ಮನೋನಿಗ್ರಹ ಅಪೂರ್ವ
ಸಾಧುವೊಬ್ಬ ಸಂಚಾರ
ಮಾಡುತ್ತಾ ಒಂದು
ಹಳ್ಳಿಗೆ ಬಂದನು. ಅಲ್ಲಿನ ದೇವಸ್ಥಾನದ
ಮೊಗಸಾಲೆಯಲ್ಲಿ ವೌನವಾಗಿ
ಧ್ಯಾನ ಮಾಡುತ್ತಾ
ಕುಳಿತುಕೊಳ್ಳತೊಡಗಿದನು. ಇವನ ಆಧ್ಯಾತ್ಮಿಕ ಹಿರಿಮೆಯಿಂದ
ಪ್ರೀತನಾದ ಅರ್ಚಕ
ದೇವರ ನೈವೇದ್ಯದ
ಒಂದು ಭಾಗವನ್ನು
ಅವನಿಗೆ ಕೊಡತೊಡಗಿದ. ಇದರಿಂದ ಸಾಧುವು
ಊಟಕ್ಕಾಗಿ ಪರದಾಡುವುದು
ತಪ್ಪಿತು. ಹೀಗೆಯೇ ಕೆಲವು ದಿವಸ
ಕಳೆದ ಬಳಿಕ
ದೇವಸ್ಥಾನದ ವ್ಯವಸ್ಥಾಪಕನು
ಮೇಲ್ವಿಚಾರಣೆಗಾಗಿ ಅಲ್ಲಿಗೆ
ಬಂದ. ಆಗ ನೈವೇದ್ಯದ ಒಂದು
ಭಾಗವನ್ನು ಸಾಧುವಿಗೆ
ಕೊಡಲಾಗುತ್ತಿದೆ ಎಂದು
ತಿಳಿಯಿತು. ‘‘ಈ ಸೋಮಾರಿಗೆ
ಏಕೆ ನೈವೇದ್ಯ
ಬಡಿಸುವೆ? ಇನ್ನು ಮುಂದೆ ಹೀಗೆ
ಮಾಡಕೂಡದು’’ ಎಂದು ಆತ ಅರ್ಚಕನಿಗೆ
ಅಪ್ಪಣೆ ಮಾಡಿದ.
ಸಾಧುವೇನೂ ಇದರಿಂದ
ಕಂಗೆಡಲಿಲ್ಲ. ಮಧ್ಯಾಹ್ನದ ಹೊತ್ತು
ಊರಿಗೆ ಹೋಗಿ
ಭಿಕ್ಷೆ ಬೇಡ
ತೊಡಗಿದ. ಆದರೆ ಹಿಂದಿನ ಸ್ಥಳದಲ್ಲೇ
ಕುಳಿತು ಧ್ಯಾನ
ಮುಂದುವರಿಸಿದ. ಸುಮಾರು ಒಂದು ತಿಂಗಳ
ಬಳಿಕ ವ್ಯವಸ್ಥಾಪಕ
ಮತ್ತೆ ದೇವಾಲಯಕ್ಕೆ
ಬಂದ. ನೈವೇದ್ಯ ಕೊಡದಿದ್ದರೂ ಈತ
ಭಿಕ್ಷೆಯಿಂದ ಹಸಿವು
ಹಿಂಗಿಸಿಕೊಂಡು ದೇವರನ್ನು
ಧ್ಯಾನಿಸುತ್ತಾ ಇರುವುದನ್ನು
ಕಂಡು ಅವನಿಗೆ
ಆಶ್ಚರ್ಯವಾಯಿತು. ಸಾಧುವಿನ ಆಂತರ್ಯ,ಉದ್ದೇಶಗಳನ್ನು ತಿಳಿದುಕೊಳ್ಳಬೇಕು
ಎಂದುಕೊಂಡನು. ಅವನ ಬಳಿಗೆ ಹೋಗಿ
ಕುಳಿತುಕೊಂಡು ‘‘ಸಾಧುವರ್ಯರೇ, ಇಡೀ ದಿವಸ ಹೀಗೆ
ಕುಳಿತು ಧ್ಯಾನ
ಮಾಡುವ ಉದ್ದೇಶವಾದರೂ
ಏನು?’’ ಎಂದು ಕೇಳಿಯೇಬಿಟ್ಟ.
ಸಾಧು ಈಗ
ವೌನವನ್ನು ಮುರಿದು ‘‘ಐದು ನಿಮಿಷ ಕುಳಿತುಕೊಳ್ಳಿರಿ. ನಿಮ್ಮ ಪ್ರಶ್ನೆಗೆ
ಉತ್ತರ ಕೊಡುತ್ತೇನೆ’’ ಎಂದು ಹೇಳಿದ. ಅಲ್ಲಿಯೇ ಐದು
ನಿಮಿಷಗಳ ಕಾಲ
ಕುಳಿತುಕೊಂಡ ವ್ಯವಸ್ಥಾಪಕ
ಸಾಧುವಿನಿಂದ ಉತ್ತರವನ್ನು
ನಿರೀಕ್ಷಿಸಿದ. ಆದರೆ ಆತನಿಂದ ಯಾವುದೇ
ರೀತಿಯ ಉತ್ತರ
ಬರಲಿಲ್ಲ.
ವ್ಯವಸ್ಥಾಪಕ ಮತ್ತೆ
ತನ್ನ ಪ್ರಶ್ನೆಯ
ಕಡೆಗೆ ಸಾಧುವಿನ
ಗಮನ ಸೆಳೆದ. ‘‘ದಯವಿಟ್ಟು
ಐದು ನಿಮಿಷ
ಕಾಲ ತಡೆಯಿರಿ
ಉತ್ತರ ಕೊಡುತ್ತೇನೆ’’ಎಂದು
ಸಾಧು ನುಡಿದ. ಮತ್ತೆ ಐದು
ನಿಮಿಷ ಕಳೆದರೂ
ಉತ್ತರ ಬಾರದಿದ್ದಾಗ ‘‘ಏನಿದು ಗುರುಗಳೇ, ಹಲವು ನಿಮಿಷಗಳ ನಂತರವೂ
ನೀವು ಉತ್ತರಿಸುತ್ತಿಲ್ಲ’’ ಎಂದು ವ್ಯವಸ್ಥಾಪಕ
ಅಸಮಾಧಾನ ವ್ಯಕ್ತಪಡಿಸಿದ. ಆಗ ಸಾಧು
ಪುನಃ ‘‘ಬೇಸರಿಸಬೇಡಿ. ಕೇವಲ ಐದು ನಿಮಿಷ
ಪುರುಸೊತ್ತು ಕೊಡಿ’’ ಎಂದು ಹೇಳಿದ.
ಹೀಗೆ ಐದೇ ನಿಮಿಷಗಳ ಹಲವು ಅವಧಿಗಳು ಕಳೆದು ಹೋದುವು. ವ್ಯವಸ್ಥಾಪಕನ ತಲೆಗೆ ಚಿಟ್ಟು ಹಿಡಿದಂತಾಗಿ ಅವನು ಹೊರ ನಡೆದ. ನಡೆದ ಘಟನೆ ಅವನಲ್ಲಿ ಜ್ಞಾನೋದಯ ಉಂಟುಮಾಡಿತು. ‘‘ಹತ್ತು ಹದಿನೈದು ನಿಮಿಷ ಕಾಲ ಕುಳಿತಲ್ಲೇ ಕುಳಿತುಕೊಳ್ಳಲು ಸಾಧ್ಯವಾಗದಿದ್ದಾಗ ದಿನಪೂರ್ತಿ ಒಂದೇ ಸ್ಥಳದಲ್ಲಿ ಕೂತಿರುವುದು ಮನೋನಿಗ್ರಹ ಪ್ರಾಪ್ತಿಗೆ ಪ್ರಯತ್ನವಾಗಿದೆ’’ ಎಂದುಕೊಂಡ ವ್ಯವಸ್ಥಾಪಕ ಸಾಧುವಿಗೆ ಮತ್ತೆ ನೈವೇದ್ಯ ಸೌಲಭ್ಯ ಕಲ್ಪಿಸಿಕೊಟ್ಟ.
ಅರ್ತಿಕಜೆ
No comments:
Post a Comment