Tuesday, 23 August 2016

ಶ್ರೀವಾಣಿ

ಶ್ರೀವಾಣಿ


ಭವ್ಯ ಸಾಗರ.  ಅಲ್ಲೊಂದು ಮೀನು ಕುಟುಂಬ.  ಅದರಲ್ಲಿ ಹತ್ತಾರು ಮೀನುಗಳು.  ಒಂದು ಮರಿ ಮೀನು.  ಒಮ್ಮೆ ಸಾಗರದಲ್ಲಿ ಅದು ತೇಲಾಡುತ್ತಾ ದೂರ ಹರಿದು ಹೋಯಿತು.  ತಿರುಗಿ ಬರುವುದರಲ್ಲಿ ಅದರ ಕುಟುಂಬದವರು ಯಾರೂ ಇರಲಿಲ್ಲ.  ಅವರೆಲ್ಲರೂ ಮೀನುಗಾರನ ಬಲೆಗೆ ಬಿದ್ದುಹೋಗಿದ್ದರು.  ತಾಯಿ –ತಂದೆ, ಬಂಧು-ಬಳಗ ಎಲ್ಲವನ್ನೂ ಕಳೆದುಕೊಂಡು ಮರಿಮೀನು ದುಃಖಿಸತೊಡಗಿತು.  ‘ನನಗೆ ಯಾರೂ ಇಲ್ಲ.  ನಾನು ಅನಾಥನಾದೆ’ ಎಂದು ಅದು ಗೋಳಿಡತೊಡಗಿತು.


ಅಷ್ಟರಲ್ಲಿ ‘ನಾನಿದ್ದೇನೆ,ಚಿಂತಿಸಬೇಡ’ ಎಂಬ ಧ್ವನಿ ಹತ್ತಿರದಲ್ಲೇ ಕೇಳಿಬಂತು.


ಮರಿಮೀನು ಸಂತಸದಿಂದ‘ಯಾರವರು?’ ಎಂದು ಪ್ರಶ್ನಿಸಿತು.


‘ನಾನು ಸಾಗರ!’ ಎಂದಿತು ಆ ಧ್ವನಿ.


‘ನೀನು ಎಲ್ಲಿರುವೆ?’ ಎಂದು ಮತ್ತೆ ಕೇಳಿತು ಮೀನು.


‘ನೀನು ಇರುವಲ್ಲಿಯೇ ನಾನು ಇರುವೆ.  ನೀನು ಜನಿಸಿದ್ದು,ಬಾಳಿ ಬೆಳೆಯುತ್ತಿರುವುದು ನನ್ನಲ್ಲಿಯೇ!  ನಾನು ಸದಾ ನಿನ್ನನ್ನು ರಕ್ಷಿಸುತ್ತೇನೆ,ಚಿಂತಿಸದಿರು!’ ಎಂದಿತು ಸಾಗರ.


ಅದನ್ನು ಕೇಳಿದ ಮರಿಮೀನು ಮತ್ತೆ ಉತ್ಸಾಹದಿಂದ ಬದುಕಲು ಅಣಿಯಾಯಿತು.


ದಯಾಸಾಗರನಾದ ದೇವನು ಸಕಲ ಜೀವರಾಶಿಯನ್ನೂ ಪೊರೆಯುವನು.  ಅವನೇ ನಮ್ಮೆಲ್ಲರ ಶಾಶ್ವತ ಮಿತ್ರನು!!



(ಶ್ರೀ ಸಿದ್ದೇಶ್ವರ ಸ್ವಾಮಿ,ಜ್ಞಾನಯೋಗಾಶ್ರಮ,ವಿಜಾಪುರ)

No comments:

Post a Comment