Wednesday, 3 August 2016

ಮನೆಮದ್ದು: ಕಾಮಕಸ್ತೂರಿ ಕರಾಮತ್ತು & ಗೋ ಮೂತ್ರ

ಮನೆಮದ್ದು:

 ಕಾಮಕಸ್ತೂರಿ ಕರಾಮತ್ತು


ತುಳಸಿಯಂತೆ ಆಕಾರವುಳ್ಳ ಈ ಗಿಡವು ಬಹುತೇಕ ಎಲ್ಲಾ ಊರುಗಳಲ್ಲಿ ಬೆಳೆಯುತ್ತದೆ. ಇದರ ಬೀಜಗಳನ್ನು ಅಡುಗೆಯಲ್ಲೂ ಉಪಯೋಗಿಸುತ್ತಾರೆ . ಇದರ ಕೆಲವು ಔಷಧೀಯ ಉಪಯೋಗಗಳು ಇಲ್ಲಿವೆ. ತಣ್ಣೀರಿನಲ್ಲಿ ಕಾಮಕಸ್ತೂರಿ ಬೀಜಗಳನ್ನು 2-3 ಗಂಟೆ ನೆನೆಸಿ. ಅದನ್ನು 1 ಲೋಟ ಹಾಲು ಮತ್ತು 1 ಚಮಚ ಸಕ್ಕರೆ ಜೊತೆ ಸೇವಿಸಿದರೆ ಪಿತ್ತ ಶಮನವಾಗುತ್ತದೆ. ದೇಹದ ತೂಕ ಹೆಚ್ಚಿದ್ದು , ತುಂಬಾ ಬೆವರಿ ದುರ್ಗಂಧ ಬರುತ್ತಿದ್ದರೆ ಪ್ರತಿನಿತ್ಯ ಕಾಮಕಸ್ತೂರಿ ಎಲೆಗಳ ರಸವನ್ನು ದೇಹಕ್ಕೆ ಹಚ್ಚಿಕೊಂಡರೆ ದುರ್ಗಂಧ ನಿವಾರಣೆಯಾಗುತ್ತದೆ. ಕಾಮಕಸ್ತೂರಿ ಬೀಜ ಮತ್ತು ಎಲೆಗಳನ್ನು ರಾತ್ರಿ ನೀರಲ್ಲಿ ನೆನೆಸಿ , ಆ ನೀರನ್ನು ಬೆಳಗ್ಗೆ ಸಕ್ಕರೆ ಜೊತೆ ಸೇವಿಸಿದರೆ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ. ಕೆಮ್ಮು , ನೆಗಡಿಯಿದ್ದಾಗ ಕಾಮಕಸ್ತೂರಿ ಎಲೆ ಮತ್ತು ಬೀಜದ ಕಷಾಯ ತಯಾರಿಸಿ ಜೇನುತುಪ್ಪದ ಜೊತೆ ಸೇವಿಸಿದರೆ ಕೆಮ್ಮು , ನೆಗಡಿ ಕಡಿಮೆಯಾಗುತ್ತದೆ.
ಉತ್ತರಾಣಿಯ ಉಪಯೋಗ


ಮಳೆಗಾಲದ ಪ್ರಾರಂಭದಲ್ಲಿ ಹುಟ್ಟುತ್ತದೆ . ಇದರ ಎಲೆಗಳು ದುಂಡಗಿದ್ದು , ತೆನೆಯಲ್ಲಿ ಹೂವು ಮತ್ತು ಕಾಯಿ ಬಿಡುತ್ತದೆ. ತೆನೆಯಲ್ಲಿನ ಕಾಳನ್ನು ಉತ್ತರಾಣಿ ಅಕ್ಕಿ ಎಂದು ಕರೆಯುವರು . ಇದರಲ್ಲಿ 2 ರೀತಿಯ ಕಡ್ಡಿಯಿದ್ದು ಬಿಳಿ ಮತ್ತು ಕೆಂಪು ಬಣ್ಣದ್ದು . ಗರ್ಭಿಣಿಯರು ಉತ್ತರಾಣಿಯನ್ನು ಬಳಸಬಾರದು. ಇದರ ಕೆಲವು ಉಪಯೋಗಗಳು ಇಲ್ಲಿವೆ. ಉತ್ತರಾಣಿಯ ಹಸಿ ಕಡ್ಡಿಯನ್ನು ಜಗಿದು ಕುಂಚದಂತೆ ಮಾಡಿ ಹಲ್ಲುಜ್ಜಿದರೆ ಮುಖ ಶುದ್ಧಿಯಾಗಿ ದಂತರೋಗಗಳು ನಾಶವಾಗುತ್ತವೆ. ಮೂಲವ್ಯಾಧಿಯಲ್ಲಿ ರಕ್ತಸ್ರಾವ ಇದ್ದರೆ ಉತ್ತರಾಣಿ ಎಲೆಗಳನ್ನು ಜಜ್ಜಿ ಎಳ್ಳೆಣೆಯಲ್ಲಿ ಕಲಸಿ ಹಚ್ಚಿದರೆ 7 ದಿನಗಳಲ್ಲಿ ರಕ್ತಸ್ರಾವ ಮತ್ತು ಮೂಲವ್ಯಾಧಿ ಕಡಿಮೆಯಾಗುತ್ತದೆ. 1 ಚಮಚ ಉತ್ತರಾಣಿಯ ಬೇರಿನ ಪುಡಿಗೆ 1/4 ಚಮಚ ಕಾಳು ಮೆಣಸು ಮತ್ತು 1 ಚಮಚ ಜೇನುತುಪ್ಪವನ್ನು ಕಲಸಿ 2 ಬಾರಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ . ಉತ್ತರಾಣಿ ಎಲೆಯ ಪುಡಿ 1ಚಮಚಕ್ಕೆ 1 ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಭೇದಿ ನಿಲ್ಲುತ್ತದೆ. ಉತ್ತರಾಣಿ ಎಲೆಯ ರಸದಿಂದ ಗಾಯವನ್ನು ತೊಳೆದರೆ ಗಾಯ ಬೇಗ ಮಾಯುತ್ತದೆ.



ಮನೆ ಮದ್ದು: ಗೋ ಮೂತ್ರದ ಚಮತ್ಕಾರ


ಡಾ. ಸುಚೇತಾ ಜಯರಾಮ್

 ಗೋಮೂತ್ರದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಆದಷ್ಟು ತಾಜಾ ಗೋಮೂತ್ರವನ್ನು ಸೇವಿಸುವುದು ಉತ್ತಮ . ತಾಜಾ ಗೋಮೂತ್ರ ಸಿಗದಿದ್ದರೆ ಗೋಮೂತ್ರ ಅರ್ಕಾ ಎಂದು ಆಯುರ್ವೇದ ಔಷಧಾಲಯದಲ್ಲಿ ಸಿಗುತ್ತದೆ ಅದನ್ನು ಉಪಯೋಗಿಸಬಹುದು . ಗೋಮೂತ್ರವು ಹಲವಾರು ರೋಗಗಳಿಗೆ ರಾಮ ಬಾಣ . ಆದರೆ ಇದನ್ನು ಬಳಸವುದಕ್ಕೂ ಮುನ್ನ ತಜ್ಞ ಆಯುರ್ವೇದ ವೈದ್ಯರ ಸಲಹೆ ಪಡೆಯಲೇಬೇಕು . ಸಂಧಿ ನೋವಿದ್ದರೆ ಖಾಲಿ ಹೊಟ್ಟೆಯಲ್ಲಿ 30 ಮಿಲಿ ಗೋ ಮೂತ್ರವನ್ನು 1ಗ್ರಾಂ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ನೋವು ಶಮನವಾಗುತ್ತದೆ. 2-4 ಚಮಚ ಗೋ ಮೂತ್ರವನ್ನು 1ಲೋಟ ನೀರು , 1ಚಮಚ ಜೇನುತುಪ್ಪ ಮತ್ತು 1ಚಮಚ ನಿಂಬೆ ರಸದಲ್ಲಿ ಸೇರಿಸಿ ಸೇವಿಸಿದರೆ ದೇಹದ ತೂಕ ಇಳಿಸಲು ಮತ್ತು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಮಲ ಬದ್ಧತೆ ಇದ್ದಲ್ಲಿ 2-5ಗ್ರಾಂ ಸೈಂಧವ ಉಪ್ಪಿಗೆ 20 ಮಿಲಿ ಗೋ ಮೂತ್ರ ಬೆರೆಸಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಬೇವಿನ ಎಲೆ ಹಾಗೂ ಅಮೃತಬಳ್ಳಿಯ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ . 15 ಮಿಲಿ ಕಷಾಯಕ್ಕೆ 10ಮಿಲಿ ಗೋ ಮೂತ್ರ ಸೇರಿಸಿ ಸೇವಿಸಿದರೆ ಎಲ್ಲ ರೀತಿಯ ಚರ್ಮ ರೋಗ ಗುಣವಾಗುತ್ತದೆ. ಜಂತು ಹುಳದ ಸಮಸ್ಯೆ ಇದ್ದರೆ 4 ಚಮಚ ಗೋಮೂತ್ರಕ್ಕೆ 1/2ಚಮಚ ಓಂಕಾಳನ್ನು ಸೇರಿಸಿ ಒಂದು ವಾರ ಸೇವಿಸಿದರೆ ಹುಳಗಳು ನಿವಾರಣೆಯಾಗುತ್ತವೆ. ಗೋಮೂತ್ರದಲ್ಲಿ ಬೇವಿನ ಎಲೆಗಳನ್ನು ರುಬ್ಬಿ ಚರ್ಮದ ತುರಿಕೆಗೆ ಹಚ್ಚಿದರೆ ಮಾಯವಾಗುತ್ತದೆ.

No comments:

Post a Comment