Monday, 1 August 2016

ಜ್ಞಾನ ದೀವಿಗೆ ✨ ನುಡಿಯ ಬೆಳಕು✨

ಜ್ಞಾನ ದೀವಿಗೆ

✨ ನುಡಿಯ ಬೆಳಕು✨


    ಆ ಮಾತಿನ ಮಹಿಮೆ ಕುರಿತು ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಹೇಳುತ್ತಾರೆ.
ಪಾತಾಳದಗ್ಘವಣಿಯ ನೇಣಿಲ್ಲದೆ, ಸೋಪಾನದ ಬಲದಿಂದಲ್ಲದೆ
ತೆಗೆಯಬಹುದೇ? ಶಬ್ಧ ಸೋಪಾನವ ಕಟ್ಟಿ ನಡೆಸಿದರು ಪುರಾತನರು.
ದೇವಲೋಕಕ್ಕೆ ಬಟ್ಟೆ ಕಾಣಿರೋ. ಮರ್ತ್ಯಲೋಕದವರ
ಮನದ ಮೈಲಿಗೆಯ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ
ಬೆಳಗಿ ಕೊಟ್ಟರು ನಮ್ಮ ಕೂಡಲ ಚನ್ನಸಂಗನ ಶರಣರು.
ಒಂದು ಆಳವಾದ ಬಾವಿಯಲ್ಲಿರುವ ಸುಜಲವನ್ನು ಸವಿಯುವುದಕ್ಕೆ ಆ ಭಾವಿಗೆ ಮೆಟ್ಟಿಲುಗಳಿರಬೇಕು; ಇಲ್ಲವೆ ನಮ್ಮ ಹತ್ತಿರ ನೀರನ್ನು ಎಳೆಯುವುದಕ್ಕೆ ಒಂದು ಹಗ್ಗವಾದರೂ ಇರಬೇಕು. ಎರಡೂ ಇರದಿದ್ದರೆ ಸುಜಲವನ್ನು ಸವಿಯುವದು ಹೇಗೆ ? ನಮ್ಮ ದಾಹವನ್ನು ಕಳೆದುಕೊಳ್ಳುವುದು ಹೇಗೆ? ಈ ಪ್ರಪಂಚದ ಪ್ರತಿವಸ್ತುವಿನಲ್ಲಿ, ಕಣ ಕಣದಲ್ಲಿ ಸಂತಸದ, ಶಾಂತಿಯ ಸುಜಲವು ತುಂಬಿಕೊಂಡಿದೆ. ಆದರೆ ಮಹಾತ್ಮರು ಕರುಣಿಸಿರುವ ಶಬ್ಧದ ಸೋಪಾನ ಅಥವಾ ಹಗ್ಗವಿಲ್ಲದಿದ್ದರೆ ನಾವು ಸಂತಸದ ಜಲವನ್ನು ಸವಿಯುವುದು ಹೇಗೆ, ಶಾಂತಿ ಸಮಾಧಾನ ಪಡುವುದು ಹೇಗೆ ?
ಮಾನವನ ಅಂತರಂಗದ ಕತ್ತಲೆ ಕಳೆಯುವದಕ್ಕೆ ಸಂತರು, ಶರಣರು ನೀಡಿರುವ ಮಾತೇ ಜ್ಯೋತಿರ್ಲಿಂಗವಾಗಿ ದೇವಲೋಕದ ದಾರಿಯನ್ನು ತೋರುತ್ತದೆ, ಪರಮಶಾಂತಿಯನ್ನು ಸಂತಸವನ್ನು ನೀಡುತ್ತದೆ. ಆ ಮಹಾತ್ಮರ ನುಡಿಯ ಬೆಳಕಿನಲ್ಲಿ ನಾವು ಮುನ್ನಡೆದರೆ ನಮ್ಮ ಬಾಳು ಭವ್ಯವಾಗುತ್ತದೆ ದಿವ್ಯವಾಗುತ್ತದೆ.


ನಿರೂಪಣೆ: ಡಾ.ಶ್ರದ್ಧಾನಂದ ಶ್ರೀ
ಗುರುದೇವಾಶ್ರಮ, ಕಾಗವಾಡ, ಸದಲಗಾ

No comments:

Post a Comment