Monday, 1 August 2016

ಯೋಗ ಮಾಡಲು ಪೂರಕವಾಗುವ ಆಹಾರ

ಯೋಗ ಮಾಡಲು ಪೂರಕವಾಗುವ ಆಹಾರ


ಕೇವಲ ಯೋಗ ಮಾಡಿಬಿಟ್ಟರೆ ನಮಗೆ ಸಂಪೂರ್ಣ ಆರೋಗ್ಯ ದೊರಕಿ ಬಿಡುತ್ತದೆ ಎಂದುಕೊಳ್ಳುವುದು ತಪ್ಪು. ಯೋಗ ನಮಗೆ ಸಂಪೂರ್ಣ ಫಲಕಾರಿ ಆಗಬೇಕು ಎಂದರೆ ಆಹಾರ- ವಿಹಾರಗಳೂ ಬಹಳ ಮುಖ್ಯವಾಗುತ್ತವೆ. ಆಹಾರ- ವಿಹಾರಕ್ಕೆ ಆರೋಗ್ಯ ಸಾಧನೆಯಲ್ಲಿ ಮೊದಲಸ್ಥಾನ. ಇದನ್ನು ನಮ್ಮ ಋಷಿಮುನಿಗಳೂ ಸಾವಿರಾರು ವರ್ಷದ ಹಿಂದೆಯೇ ಹೇಳಿದ್ದಾರೆ. ಆಹಾರಕ್ಕೆ ಒಂದು ಸಮಗ್ರ ಚೌಕಟ್ಟನ್ನು ರೂಪಿಸಿ ನಮ್ಮ ಸ್ವಾಸ್ಥ್ಯ ಚಿಂತನೆಗೆ ಬೇಕಾದ ಸೂತ್ರಗಳನ್ನೂ ರೂಪಿಸಿ ಉಪಕರಿಸಿದ್ದಾರೆ.

ನಮ್ಮ ಆಯುಷ್ಯದ ಅಭಿವೃದ್ಧಿಗೆ ಅವಶ್ಯಕವಾದ ಬಲ, ಶಾಂತಿ, ಪುಷ್ಟಿಗಳು ನಮಗೆ ಲಭಿಸುವುದು ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯಗಳಿಂದ ಎನ್ನುತ್ತಾರೆ ಚರಕ ಮಹರ್ಷಿ. ಕಾಶ್ಯಪ ಸಂಹಿತೆಯಲ್ಲಿ ‘ಆರೋಗ್ಯಮ್ ಭೋಜನಾಧೀನಂ’ ಎಂದು ಹೇಳಿದೆ.ಮೀತಿಮೀರಿ ತಿನ್ನುವವ ಮತ್ತು ಏನೂ ತಿನ್ನದವನಿಗೆ ಯೋಗವಿಲ್ಲ ಎಂದಿದೆ ಭಗವದ್ಗೀತೆ. ಆಹಾರ-ವಿಹಾರ, ಕೆಮ್ಮು, ನಿದ್ದೆ, ಎಚ್ಚರ ಇವುಗಳಲ್ಲಿ ಮಿತನಾಗಿರುವವನಿಗೆ ಯೋಗವು ದುಃಖ ನಾಶಕವಾಗುತ್ತದೆ ಎಂಬ ಭರವಸೆಯನ್ನು ಗೀತೆ ನಮಗೆ ನೀಡುತ್ತದೆ. ಆಹಾರ ಶುದ್ಧಿ ಕೇವಲ ದೇಹದ ಆರೋಗ್ಯ ಪಾಲನೆಗೆ ಅಷ್ಟೇ ಅಲ್ಲ, ಅದು ಆತ್ಮೋನ್ನತೀಯ ಸಾಧನವೂ ಕೂಡಾ.

ನೆಮ್ಮದಿಯಿಂದ ಆಹಾರ ಸೇವಿಸಿ:

ನಮ್ಮ ಪೂರ್ವಜರು ಸಾವಿರಾರು ವರ್ಷದ ಅನುಭವದಿಂದ ಕೆಲವು ನಿಯಮಗಳನ್ನು ನಿರೂಪಿಸಿದ್ದಾರೆ. ಮುಂಜಾನೆ ಎದ್ದು ಶರೀರ ಚಿಂತೆಗಳನ್ನು(ಶೌಚಾದಿಗಳು) ತೀರಿಸಿಕೊಂಡು ಶುಚಿಯಾದ ನೀರನ್ನು ಕುಡಿಯಬೇಕು. ಉಷಃಪಾನ ಎಂದು ಇದಕ್ಕೆ ಹೆಸರು. ಇದರಿಂದ ಮಲಕ್ರಿಯೆಗಳು ಸುಗಮವಾಗಿ, ರೋಗನಿರೋಧತೆ ಹೆಚ್ಚುತ್ತದೆ. ಆಹಾರವನ್ನು ಸೇವಿಸುವಾಗ ಮನಸ್ಸು ನೆಮ್ಮದಿಯಿಂದ ಇರಬೇಕು. ಮನಸ್ಸಿನ ಏರುಪೇರುಗಳಿಂದ (ಅಶಾಂತತೆಯಿಂದ) ಜೀರ್ಣಕ್ರಿಯೆಯ ಮೇಲೆ ದುಷ್ಪರಿಣಾಮ ಆಗುವುದು ಖಚಿತ. ಮನಸ್ಸಿನಲ್ಲಿ ಕಾಮ, ಕ್ರೋಧ, ಉದ್ವೇಗ ಮೊದಲಾದ ವಿಕಾರ ಭಾವಗಳಿದ್ದಾಗ ಏನೇ ಪಂಚಭಕ್ಷ್ಯ ಸೇವಿಸಿದರೂ ಆ ಊಟ ಜೀರ್ಣಿಸುವುದಿಲ್ಲ.

ಪಾಶ್ಚಿಮಾತ್ಯ ಆಲೋಚನೆಗಳ ಪ್ರಕಾರ ಆಹಾರವನ್ನು ಸಸ್ಯಾಹಾರಿ ಮತ್ತು ಮಾಂಸಾಹಾರಿಗಳೆಂದು ಮಾತ್ರ ವಿಭಾಗಿಸಿದ್ದಾರೆ. ಆದರೆ ಭಾರತೀಯ ಶಾಸ್ತ್ರಗಳ ಪ್ರಕಾರ ಆಹಾರವನ್ನು ಸಾತ್ವಿಕ, ರಾಜಸಿಕ, ತಾಮಸಿಕ ಆಹಾರಗಳೆಂದು ಮೂರು ವಿಧಗಳಾಗಿ ಭಾಗ ಮಾಡಿದ್ದಾರೆ.ಸಾತ್ವಿಕ, ರಾಜಸ ಮತ್ತು ತಾಮಸಾಹಾರಗಳ ಲಕ್ಷಣ ಮತ್ತು ನಮ್ಮ ಶರೀರ ಹಾಗೂ ಸ್ವಭಾವಗಳ ಮೇಲೆ ಅವು ಉಂಟು ಮಾಡುವ ಪರಿಣಾಮಗಳನ್ನು ಭಗವದ್ಗೀತೆಯು ಸವಿಸ್ತಾರವಾಗಿ ಬೋಧಿಸಿದೆ.

No comments:

Post a Comment