Sunday, 24 December 2017

ಸರ್ಕಾರಿ ಸೇವೆಗೆ ಸೇರಲು ಷರತ್ತುಗಳು

*ಸರ್ಕಾರಿ ಸೇವೆಗೆ ಸೇರಲು ಷರತ್ತುಗಳು*

ಲ.ರಾಘವೇಂದ್ರ

ರಾಜ್ಯ ಸರ್ಕಾರಿ ಸೇವಾ ನಿಯಮಾವಳಿಗಳ ಚೌಕಟ್ಟಿನಲ್ಲಿ ಇರುವ ಸಾಮಾನ್ಯ ಸೇವಾ ಷರತ್ತುಗಳನ್ನು ಈ ಕೆಳಗೆ ವಿವೇಚಿಸಲಾಗಿದೆ.

*ವೈದ್ಯಕೀಯ ಪ್ರಮಾಣ ಪತ್ರ:*
 ಸರ್ಕಾರಿ ಸೇವೆಗೆ ಯೋಗ್ಯತೆಯ ಜೊತೆಗೆ ಮಾನಸಿಕ ಮತ್ತು ದೈಹಿಕವಾಗಿ ಸ್ವಸ್ಥವಿರುವ ವ್ಯಕ್ತಿಗಳನ್ನು ನೇಮಿಸುವುದು ಅಗತ್ಯ. ಆದ್ದರಿಂದ ಮೊದಲಿಗೆ ಸರ್ಕಾರಿ ಸೇವೆಗೆ ನೇಮಕಗೊಂಡ ಉದ್ಯೋಗಿಗಳು ಕಚೇರಿ ಮುಖ್ಯಸ್ಥರಿಗೆ ಈ ಬಗ್ಗೆ ವೈದ್ಯಕೀಯ ದೃಢೀಕರಣ ಪ್ರಮಾಣ ಪತ್ರ ಒದಗಿಸುವುದು ಕಡ್ಡಾಯ. ಪತ್ರಾಂಕಿತ ಅಧಿಕಾರಿಗಳು ತಮ್ಮ ಮೊದಲ ವೇತನ ಬಿಲ್ಲಿಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಲಗತ್ತಿಸಿ ಪಾವತಿಗಾಗಿ ಖಜಾನೆಗೆ ಸಲ್ಲಿಸಬೇಕಾಗುತ್ತದೆ. ಪತ್ರಾಂಕಿತರಲ್ಲದ ಇತರ ಉದ್ಯೋಗಿಗಳು ಒದಗಿಸಿದ ವೈದ್ಯಕೀಯ ಪ್ರಮಾಣಪತ್ರವನ್ನು ಕಚೇರಿಯ ಮುಖ್ಯಸ್ಥರು ಸಹಿ ಮಾಡಿ ಉದ್ಯೋಗಿಯು ಇತರ ಸೇವಾ ದಾಖಲೆಗಳೊಡನೆ ತಮ್ಮ ರಕ್ಷಣೆಯಲ್ಲಿಟ್ಟುಕೊಳ್ಳಬೇಕು. ಅಲ್ಲದೆ ಉದ್ಯೋಗಿಯ ಸೇವಾ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಿ ಕಚೇರಿ ಮುಖ್ಯಸ್ಥರು ಸಹಿ ಮಾಡುವುದು ಅಗತ್ಯ ಹಾಗೂ ಉದ್ಯೋಗಿಯ ಮೊದಲನೇ ತಿಂಗಳ ಸಂಬಳದ ಬಿಲ್ಲಿನಲ್ಲಿ ಈ ಬಗ್ಗೆ ಕಚೇರಿ ಮುಖ್ಯಸ್ಥರು ದೃಢೀಕರಿಸಬೇಕು.

*ಕೇಂದ್ರ ಸ್ಥಳ ಮತ್ತು ಕಾರ್ಯಕ್ಷೇತ್ರ ವ್ಯಾಪ್ತಿ (Headquarters & Jurisdction):* ಸಾರ್ವಜನಿಕ ಸೇವೆ ಮತ್ತು ಸಂಪರ್ಕಕ್ಕೆ ಅನುವು ಮಾಡಿಕೊಡಲು ಕಚೇರಿಯ ಕೇಂದ್ರ ಸ್ಥಳವನ್ನು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಸಂಬಂಧದಲ್ಲಿ ಕಾರ್ಯಕ್ಷೇತ್ರವ್ಯಾಪ್ತಿಯನ್ನು ಸರ್ಕಾರ ನಿರ್ದಿಷ್ಟಪಡಿಸುತ್ತದೆ.

ಉದ್ಯೋಗಿಯು ವೇತನ ಮತ್ತು ತುಟ್ಟಿಭತ್ಯೆಯ ಜತೆಗೆ ಇನ್ನಿತರೆ ಪರಿಹಾರ ಭತ್ಯೆಗಳಿಗೆ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಅರ್ಹನಾಗುತ್ತಾನೆ. ವರ್ಗಾವಣೆ ಸಂದರ್ಭದಲ್ಲಿ ಹುದ್ದೆಯ ಕಾರ್ಯಭಾರ ವಹಿಸಿಕೊಳ್ಳಲು ಮತ್ತು ವಹಿಸಿಕೊಂಡು ನಿರ್ದಿಷ್ಟ ಸ್ಥಳ ನಿಗದಿಪಡಿಸುವುದು ಅಗತ್ಯ. ಆದ್ದರಿಂದ ಸರ್ಕಾರ ಅಥವಾ ಸಕ್ಷಮ ಪ್ರಾಕಾರ ಒಂದು ಸ್ಥಳವನ್ನು ಕೇಂದ್ರ ಸ್ಥಳವೆಂದು ನಿರ್ದಿಷ್ಟಪಡಿಸುತ್ತದೆ. ಆ ಸ್ಥಳದಲ್ಲಿಯೇ ಉದ್ಯೋಗಿ ವಾಸಿಸಬೇಕಾಗಿರುತ್ತದೆ ಹಾಗೂ ತನಗೆ ವಹಿಸಿದ ಕಾರ್ಯ ನಿರ್ವಹಿಸಬೇಕಾಗಿರುತ್ತದೆ.

ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕ ಸಂಪರ್ಕ ಬೆಳೆಸುವುದರ ಜತೆಗೆ ತಮ್ಮ ಅಧೀನಾಧಿಕಾರಿಗಳ ಕಾರ್ಯದ ಮೇಲ್ವಿಚಾರಣೆಗಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಮಾಡಬೇಕಾಗುವುದು. ಆದ್ದರಿಂದ ಸರ್ಕಾರ ಇಂತಹ ಅಧಿಕಾರಿಗಳ ಕಾರ್ಯಕ್ಷೇತ್ರ ವ್ಯಾಪ್ತಿ ನಿರ್ದಿಷ್ಟಪಡಿಸುತ್ತದೆ. (ಕ.ಸ.ಸೇ.ನಿ.ನಿಯಮ 12 ಮತ್ತು 13). ಸರ್ಕಾರಿ ಉದ್ಯೋಗಿಯು ಸರ್ಕಾರದ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ತನ್ನ ಕೇಂದ್ರ ಸ್ಥಾನ ಮತ್ತು ಕಾರ್ಯವ್ಯಾಪ್ತಿ ಹೊರಗೆ ಕಳೆದವರು ವೇತನ ಭತ್ಯೆಗಳ ಅರ್ಹತೆ ಕಳೆದುಕೊಳ್ಳುವುದಲ್ಲದೆ ಉಲ್ಲಂಘನೆಗಾಗಿ ಶಿಸ್ತುಕ್ರಮಕ್ಕೆ ಗುರಿಯಾಗುತ್ತಾರೆ. ಆದರೆ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸಲು ತಮ್ಮ ಕ್ಷೇತ್ರ ವ್ಯಾಪ್ತಿಯ ಹೊರಗೆ ಪ್ರಯಾಣ ಮಾಡಬಹುದು. ಇಲಾಖೆ ಮುಖ್ಯಸ್ಥರು, ಪೊಲೀಸ್ ಅಧೀಕ್ಷಕರು, ಜಿಲ್ಲಾ ಖಜಾನಾಧಿಕಾರಿಗಳು, ಜಿಲ್ಲಾ ನ್ಯಾಯಾಧೀಶರು ಅಧಿನಾಧಿಕಾರಿಗಳಿಗೆ ತಮ್ಮ ಕೇಂದ್ರ ಸ್ಥಳ ಕಾರ್ಯಕ್ಷೇತ್ರದಿಂದ ಹೊರಗೆ ಆದರೆ ರಾಜ್ಯದೊಳಗೆ ಪ್ರಯಾಣ ಮಾಡಲು ಮತ್ತು ಕಾರ್ಯನಿರ್ವಹಿಸಲು ಅನುಮತಿ ನೀಡಬಹುದು. ಸರ್ಕಾರದ ಅನುಮತಿ ಇಲ್ಲದೆ ರಾಜ್ಯದ ಹೊರಗೆ ಪ್ರಯಾಣ ಮಾಡಲು ಸರ್ಕಾರಿ ಉದ್ಯೋಗಿಗೆ ಅವಕಾಶವಿಲ್ಲ. ಆದರೆ ಸರ್ಕಾರವು ಕೆಳಗೆ ನಮೂದಿಸಿರುವ ಇಲಾಖೆಯ ಅಧಿಕಾರಿಗಳಿಗೆ ಕೆಲವು ಷರತ್ತಿಗೊಳಪಟ್ಟು ರಾಜ್ಯದ ಹೊರಗೆ ಕಾರ್ಯನಿರ್ವಹಿಸಲು ಸ್ಥಾಯಿ ಆದೇಶ ನೀಡಿದೆ.

*ವೇತನ ಭತ್ಯೆ ಸಂದಾಯದ ಪ್ರಾರಂಭ*: ಸಾಮಾನ್ಯವಾಗಿ ಉದ್ಯೋಗಿಯು ಒಂದು ಹುದ್ದೆ ವಹಿಸಿಕೊಂಡ ದಿನಾಂಕದಿಂದ ಆ ಹುದ್ದೆಯಲ್ಲಿ ವೇತನ ಮತ್ತು ಭತ್ಯೆಗಳನ್ನು ಪಡೆಯಲು ಪ್ರಾರಂಭಿಸುತ್ತಾನೆ. ಅಂದರೆ ಕಾರ್ಯಭಾರವನ್ನು ಪೂರ್ವಾಹ್ನ ವಹಿಸಿಕೊಂಡಲ್ಲಿ ಆ ದಿನದಿಂದಲೇ ವಹಿಸಿಕೊಂಡಲ್ಲಿ ಮರುದಿನದಿಂದ ವೇತನ ಮತ್ತು ಭತ್ಯೆಗಳಿಗೆ ಅರ್ಹನಾಗುತ್ತಾನೆ. ಉನ್ನತ ಹುದ್ದೆಗೆ ಪದೋನ್ನತಿ ಪಡೆದಲ್ಲಿ ಉನ್ನತ ಹುದ್ದೆ ವಹಿಸಿಕೊಂಡ ದಿನಾಂಕದಿಂದ ವೇತನ ಮತ್ತು ಭತ್ಯೆಗಳನ್ನು ಸಂದಾಯ ಮಾಡಲಾಗುವುದು.ಆದರೆ ಸ್ಥಾನಾಪನ್ನ ನೇಮಕಾತಿ ಪ್ರಯುಕ್ತ ಕಾರ್ಯನಿರ್ವಹಿಸುವ ಉದ್ಯೋಗಿಗೆ ಅದೇ ವೇಳೆಯಲ್ಲಿ ಕಾಯಂ ನೇಮಕಾತಿ ಆದಲ್ಲಿ ಖಾಯಂ ನೇಮಕಾತಿ ಹುದ್ದೆ ವಹಿಸಿಕೊಳ್ಳದಿದ್ದರೂ ಆ ಹುದ್ದೆಯು ಖಾಲಿಯಾದ ದಿನದಿಂದಲೇ ವೇತನ ಮತ್ತು ಭತ್ಯೆಗಳ ಸಂದಾಯಕ್ಕೆ ಅರ್ಹನಾಗುತ್ತಾನೆ.

*ಹೆಚ್ಚುವರಿ ವೇತನ ಭತ್ಯೆಗಳು:*
 ಸರ್ಕಾರಿ ಉದ್ಯೋಗಿಯ ನೇಮಕಾತಿಯು ಪೂರ್ಣಕಾಲಿಕವಾಗಿದ್ದಲ್ಲಿ, ಆತನ ಸೇವೆಯ ವಿನಿಯೋಗ ಸರ್ಕಾರಕ್ಕೆ ಸೇರಿದ್ದು, ಆತನ ಸಂಪೂರ್ಣ ಸೇವೆಯನ್ನು ಎಲ್ಲಿ, ಯಾವಾಗ ಮತ್ತು ಹೇಗೆ ಬಳಸಿಕೊಳ್ಳಬೇಕೆಂಬುದು ಸರ್ಕಾರಕ್ಕೆ ಬಿಟ್ಟಿದ್ದು. ಆದ್ದರಿಂದ ಆತನ ಸೇವೆಯನ್ನು ಅಗತ್ಯಕ್ಕೆ ತಕ್ಕಂತೆ ಸರ್ಕಾರ ಅಥವಾ ಅಧಿಕಾರ ಪಡೆದ ಯಾವುದೇ ಪ್ರಾಧಿಕಾರವು ಹೆಚ್ಚುವರಿ ಸಂಭಾವನೆ ಸಂದಾಯ ಇಲ್ಲದಂತೆ ಉದ್ಯೋಗಿಯ ಸೇವೆ ಬಳಸಿಕೊಳ್ಳಬಹುದು. (ಕ.ಸ.ಸೇ.ನಿ. ನಿಯಮ 26 ಮತ್ತು 27)

No comments:

Post a Comment