Sunday, 7 August 2016

ತೃಪ್ತಿ ಇದ್ದಲ್ಲಿ ಸಂತೋಷ

ತೃಪ್ತಿ ಇದ್ದಲ್ಲಿ ಸಂತೋಷ
ಅಣ್ಣ-ತಮ್ಮ ಇಬ್ಬರೂ ಒಂದೇ ಊರಿನಲ್ಲಿ ಮನೆ ಮಾಡಿಕೊಂಡು ಜೀವಿಸುತ್ತಿದ್ದರು. ಯಾವುದೋ ಕಾರಣಕ್ಕೆ ಅಣ್ಣ ಬಡವನಾಗಿದ್ದ; ತಮ್ಮ ಶ್ರೀಮಂತನಾಗಿದ್ದ. ಬಡತನ ಇದ್ದುದರಿಂದ ಅಣ್ಣನೂ ಅವನ ಹೆಂಡತಿಯೂ ಕಷ್ಟಪಟ್ಟು ದುಡಿಯುತ್ತಿದ್ದರು. ‘ಪಾಲಿಗೆ ಬಂದದ್ದು ಪಂಚಾಮೃತಎಂಬಂತೆ ಅಷ್ಟೋ ಇಷ್ಟೋ ಕೈಗೆ ಬಂದ ಸಂಪಾದನೆಯಲ್ಲಿ ಗಂಜಿ ಕುಡಿದು ತೃಪ್ತಿಯಿಂದ ಇದ್ದರು. ಅವರ ಕುಟುಂಬದಲ್ಲಿ ನೆಮ್ಮದಿಸಂತೋಷಗಳು ನೆಲಸಿದ್ದವು.
ಆದರೆ ತಮ್ಮನ ವಿಷಯ ಹಾಗಲ್ಲ. ಧಾರಾಳ ಹಣವಿದ್ದರೂ ಮನಸ್ಸಿಗೆ ತೃಪ್ತಿ ಇರಲಿಲ್ಲ. ಇನ್ನಷ್ಟು ಸೌರ್ಕರ್ಯ, ಸಂಪತ್ತುಗಳು ಬೇಕೆಂಬ ಆಸೆ ಇತ್ತು. ಕ್ಷುಲ್ಲಕ ಕಾರಣಗಳಿಗಾಗಿ ಗಂಡ-ಹೆಂಡತಿ ಜಗಳವಾಡುತ್ತಿದ್ದರು. ಎರಡು ಕುಟುಂಬಗಳ ನಡುವೆ ಇದ್ದು ವ್ಯತ್ಯಾಸದ ಒಳಗುಟ್ಟು ಏನೆಂದು ತಮ್ಮನಿಗೂ ಅವನ ಹೆಂಡತಿಗೂ ತಿಳಿಯಲಿಲ್ಲ. ಕುರಿತು ತಿಳಿದುಕೊಳ್ಳಲೇಬೇಕೆಂದು ತಮ್ಮನೂ ಅವನ ಹೆಂಡತಿಯೂ ಓರ್ವ ಸಾಧುವಿನ ಬಳಿಗೆ ಹೋದರು.
ಸಾಧು ಅವರ ಕಥೆಯನ್ನೆಲ್ಲ ಕೇಳಿದ ಮೇಲೆ ‘‘ಇದನ್ನು ತಿಳಿದುಕೊಳ್ಳಲು ನಾನೊಂದು ಉಪಾಯ ಹೇಳುತ್ತೇನೆ. ಅದರಂತೆ ಮಾಡಿದರೆ ಸ್ವಲ್ಪವೇ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕುತ್ತದೆ’’ ಎಂದು ಹೇಳಿದ. ‘‘ಅಣ್ಣಅತ್ತಿಗೆ ಇಲ್ಲದಿರುವಾಗ ಅವರ ಹಿತ್ತಲಿನಲ್ಲಿ 99 ಬೆಳ್ಳಿ ರೂಪಾಯಿಗಳ ಒಂದು ಥೈಲಿಯನ್ನು ಎಸೆದುಬಿಡಿ. ಮುಂದೆ ನಡೆಯುವ ಸೋಜಿಗವನ್ನು ನೀವೇ ಕಾಣುವಿರಂತೆ’’ ಎಂದು ಸಾಧು ಸೂಚನೆ ಕೊಟ್ಟ. ತಮ್ಮ ಹಾಗೆಯೇ ಮಾಡಿದ.
ಗಂಡ-ಹೆಂಡತಿಗೆ ಥೈಲಿಯನ್ನು ಕಂಡು ಆಶ್ಚರ್ಯವಾಯಿತು. ಸಾಕ್ಷಾತ್ ಪರಮಾತ್ಮನೇ ತಮ್ಮ ಬಡತನವನ್ನು ನಿವಾರಿಸಲು ಇದನ್ನು ಕೊಟ್ಟಿರಬೇಕೆಂದು ಅವರು ಭಾವಿಸಿದರು. ಗುಟ್ಟಾಗಿ ಥೈಲಿಯನ್ನು ಮನೆಯೊಳಗೆ ತಂದು ಬಿಡಿಸಿದರು. ನಾಣ್ಯಗಳನ್ನು ಎಣಿಸಿದಾಗ ನೂರಕ್ಕೆ ಒಂದು ಕಡಿಮೆಯಿತ್ತು. ಇದರಿಂದ ಅವರಿಗೆ ಬೇಸರವಾಯಿತು. ಹೇಗಾದರೂ ಮಾಡಿ ನಾಣ್ಯಗಳನ್ನು ನೂರಾಗಿಸಬೇಕೆಂದು ನಿರ್ಧರಿಸಿದರು. ಏನೂ ಇಲ್ಲದಿರುವಾಗ ಸುಲಭವಾಗಿ ಬರುತ್ತಿದ್ದ ನಿದ್ದೆ ಈಗ ದೂರವಾಯಿತು. ಪ್ರತಿದಿನವೂ ಗುಟ್ಟಾಗಿ ದುಡ್ಡೆಣಿಸುವುದು ರೂಢಿಯಾಯಿತು.
ಇಬ್ಬರಲ್ಲೂ ಅತೃಪ್ತಿ ಮೂಡಿದ್ದರಿಂದ ಹಣವನ್ನು ಉಳಿತಾಯ ಮಾಡುವುದು ಅಗತ್ಯವೆನಿಸಿತು. ಖರ್ಚು ಕಡಿಮೆಯಿದ್ದರೂ ತೃಪ್ತಿ ಇದ್ದರೆ ಸಂತೋಷವಾಗಿಯೇ ಮೂಡುತ್ತದೆ. ಧಾರಾಳ ದುಡ್ಡಿದ್ದರೂ ಅತೃಪ್ತಿಯು ದುಃಖವನ್ನೇ ತರುತ್ತದೆ ಎನ್ನುವ ಸತ್ಯ ತಿಳಿಯಿತು. ವಿನಾಕಾರಣ ಅಣ್ಣನ ಕುಟುಂಬದಲ್ಲಿ ಒಡಕುಅತೃಪ್ತಿ ಹುಟ್ಟಿಸಿದ್ದಕ್ಕಾಗಿ ಪಶ್ಚಾತ್ತಾಪಪಟ್ಟ ಅವರು ನೇರವಾಗಿ ಅವನ ಮನೆಗೆ ಹೋಗಿ ಕ್ಷಮೆ ಯಾಚಿಸಿದರು. ಮುಂದೆ ಎರಡೂ ಕುಟುಬದವರು ದುರಾಶೆಯನ್ನು ಬಿಟ್ಟು ನೆಮ್ಮದಿಯಿಂದ ಬಾಳಿದರು.

·         ಅರ್ತಿಕಜೆ

No comments:

Post a Comment