಿ ಸಂಜೀವಿನಿ ಯೋಜನೆಯಡಿ ನೀವು ಸರ್ಕಾರವು ಮಾನ್ಯ ಮಾಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಆ ಆಸ್ಪತ್ರೆ ಮೂಲಕ ಮರು ಸಂದಾಯಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಆಗ ನಿಮಗೆ ಈ ವೈದ್ಯಕೀಯ ವೆಚ್ಚದ ಮೊಬಲಗು ನಗದು ರಹಿತವಾಗಿ ಲಭ್ಯವಾಗುತ್ತದೆ. (ಹೆಚ್ಚಿನ ವಿವರಗಳಿಗೆ ಲ. ರಾಘವೇಂದ್ರ ಅವರ ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸಾ ಕಾನೂನು ಕೈಪಿಡಿ ಪುಸ್ತಕ ನೋಡಬಹುದಾಗಿದ್ದು ಪುಸ್ತಕಕ್ಕೆ ಮೊಬೈಲ್ ಸಂಖ್ಯೆ 94812 44434ನ್ನು ಸಂರ್ಪಸಬಹುದು).




ದೈಹಿಕ ತೊಂದರೆಗಳು ಹೆಚ್ಚಾಗಿವೆ ನಾನು ಏನು ಮಾಡಬೇಕು?

BY ವಿಜಯವಾಣಿ ಸುದ್ದಿಜಾಲ · JUL 20, 2016

ದಿನದ ಪ್ರಶ್ನೆ

ನಾನು ಒಬ್ಬ ಅಂಗವಿಕಲ ಸರ್ಕಾರಿ ನೌಕರ(ಶೇ.80 ಕೇಳಿಸುವುದಿಲ್ಲ). ನನ್ನ ಅಧಿಕಾರಿಗಳು ಅನವಶ್ಯಕವಾಗಿ ನನಗೆ ತೊಂದರೆ ಕೊಡುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚೇರಿ ಕೆಲಸ, ಅಲ್ಲದೆ ಬೇರೆ ಪ್ರಭಾರಿ ಕೆಲಸ ಅಂದರೆ ಸಂಘದ ಸಮಾಪನಾಧಿಕಾರಿ ಹುದ್ದೆ ನಿರ್ವಹಣೆಗೆ ಆದೇಶಿಸಿರುತ್ತಾರೆ. ಕೆಲಸದ ಒತ್ತಡದಿಂದ ಹಾಗೂ ನನ್ನ ಕಿವಿಯ ಅಂಗವಿಕಲತೆಯಿಂದ ನನಗೆ ತುಂಬಾ ಮಾನಸಿಕ ತೊಂದರೆ ಕೊಡುವ ಉದ್ದೇಶದಿಂದ ನನ್ನ ಮೇಲೆ ಶಿಸ್ತು ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಲಾಗಿದೆ. ಇದು ಅಲ್ಲದೆ ನನಗೆ 285 ನಿಯಮದಡಿಯಲ್ಲಿ ಸೇವೆಯಿಂದ ತೆಗೆದುಹಾಕಲು ಪ್ರಸ್ತಾವನೆ ಸಹ ತಯಾರಿ ನಡೆಸಲಾಗಿದೆ. ಇದರಿಂದ ನಾನು ತುಂಬಾ ಮಾನಸಿಕ ತೊಂದರೆಯಲ್ಲಿದ್ದು, ನನ್ನ ದೈಹಿಕ ತೊಂದರೆಗಳು ಸಹ ಹೆಚ್ಚಾಗಿವೆ. ನನಗೀಗ 58 ವರ್ಷ ಕಳೆದಿದೆ. ದಯವಿಟ್ಟು ಈ ಬಗ್ಗೆ ನಾನು ಏನು ಮಾಡಬೇಕು ತಿಳಿಸಿ.

 ಶಿವಶಂಕರ ಶಾಬಾದಿ, ಯಾದಗಿರಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 277ರಂತೆ ಸರ್ಕಾರಿ ನೌಕರ ತನ್ನ ಹುದ್ದೆಗೆ ಅಸಮರ್ಥನಾಗಿದ್ದಾನೆಂದು ವೈದ್ಯಾಧಿಕಾರಿಗಳು ಶಿಫಾರಸ್ಸು ಮಾಡಿದರೆ ಹಾಗೂ ಈ ರೀತಿಯಾಗಿ ಕಡ್ಡಾಯವಾಗಿ ನಿವೃತ್ತಿಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸುವ ಉನ್ನತಾಧಿಕಾರಿಗಳ ಸಭೆಗೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಈ ಪ್ರಸ್ತಾವನೆ ಹಿನ್ನೆಲೆಯಲ್ಲಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಚಿವ ಸಂಪುಟವು ತೀರ್ವನ ಕೈಗೊಳ್ಳಬೇಕಾಗುತ್ತದೆ. ಹೀಗಾಗಿರುವುದರಿಂದ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆ ನೀವು ಈಗಾಗಲೇ 58 ವರ್ಷ ದಾಟಿರುವುದರಿಂದ ನೀವು ಸ್ವಯಂ ನಿವೃತ್ತಿ ಪಡೆದರೂ ಸೇವಾ ಅಧಿಕ್ಯವು ಲಭ್ಯ.

No comments:

Post a Comment