Monday, 1 August 2016

♻️ ಸೃಷ್ಟಿಕರ್ತನ ನಿರ್ಣಯವೇ ಅಂತಿಮ♻️

♻️ ಸೃಷ್ಟಿಕರ್ತನ ನಿರ್ಣಯವೇ ಅಂತಿಮ♻️


ಸ್ವಾರ್ಥಿಯಾದ ಮಾನವನು ಸುಖ ಬಂದಾಗ ತನ್ನಿಂದ, ತನ್ನ ಶ್ರಮದಿಂದ, ತನ್ನ ತ್ಯಾಗದಿಂದ, ತನ್ನ ಪುಣ್ಯದ ಫಲ ಎಂದೆಲ್ಲ ಬೀಗುತ್ತಾನೆ. ದೇವರನ್ನೇ ಮರೆತುಬಿಡುತ್ತಾನೆ. ದುಃಖ ಬಂದಾಗ, ಏನಾದರೂ ಕೆಡಕಾದಾಗ, ಮನಸ್ಸಿಗೆ ನೋವಾಗುವಂಥ ಅವಘಡ, ದುರ್ಘಟನೆಗಳು ನಡೆದಾಗ ದೇವರನ್ನು ದೂಷಿಸುವನು. ಗಂಡುಮಕ್ಕಳು ಹುಟ್ಟಿದಾಗ ತನ್ನ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಒಂದುವೇಳೆ ಸಾಲಾಗಿ ಹೆಣ್ಣುಮಕ್ಕಳೇ ಹುಟ್ಟಿದರೆ ‘ಇದೆಲ್ಲ ದೇವರ ಆಟ’ ಎಂದು ದೇವರನ್ನು ಆರೋಪಿಸುತ್ತಾರೆ.

ಸುಖವು ತನ್ನಿಂದಲೇ ಬಂದಿದೆ ಎಂದು ಹೇಳುವಂತೆ ದುಃಖ ಬಂದಾಗಲೂ ಇದು ತನ್ನ ಪಾಪದ ಫಲವೆಂದು ಒಪ್ಪಿಕೊಳ್ಳುವ ಬೌದ್ಧಿಕ ಪ್ರಾಮಾಣಿಕತೆ ಹಾಗೂ ಆತ್ಮಬಲ ನಮ್ಮಲ್ಲಿರಬೇಕು. ಜಗತ್ತಿನಲ್ಲಿ ದೇವರನ್ನು ಬಿಟ್ಟರೆ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪಾಪ ಮತ್ತು ಪುಣ್ಯ ಎರಡೂ ಅಂಶಗಳಿರುತ್ತವೆ. ಪಾಪ ಪುಣ್ಯಗಳ ಮೊತ್ತದ ಒತ್ತಡವೇ ದೈವ. ಒಂದು ವಚನದಲ್ಲಿ ಅಲ್ಲಮಪ್ರಭುದೇವರು ಹೀಗೆ ಹೇಳುತ್ತಾರೆ;

ಎಣ್ಣೆ ಬೇರೆ ಬತ್ತಿ ಬೇರೆ: ಎರಡೂ ಕೂಡಿ ಸೊಡರಾಯಿತ್ತು.

ಪುಣ್ಯ ಬೇರೆ ಪಾಪ ಬೇರೆ: ಎರಡೂ ಕೂಡಿ ಒಡಲಾಯಿತ್ತು.

ಎಣ್ಣೆ ಮತ್ತು ಬತ್ತಿ ಕೂಡಿದಾಗ ಜ್ಯೋತಿ ಉರಿಯಲು ಸಾಧ್ಯವಾಗುವಂತೆ; ಪಾಪ-ಪುಣ್ಯಗಳ ಮಿಶ್ರಣದಿಂದ ಈ ದೇಹ ನಿರ್ಮಾಣವಾಗಿದೆ. ನಾವು ಹುಟ್ಟಿಬರಲಿಕ್ಕೆ ಕಾರಣ ನಮ್ಮ ಪಾಪ ಹಾಗೂ ಪುಣ್ಯ.

ಸಾತ್ವಿಕ ಶರಣನಾಗಿದ್ದ ಒಬ್ಬ ನಿಸ್ವಾರ್ಥ ವ್ಯಕ್ತಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಲಿಂಗೈಕ್ಯನಾದ. ಆಗ ಕೆಲವು ಜನ, ದೇವರು ಯಾಕೆ ಹೀಗೆ ಮಾಡಿದ? ಒಳ್ಳೆಯ ವ್ಯಕ್ತಿಗಳಿಗೆ ಆಯುಷ್ಯ ಜಾಸ್ತಿ ಕೊಡಬೇಕಲ್ಲ? ಎಂದೆಲ್ಲ ಅಪನಂಬಿಕೆಯ ಮಾತು ಆಡುತ್ತಿದ್ದರು.

ಈ ರೀತಿ ಮಾತನಾಡುವುದೆಂದರೆ ಸೃಷ್ಟಿಕರ್ತನಲ್ಲಿ ವಿಶ್ವಾಸವಿಲ್ಲ ಎಂದೇ ಅರ್ಥ. ಸುಖ-ದುಃಖ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವವನೇ ನಿಜವಾದ ಭಕ್ತ.

ಜಗದ್ಗುರು ಶ್ರೀ ಚನ್ನಬಸವಾನಂದ ಸ್ವಾಮೀಜಿಯವರು
✨🔹✨🔹✨🔹✨🔹✨

No comments:

Post a Comment