Wednesday, 3 August 2016

ಪ್ರಾಣ’ದ ಹತೋಟಿಯಿಂದ ಮನಸ್ಸಿನ ನಿಯಂತ್ರಣ

ಪ್ರಾಣ’ದ ಹತೋಟಿಯಿಂದ ಮನಸ್ಸಿನ ನಿಯಂತ್ರಣ
✨✨✨✨✨✨✨✨✨

ಪ್ರಾಣಾಯಾಮವು ಉಸಿರಾಟದ ಒಂದು ವಿಜ್ಞಾನ. ಇಲ್ಲಿ ಪ್ರಾಣ ಮತ್ತು ಆಯಾಮ ಎಂಬ ಎರಡು ಶಬ್ದಗಳಿವೆ. ‘ಪ್ರಾಣ’ ಎಂಬುದು ‘ಪ್ರ’ ಮತ್ತು ‘ಣ’ ಎಂಬ ಸಂಸ್ಕೃತದ ಅಕ್ಷರಗಳಿಂದ ಬಂದಿದೆ. ‘ಪ್ರ’(ಪ್ರಕರ್ಶೆಣ) ಅಂದರೆ ಏಕ ಪ್ರಕಾರವಾಗಿ, ಒಂದೇ ಸಮನೆ ಎಂಬರ್ಥ. ‘ಣ’ ಎಂದರೆ ಚಲಿಸುವುದು. ಅರ್ಥಾತ್ ‘ಏಕಪ್ರಕಾರವಾಗಿ ಚಲಿಸುವುದು’ ಎಂದು.

ಸಾಮಾನ್ಯವಾಗಿ ಪ್ರಾಣವೆಂದರೆ ಉಸಿರು ಎಂಬ ಕಲ್ಪನೆಯಿದೆ. ಪ್ರಾಣವನ್ನು ನಾವು ಪ್ರತಿಯೊಂದು ಜೀವಿಯಲ್ಲಿರುವ ಜೀವ ಚೈತನ್ಯ ಎಂದು ಕರೆಯಬಹುದು. ನಮ್ಮ ಶರೀರದ ಸೂಕ್ಷ್ಮಾತಿಸೂಕ್ಷ್ಮದಿಂದ ಹಿಡಿದು(ಆಲೋಚನಾ ಶಕ್ತಿ, ಮಾತನಾಡುವ ಶಕ್ತಿ, ರಕ್ತ ಪರಿಚಲನಾ ಶಕ್ತಿ ಇತ್ಯಾದಿ) ಜಗತ್ತಿನಲ್ಲಿ ಸಂಭವಿಸುವ ಎಲ್ಲ ಕಾರ್ಯದ (ಮಳೆ, ಭೂಮಿ ಚಲನೆ ಇತ್ಯಾದಿ) ಹಿಂದೆ ಪ್ರಾಣದ ನಿರ್ದಿಷ್ಟ ಚಲನೆ ಇರಬೇ ಕಾದದ್ದು ಅವಶ್ಯಕ. ಒಟ್ಟಿನಲ್ಲಿ ಹೇಳುವುದಾದರೆ ಎಲ್ಲ ಕ್ರಿಯೆಯ ಹಿಂದೆ ಇರುವ ಶಕ್ತಿಯೇ ಪ್ರಾಣ. ಮೂರು ಲೋಕಗಳು, ಚರಾಚರ ವಸ್ತುಗಳು ಕೂಡ ಪ್ರಾಣದಿಂದಲೇ ಆವರಿಸಲ್ಪಟ್ಟಿದೆ. ಪ್ರಾಣವೇ ಪಂಚಮಹಾಭೂತಗಳ ಸೃಷ್ಟಿ ಹಾಗೂ ನಾಶಕ್ಕೆ ಕಾರಣ. ಇದನ್ನೇ ‘ಪ್ರಾಣಾದೀ ಸರ್ವಸ್ವ’ ಎನ್ನುತ್ತಾರೆ.

ಆಯಾಮ ಎಂದರೆ ಕ್ರಮಬದ್ಧಗೊಳಿಸುವುದು (ವಿಸ್ತಾರಗೊಳಿಸುವುದು). ಪ್ರಾಣಾಯಾಮದ ಒಟ್ಟು ಅರ್ಥವೇ ಪ್ರಾಣವನ್ನು ಕ್ರಮಬದ್ಧಗೊಳಿಸುವುದು. ಪ್ರಾಣದ ಮೇಲೆ ಹತೋಟಿ ಸಾಧಿಸುವುದೇ ಯೋಗಾಭ್ಯಾಸಿಯ ಗುರಿ. ಇದನ್ನು ಸಾಧಿಸಲು ಮೊತ್ತಮೊದಲು ಉಸಿರಾಟದ ಗತಿ ನಿಯಂತ್ರಿಸಿ ಅದನ್ನು ಕ್ರಮಬದ್ಧಗೊಳಿಸಬೇಕು. ಪ್ರಾಣದ ಹತೋಟಿಯಿಂದ ಮನಸ್ಸಿನ ಹತೋಟಿಯು ಅನಾಯಾಸವಾಗಿ ಸಾಧನೆಯಾಗುತ್ತದೆ.

ಪ್ರಾಣದ ಹತೋಟಿಯನ್ನು ಕ್ರಮಬದ್ಧವಾಗಿ ನಮ್ಮದನ್ನಾಗಿಸಿಕೊಳ್ಳಲು ಪ್ರಾಣಾಯಾಮದ ನಿರಂತರ ಅಭ್ಯಾಸ ಅವಶ್ಯ. ಪ್ರಾಣಾಯಾಮದಲ್ಲಿ ಕುಂಭಕ (ಅಂತರ್ ಕುಂಭಕ, ಬಹಿರ್ ಕುಂಭಕ) ಮುಖ್ಯ ಪಾತ್ರ ವಹಿಸುತ್ತದೆ. ಈ ಕುಂಭಕಗಳ ಅಭ್ಯಾಸದಿಂದ ಸಹಜವಾಗಿ ನಾವು ಸಮಾಧಿಯ ಅವಸ್ಥೆಯವರೆಗೂ ತಲುಪಲು ಸಾಧ್ಯ. ಭಗವಾನ್ ಶ್ರೀಕೃಷ್ಣನನ್ನು ‘ಯೋಗಿ ಯೋಗೇಶ್ವರ’ನೆಂದು ಕರೆಯುತ್ತಾರೆ. ಅಂದರೆ ಪ್ರಾಣವನ್ನೇ ಧಾರಣೆ ಮಾಡಿದವನು ಎಂದರ್ಥ.

🔹🔹🔹🔹🔹🔹🔹🔹🔹

No comments:

Post a Comment