Thursday, 18 August 2016

ಸರ್ಕಾರಿ ಕಾರ್ನರ್



ಸರ್ಕಾರಿ ಕಾರ್ನರ್

ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾದುದು ಕಡ್ಡಾಯ

BY ವಿಜಯವಾಣಿ ಸುದ್ದಿಜಾಲ · AUG 19, 2016


ದಿನದ ಪ್ರಶ್ನೆ

ನಾನು ಇತ್ತೀಚೆಗಷ್ಟೇ ಸರ್ಕಾರಿ ಸೇವೆಗೆ ಸೇರಿದ್ದು ನನ್ನ ನೇಮಕಾತಿ ಆದೇಶದಲ್ಲಿ ಅಕೌಂಟ್ಸ್ ಹೈಯರ್, ರೆವಿನ್ಯೂ ಹೈಯರ್ ಮತ್ತು ಜನರಲ್ ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕೆಂದು ಸೂಚಿಸಲಾಗಿದೆ. ನಾನು ಈ ಪರೀಕ್ಷೆಗಳನ್ನು ಪರೀಕ್ಷಾರ್ಥ ಅವಧಿಯೊಳಗೆ ಪೂರೈಸಬೇಕಾಗಿದ್ದು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಈ ಪರೀಕ್ಷೆಗಳಿಗೆ ಹಾಜರಾಗಿದ್ದೇನೆ. ಈ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಹೇಗೆ? ಯಾವ್ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು? ದಯವಿಟ್ಟು ವಿವರ ನೀಡಿ.

|ಸುಮಿತ್ರಾ ಬಿ.ಎನ್. ದಾವಣಗೆರೆ

ಕರ್ನಾಟಕ ಸರ್ಕಾರಿ ಸೇವಾ (ಕನ್ನಡಭಾಷೆ ಮತ್ತು ಸೇವಾ ಪರೀಕ್ಷೆ) ನಿಯಮಗಳು 1974ರ ರೀತ್ಯ ಪ್ರತಿಯೊಬ್ಬ ಸರ್ಕಾರಿ ನೌಕರನು ಪರೀಕ್ಷಾರ್ಥ ಅವಧಿಯೊಳಗೆ ತನಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾದುದು ಕಡ್ಡಾಯ. ಈ ನಿಯಮಾವಳಿಯಲ್ಲಿ ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮ, ವಿಧಾನ ಇತ್ಯಾದಿ ವಿವರಗಳನ್ನು ನೀಡಲಾಗಿದೆ. ನೀವು ಹಾಜರಾಗುತ್ತಿರುವ ಇಲಾಖಾ ಪರೀಕ್ಷೆಗಳನ್ನು ಆಯೋಗವು ವಸ್ತುನಿಷ್ಠ ಮಾದರಿಯಲ್ಲಿ ನಡೆಸುತ್ತಿರುವುದರಿಂದ ಒಮ್ಮೆ ನೀವು ಈ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಅವುಗಳ ವಿಷಯಸೂಚಿಕೆ ಮತ್ತು ಪರಿವಿಡಿಯನ್ನು ಅಧ್ಯಯನ ಮಾಡುವುದರೊಂದಿಗೆ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಸಹ ಅವಲೋಕಿಸಬೇಕು. ಈ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಉತ್ತರಿಸಲು ಅವಕಾಶವಿರುವುದರಿಂದ ಇತ್ತೀಚಿನವರೆಗಿನ ತಿದ್ದುಪಡಿಗಳನ್ನು ಅಳವಡಿಸಿದ ಪುಸ್ತಕಗಳನ್ನೇ ನೀವು ಅಧ್ಯಯನ ಮಾಡಬೇಕಾಗುತ್ತದೆ. ಬೆಂಗಳೂರಿನ ಶ್ರೀ ರಾಘವೇಂದ್ರ ಪ್ರಕಾಶನದವರು ಅಕೌಂಟ್ಸ್ ಹೈಯರ್ ವಿಷಯಗಳಿಗೆ ಸಂಬಂಧಿಸಿದ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು, ಆರ್ಥಿಕ ಸಂಹಿತೆ, ಖಜಾನೆ ಸಂಹಿತೆ, ಬಜೆಟ್ ಕೈಪಿಡಿ, ರೆವಿನ್ಯೂ ಹೈಯರ್ (ಭಾಗ 1 ಮತ್ತು 2 ಕ್ಕೆ) ಸಂಬಂಧಿಸಿದಂತೆ ರೆವಿನ್ಯೂ ಹೈಯರ್ ಪಠ್ಯ ಪುಸ್ತಕಗಳನ್ನು ಹಾಗೂ ಜನರಲ್ ಲಾ ಭಾಗ 1, 2ಕ್ಕೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳನ್ನು ಖರೀದಿಸಿ ಅಧ್ಯಯನ ಮಾಡಬಹುದು.




ಅಂಗವೈಕಲ್ಯದ ಬಗ್ಗೆ ವಿಶೇಷ ಭತ್ಯೆ ಪಡೆಯುತ್ತಿಲ್ಲ, ಇದಕ್ಕೆ ನಾನು ಅರ್ಹನೇ?

BY ವಿಜಯವಾಣಿ ಸುದ್ದಿಜಾಲ · AUG 18, 2016


ನಾನು ವಕ್ಪ್ ಮಂಡಳಿಯಲ್ಲಿ ಅಂಗವಿಕಲರ ಮೀಸಲಾತಿ ಅಡಿಯಲ್ಲಿ ದ್ವಿತೀಯದರ್ಜೆ ಸಹಾಯಕನಾಗಿ ನೇಮಕಾತಿ ಹೊಂದಿದ್ದೇನೆ. ಸರ್ಕಾರಿ ಸೇವಾ ನಿಯಮಾವಳಿ ಪ್ರಕಾರ ನಾನು ವೇತನ ಭತ್ಯೆ ಪಡೆಯುತ್ತಿದ್ದೇನೆ. ಆದರೆ ನಾನು ಅಂಗವೈಕಲ್ಯದ ಬಗ್ಗೆ ಯಾವುದೇ ವಿಶೇಷ ಭತ್ಯೆ ಪಡೆಯುತ್ತಿಲ್ಲ ಇದಕ್ಕೆ ನಾನು ಅರ್ಹನೇ?

ಐಅಬ್ದುಲ್ ಖಾದಿರ್ ಹಾನಗಲ್

ದಿನಾಂಕ 13.2.2013ರಿಂದ ಅಂಗವಿಕಲ ಸರ್ಕಾರಿ ನೌಕರನಿಗೆ ಅವನ ಮೂಲ ವೇತನಕ್ಕೆ ಅನುಗುಣವಾಗಿ ಶೇ. 6ರಷ್ಟು ವಿಶೇಷ ಭತ್ಯೆ ನೀಡಲಾಗುವುದು. ಅಲ್ಲದೆ ಅವನು ಅಂಧ ಮತ್ತು ಸಂಪೂರ್ಣವಾಗಿ ಅಂಗವಿಕಲನಾಗಿದ್ದರೆ ಮಾಸಿಕವಾಗಿ ರೂ. 500-00 ವಿಶೇಷ ಭತ್ಯೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೀವು ನಿಮ್ಮ ನೇಮಕಾತಿ ಅಧಿಕಾರಿಯವರಿಗೆ ನಿಮ್ಮ ಅಂಗವೈಕಲ್ಯದ ಸ್ವರೂಪದ ಆಧಾರದ ಮೇಲೆ ವಿಶೇಷ ಭತ್ಯೆ ಮಂಜೂರು ಮಾಡಲು ಕೋರಬಹುದು. 





ಅಂಚೆ ತೆರಪಿನ ಮೂಲಕ ಉನ್ನತ ವ್ಯಾಸಂಗಕ್ಕೆ ನಿರ್ಬಂಧ ಇರುವುದಿಲ್ಲ.

BY ವಿಜಯವಾಣಿ ಸುದ್ದಿಜಾಲ · AUG 17, 2016


ನಾನು ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದು 5 ವರ್ಷ ಪೂರ್ಣಗೊಂಡಿದೆ. ನಾನು ಉನ್ನತ ವ್ಯಾಸಂಗ ಮಾಡಲು ಬಯಸಿದ್ದು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಸಂಬಳ ಸಹಿತ ಉನ್ನತ ವ್ಯಾಸಂಗ ಮಾಡಲು ಅವಕಾಶವಿದೆಯೇ? ಇದ್ದರೆ ಮುಂದೆ ನಾನು ಯಾವ ಕ್ರಮ ಅನುಸರಿಸಬೇಕು ?

ಐ ಅಶ್ವಂತ ಬಿ.ಎಸ್ ಮೈಸೂರು

 

ಸರ್ಕಾರಿ ಆದೇಶ ಸಂಖ್ಯೆ ಜಿಎಡಿ 4, ಎಸ್​ಆರ್​ಸಿ 73, ದಿನಾಂಕ 5.2.1973ರಲ್ಲಿ ಸರ್ಕಾರಿ ನೌಕರನು ಬಾಹ್ಯ ಅಥವಾ ಅಂಚೆ ತೆರಪಿನ ಮೂಲಕ ಉನ್ನತ ವ್ಯಾಸಂಗ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ನೀವು ಬಯಸಿದಂತೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಪರಿಶಿಷ್ಟ 2ಎರಂತೆ ಸಂಬಳ ಸಹಿತವಾಗಿ ಉನ್ನತ ವ್ಯಾಸಂಗ ಮಾಡಲು ಅವಕಾಶವಿರುವುದಿಲ್ಲ. ಇದಕ್ಕೆ ಕಾರಣ ನಿಮ್ಮ ಹುದ್ದೆಗೆ ಅಂತಹ ಉನ್ನತ ವ್ಯಾಸಂಗ ಅವಶ್ಯಕವಾಗಿರುವುದಿಲ್ಲ. ನೀವು ಬಾಹ್ಯ ಅಭ್ಯರ್ಥಿಯಾಗಿ ಅಥವಾ ಸಂಜೆ ಕಾಲೇಜಿನ ವಿದ್ಯಾರ್ಥಿಯಾಗಿ ಸೇರಿ ನಿಮ್ಮ ಮೇಲಾಧಿಕಾರಿಗೆ ಮಾಹಿತಿ ನೀಡುವುದು.




ಸರ್ಕಾರಿ ಕಾರ್ನರ್

BY ವಿಜಯವಾಣಿ ಸುದ್ದಿಜಾಲ · AUG 16, 2016

ಸರ್ಕಾರಿ ನೌಕರನೊಬ್ಬ ಜಿಲ್ಲಾಧಿಕಾರಿಗಳಿಂದ ಸ್ಪೋಟಕ ವಸ್ತುಗಳ ಪರವಾನಗಿ ಪತ್ರವನ್ನು ಪಡೆದು ಪಟಾಕಿ ಮಾರಾಟ ಮಾಡಬಹುದೇ?

| ಕುಮಾರಸ್ವಾಮಿ ಸಾಗರ

ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 1966ರ ನಿಯಮ 16ರಲ್ಲಿ ಸರ್ಕಾರಿ ನೌಕರನು ಸರ್ಕಾರದಿಂದ ಪೂರ್ವಾನುಮತಿ ಪಡೆಯದೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ವ್ಯಾಪಾರ ಅಥವಾ ವ್ಯವಹಾರದಲ್ಲಿ ತೊಡಗತಕ್ಕದ್ದಲ್ಲ. ಯಾವುದೇ ಇತರೇ ಉದ್ಯೋಗವನ್ನು ಕೈಗೊಳ್ಳತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಈ ನಿಯಮಾವಳಿಯ ಹಿನ್ನೆಲೆಯಲ್ಲಿ ನೀವು ಕೋರಿದಂತೆ ಸರ್ಕಾರಿ ನೌಕರನು ಪಟಾಕಿ ಮಾರಾಟ ಮಾಡುವುದು ನಿಯಮಾವಳಿಗೆ ವ್ಯತಿರಿಕ್ತವಾಗಿದ್ದು ಶಿಸ್ತುಕ್ರಮಕ್ಕೆ ಒಳಗಾಗುತ್ತಾನೆ.






ಸರ್ಕಾರಿ ಕಾರ್ನರ್

BY ವಿಜಯವಾಣಿ ಸುದ್ದಿಜಾಲ · AUG 12, 2016


ನಾನು ಸರ್ಕಾರಿ ನೌಕರನಾಗಿದ್ದು ನನ್ನ ಮೇಲೆ ಆರೋಪ ಹೊರಿಸಿ ಶಿಸ್ತು ಪ್ರಾಧಿಕಾರಿಯವರು ಇಲಾಖಾ ವಿಚಾರಣೆ ನಡೆಸುತ್ತಿದ್ದಾರೆ. ನನ್ನ ಮೇಲಿನ ಆರೋಪಗಳು ಕ್ಷುಲ್ಲಕವಾಗಿದ್ದು, ಈ ಇಲಾಖಾ ವಿಚಾರಣೆಗೆ ಸರ್ಕಾರದ ಕಾರ್ಯದರ್ಶಿ ಅಥವಾ ಸಂಬಂಧಿಸಿದ ಸಚಿವರು ಮಧ್ಯಂತರ ತಡೆಯಾಜ್ಞೆ ನೀಡಬಹುದೆ?

ಐ ವಿರೂಪಾಕ್ಷ ಗೌಡ ಗದಗ

ಸಿಸಿಎ ನಿಯಮಾವಳಿಗಳಲ್ಲಾಗಲೀ ಅಥವಾ ಇತರೆ ಯಾವುದೇ ಕಾನೂನಿನಲ್ಲಾಗಲೀ ಯಾವುದೇ ಕಾರಣಕ್ಕೆ ಪ್ರಗತಿಯಲ್ಲಿರುವ ಶಿಸ್ತು ನಡವಳಿಕೆಗಳನ್ನು ತಡೆಹಿಡಿಯುವ ಅಧಿಕಾರ ಯಾವುದೆ ಆಡಳಿತಾತ್ಮಕ ಪ್ರಾಧಿಕಾರಕ್ಕೆ ಇಲ್ಲ. ಇಲ್ಲಿ ಆಡಳಿತಾತ್ಮಕ ಪ್ರಾಧಿಕಾರವೆಂದರೆ ನ್ಯಾಯಾಲಯವಲ್ಲದ ಪ್ರಾಧಿಕಾರ ಮತ್ತು ಸಿಸಿಎ ನಿಯಮಾವಳಿಗಳ ರೀತಿ ಅಪೀಲು ಮತ್ತು ಪುನರಾವಲೋಕನ ಪ್ರಾಧಿಕಾರಗಳು ಒಳಗೊಳ್ಳುತ್ತಾರೆ. ಕಾನೂನು ಬದ್ಧ ಶಿಸ್ತು ಪ್ರಾಧಿಕಾರಿ ಸಿಸಿಎ ನಿಯಮಗಳಡಿಯಲ್ಲಿ ಕ್ರಮ ಜರುಗಿಸಲು ಸ್ವತಂತ್ರ ಪ್ರಾಧಿಕಾರಿಯಾಗಿರುತ್ತಾರೆ. ಯಾವುದೇ ಆಡಳಿತಾತ್ಮಕ ಶ್ರೇಣಿಯ ಅಧಿಕಾರಿಯ ಹಿಡಿತದಲ್ಲಿ ಅವನು ಬರುವುದಿಲ್ಲ. ತಿಳಿದೋ ಅಥವಾ ತಿಳಿಯದೆಯೋ ಅವನು ತಪ್ಪುಗಳನ್ನು ಮಾಡುತ್ತಿದ್ದರೂ ಸಹ ಅವನ ಮೇಲಾಧಿಕಾರಿಗಳು ಮಧ್ಯೆ ಪ್ರವೇಶಿಸುವಂತಿಲ್ಲ. ಶಿಸ್ತು ಪ್ರಾಧಿಕಾರಿ ಶಿಸ್ತು ನಡವಳಿಗಳಲ್ಲಿ ಅಂತಿಮ ಆದೇಶ ಮಾಡಿದಾಗ ಮಾತ್ರ ಸಿಸಿಎ ನಿಯಮಾವಳಿಯಲ್ಲಿ ನಿರ್ದಿಷ್ಟಪಡಿಸಿದ ಅಪೀಲು ಪ್ರಾಧಿಕಾರಗಳು ಅಂತಹ ಅಂತಿಮ ಆದೇಶವನ್ನು ಹೊರಡಿಸಬಹುದು. ಅಲ್ಲದೆ ದುರುದ್ದೇಶಪೂರಿತ ಶಿಸ್ತು ನಡವಳಿಗಳೆಂದು ನ್ಯಾಯಾಲಯ ಭಾವಿಸದ ಹೊರತು ನ್ಯಾಯಾಲಯಗಳೂ ಸಹ ಪ್ರಗತಿಯಲ್ಲಿರುವ ಶಿಸ್ತು ಕ್ರಮಗಳಿಗೆ ಮಧ್ಯೆ ಪ್ರವೇಶಿಸುವಂತಿಲ್ಲ. ಹೀಗಾಗಿ ಸರ್ಕಾರದ ಕಾರ್ಯದರ್ಶಿಯಾಗಲೀ ಅಥವಾ ಸಚಿವರಾಗಲೀ ಮಧ್ಯಂತರ ತಡೆಯಾಜ್ಞೆ ನೀಡಲು ಬರುವುದಿಲ್ಲ.

(ಹೆಚ್ಚಿನ ವಿವರಗಳಿಗೆ ಎಂ.ಉಮೇಶ್​ರ ಶಿಸ್ತು ಮತ್ತು ಅಪೀಲು ಪ್ರಾಧಿಕಾರಗಳ ಕೈಪಡಿ ಕೃತಿ ನೋಡಬಹುಒಗ, ಪ್ರತಿಗಳಿಗೆ ಮೊ: 9481244434ನ್ನು ಸಂರ್ಪಸಿ)

No comments:

Post a Comment