ಅನುಭವದಿಂದ ಕಲಿತ ಪಾಠ
ಅನುಭವದಿಂದ ಕಲಿತ ಪಾಠ
ಹಾಗೆ ಮಾಡು, ಹೀಗೆ ಮಾಡು, ಅದನ್ನು ಮಾಡಬೇಡ ಎಂದು ಮುಂತಾಗಿ ಬೇರೆಯವರಿಗೆ ಉಪದೇಶ ಕೊಡುವುದು ಸುಲಭದ ಕೆಲಸ. ಗುರು ಹಿರಿಯರು, ವೃದ್ಧರು, ಅಧ್ಯಾಪಕರು ಮತ್ತು ಸಂನ್ಯಾಸಿಗಳು ಯಾವಾಗಲೂ ಬೋಧನೆಯನ್ನು ಕೊಡುತ್ತಲೇ ಇರುತ್ತಾರೆ. ಆದರೆ ತಾವು ಅಂತಹದೇ ಸನ್ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ ಇಲ್ಲವೇ ಎನ್ನುವುದನ್ನು ಅವರು ಪರಿಶೀಲಿಸಿಕೊಳ್ಳುವುದಿಲ್ಲ. ಮಹಾಭಾರತದಲ್ಲಿ ಬರುವ ನಿದರ್ಶನವೊಂದು ಇದಕ್ಕೆ ಸಾಕ್ಷಿಯಾಗಿದೆ.
ಪಾಂಡವರು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲ. ‘‘ಸತ್ಯಂ ವದ, ಕ್ರೋಧಂ ಮಾ ಕುರು’ (ಸತ್ಯವನ್ನು ಹೇಳು; ಕೋಪ ಮಾಡಿಕೊಳ್ಳಬೇಡ) ಎಂಬ ಪಾಠವನ್ನು ಹೇಳಿಕೊಟ್ಟ ಆಚಾರ್ಯರು ಇದನ್ನು ಎಲ್ಲರೂ ಮನನ ಮಾಡಿಕೊಂಡು ಬರಬೇಕೆಂದು ಆದೇಶವಿತ್ತರು.
ಮರುದಿನ ಗುರುಗಳು ‘‘ನಿನ್ನೆ ಮಾಡಿದ ಪಾಠವನ್ನು ಮನನ ಮಾಡಿದ್ದೀರಾ? ಅರ್ಥವಾಯಿತೆ?’’ ಎಂದು ಶಿಷ್ಯರನ್ನು ಪ್ರಶ್ನಿಸಿದರು. ಆಗ ಭೀಮ, ಅರ್ಜುನ, ನಕುಲ ಮತ್ತು ಸಹದೇವರು ‘‘ಹೌದು ಆಚಾರ್ಯರೇ, ನಾವು ನಿಮ್ಮ ಪಾಠವನ್ನು ಶ್ರದ್ಧೆಯಿಂದ ಮನನ ಮಾಡಿಕೊಂಡಿದ್ದೇವೆ. ನಮಗೆ ಇದರಲ್ಲಿ ಸಂದೇಹವೇನೂ ಇಲ್ಲ’’ ಎಂದು ಉತ್ತರಿಸಿದರು.
ಆದರೆ ಹಿರಿಯವನಾದ ಯುಧಿಷ್ಠಿರ ಮಾತ್ರ ‘‘ನಿಮ್ಮ ವಾಕ್ಯದ ಪೂರ್ವಾರ್ಧ ಅರ್ಥವಾಗಿದೆ. ನಾನು ಯಾವಾಗಲೂ ಸತ್ಯವನ್ನೇ ಹೇಳುತ್ತೇನೆ. ಆದರೆ ನಿಮ್ಮ ಹೇಳಿಕೆಯ ಉತ್ತರಾರ್ಧ ಮಾತ್ರ ಕಲಿಯಲಾಗಲಿಲ್ಲ’’ ಎಂದು ಹೇಳಿದ. ಗುರುಗಳು ಪದೇಪದೇ ‘ಕೋಪ ಮಾಡಬೇಡ’ ಎನ್ನುವ ಮಾತನ್ನು ಯುಧಿಷ್ಠಿರನು ಉಚ್ಚರಿಸುವಂತೆ ಮಾಡಿದರು. ಕೋಪವೆಂಬುದು ಅರಿಷಡ್ವರ್ಗಗಳಲ್ಲಿ ಒಂದು. ಮನುಷ್ಯನಿಗೆ ಮಾರಕ ಎಂಬಿತ್ಯಾದಿ ವಿವರಣೆಗಳನ್ನು ನೀಡಿದರು. ಆದರೆ ಪ್ರಯೋಜನವಾಗಲಿಲ್ಲ. ‘‘ನನಗೆ ಪಾಠದ ಈ ಭಾಗ ಅರ್ಥವಾಗಲಿಲ್ಲ’’ ಎಂದೇ ಧರ್ಮರಾಯನು ಹೇಳುತ್ತಿದ್ದ. ಹೀಗೆಯೇ ಒಂದು ವಾರ ಕಳೆದು ಹೋಯಿತು. ಪಾಠ ಮುಂದೆ ಸಾಗಲಿಲ್ಲ. ಆದ್ದರಿಂದ ಆಚಾರ್ಯರಿಗೆ ಸಿಟ್ಟು ಬಂತು.
‘‘ಏನಪ್ಪಾ, ಇಷ್ಟು ಸಣ್ಣ ಸರಳ ಪಾಠವನ್ನು ಕಲಿಯಲಾಗಲಿಲ್ಲವೇ? ನಿಮ್ಮ ತಮ್ಮಂದಿರೆಲ್ಲ ಒಂದೇ ದಿವಸದಲ್ಲಿ ಕಲಿತಿದ್ದನ್ನು ಏಳು ದಿವಸಗಳ ನಂತರವೂ ಅರಿತುಕೊಳ್ಳಲು ಸಾಧ್ಯವಿಲ್ಲ ಎಂದರೇನು? ಅವರಿಗೆಲ್ಲ ಹಿರಿಯಣ್ಣನಾದ ನೀನು ಹೀಗೆ ಬೇಜವಾಬ್ದಾರಿಯಿಂದ ವರ್ತಿಸಬಾರದು’’ ಎಂದೆಲ್ಲ ಅವರು ಬಯ್ದರು.
‘‘ಈಗ ನನಗೆ ಪಾಠ ಚೆನ್ನಾಗಿ ಅರ್ಥವಾಯಿತು ಗುರುಗಳೇ’’ ಎಂದ ಯುಧಿಷ್ಠಿರ ನಗುತ್ತಾ. ಗುರುಗಳಿಗೆ ಆಶ್ಚರ್ಯವಾಯಿತು. ‘‘ಒಂದು ವಾರ ಕಾಲ ಅರ್ಥವಾಗದೆ ಇದ್ದ ಸಂಗತಿ ಈಗ ಹೇಗೆ ತಿಳಿಯಿತು?’’ ಎಂದು ಪ್ರಶ್ನೆ ಹಾಕಿದರು.
ಯುಧಿಷ್ಠಿರ ಹೇಳಿದ- ‘‘ಗುರುಗಳೇ, ಸತ್ಯವನ್ನು ನುಡಿಯಬೇಕೆಂಬ ವಿಚಾರ ನನಗೆ ಚೆನ್ನಾಗಿ ಗೊತ್ತು. ಆದರೆ ಯಾರಾದರೂ ಕೋಪ ಮಾಡಿಕೊಂಡಾಗ ಪ್ರತಿಯಾಗಿ ಸಿಟ್ಟುಗೊಳ್ಳದೆ ಇರುವುದು ಹೇಗೆ ಎಂಬ ಸಂದೇಹವಿತ್ತು. ಈಗ ನೀವು ಕೋಪದಿಂದ ಬಯ್ದಾಗ ನನಗೆ ಸಿಟ್ಟು ಬರಲಿಲ್ಲ. ಹಾಗಾಗಿ ಪಾಠ ಅರ್ಥವಾಯಿತು.’’ ಆಚಾರ್ಯರಿಗೆ ಶಿಷ್ಯನ ಬಗೆಗೆ ಹೆಮ್ಮೆ ಅನಿಸಿತು.
ಅರ್ತಿಕಜೆ
No comments:
Post a Comment