Sunday, 24 December 2017

ನೌಕರರಿಗೆ ಪ್ರಭಾರ ಭತ್ಯೆಯ ನಿಯಮಗಳು

*ನೌಕರರಿಗೆ ಪ್ರಭಾರ ಭತ್ಯೆಯ ನಿಯಮಗಳು*


(ಕಾರ್ಯಾಬಾರ ಭತ್ಯೆ) (Charge allowance)

| ಲ. ರಾಘವೇಂದ್ರ

ಸರ್ಕಾರಿ ನೌಕರರ ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡುವ ಬದಲು ಅಥವಾ ಇನ್ನೊಂದು ಹುದ್ದೆಯಲ್ಲಿ ಅಧಿಕ ಕಾರ್ಯಭಾರ ನಿರ್ವಹಿಸುವಂತೆ ಆದೇಶ ಮಾಡಿದಾಗ ಅವರಿಗೆ ನಿಯಮ 32 ಮತ್ತು 68ರಂತೆ ಅಧಿಕ ಭತ್ಯೆ ನೀಡಬೇಕಾಗುತ್ತದೆ. ಇದನ್ನು ಸ್ವತಂತ್ರ ಪ್ರಭಾರದ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ವೇತನದ ಶೇಕಡ ಏಳೂವರೆಯಷ್ಟು ನೀಡುವ ವೇತನ ಅಥವಾ ಭತ್ಯೆಯೇ ‘ಪ್ರಭಾರ ಭತ್ಯೆ’ಯಾಗಿರುತ್ತದೆ. ಉದಾಹರಣೆಗೆ ದ್ವಿತೀಯ ದರ್ಜೆ ಸಹಾಯಕನು ರೂ. 11,500-21000 ವೇತನ ಶ್ರೇಣಿಯಲ್ಲಿದ್ದು ಅವನನ್ನು ಅದೇ ಕಚೇರಿ ಅಥವಾ ಶಾಖೆಯಲ್ಲಿ ಅದೇ ಬಗೆಯ ಹುದ್ದೆಗೆ ಅಧಿಕ ಪ್ರಭಾರದಲ್ಲಿರಿಸಿದರೆ ಈ ಹುದ್ದೆಯ ಕನಿಷ್ಠ ವೇತನ ರೂ. 11600ರಲ್ಲಿ ಶೇಕಡ ಏಳೂವರೆಯಷ್ಟು ಅಂದರೆ ರೂ. 870.00 ರೂ ಲಭ್ಯವಾಗುತ್ತದೆ. ಆದರೆ ಇದೇ ಎರಡನೇ ದರ್ಜೆ ಸಹಾಯಕನನ್ನು ಖಾಲಿ ಇರುವ ಪ್ರಥಮ ದರ್ಜೆ ಸಹಾಯಕನ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿದರೆ ಈ ಹುದ್ದೆಯ ವೇತನ ಶ್ರೇಣಿ ರೂ. 14550-26200ರಲ್ಲಿನ ಕನಿಷ್ಠ ವೇತನ ರೂ. 14550ರ ಶೇಕಡ ಏಳೂವರೆಯಷ್ಟು ಲಭ್ಯವಾಗುತ್ತದೆ. ಅಂದರೆ ರೂ. 1091.25 ‘ಪ್ರಭಾರ ಭತ್ಯೆ’ ಆ ಸರ್ಕಾರಿ ನೌಕರನಿಗೆ ಲಭ್ಯತ್ತದೆ.

ಪ್ರಭಾರ ಭತ್ಯೆ ಪಡೆಯಲು ಕೆಲ ಷರತ್ತುಗಳಿವೆ

1. ವೃಂದ ಮತ್ತು ನೇಮಕಾತಿ ನಿಯಮಾವಳಿಯ ರೀತ್ಯಾ ಅರ್ಹರಾದ ಮತ್ತು ಸೇವಾ ಜ್ಯೇಷ್ಠತೆಯನ್ನು ಹೊಂದಿದ ನೌಕರರನ್ನು ಮಾತ್ರ ಸ್ವತಂತ್ರ ಪ್ರಭಾರದಲ್ಲಿಡಬೇಕು.

2. ಸರ್ಕಾರಿ ನೌಕರನಿಗೆ ಆತನ ಕೆಲಸದೊಡನೆ ಹೆಚ್ಚಿನದಾದ ಕಾರ್ಯ ಮತ್ತು ಜವಾಬ್ದಾರಿಯಾಗಿದ್ದಿರಬೇಕು.

3. ಸರ್ಕಾರಿ ನೌಕರನನ್ನು ಅದೇ ಬಗೆಯ ಅಥವಾ ಅದಕ್ಕಿಂತ ಹೆಚ್ಚಿನ ವೇತನ ಶ್ರೇಣಿಯ ಹುದ್ದೆಯಲ್ಲಿ ಪ್ರಭಾರದಲ್ಲಿರಿಸಬೇಕೇ ಹೊರತು ಕೆಳಗಿನ ಹುದ್ದೆಯಲ್ಲಿರಸಬಾರದು. (ನಿಯಮ 69ರಡಿಯಲ್ಲಿನ ಟಿಪ್ಪಣಿ)

4. ಸಕ್ಷಮ ಅಧಿಕಾರಿಯ ಆದೇಶದ ಮೇರೆಗೆ ಪ್ರಭಾರದ ವಾಸ್ತವ ವರ್ಗಾವಣೆಯಾಗಿರಬೇಕು.

5. ಎರಡು ಅಥವಾ ಅದಕ್ಕಿಂತ ಅಧಿಕ ಪ್ರಭಾರದಲ್ಲಿದ್ದರೆ ಒಂದು ಹುದ್ದೆಯ ಕರ್ತವ್ಯಗಳ ಬಗ್ಗೆ ಪ್ರಭಾರ ಭತ್ಯೆ ಲಭ್ಯವಾಗುವುದು.

6. ಈ ಪ್ರಭಾರದ ಅವಧಿಯಲ್ಲಿ ಸಾಂರ್ದಭಿಕ ರಜೆ ಅಥವಾ ರಾಜ್ಯದ ಹೊರಗೆ ಅಥವಾ ಒಳಗೆ ನಡೆಯುವ ಸಮ್ಮೇಳನ, ತಜ್ಞರ ಸಮಿತಿಯ ಸಭೆ ಅಥವಾ ತರಬೇತಿಗೆ ನಿಯೋಜಿಸಬಹುದು.

7. ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಕನಿಷ್ಠ ಒಂದು ತಿಂಗಳು ಪ್ರಭಾರದಲ್ಲಿರಿಸಬೇಕು. ಈ ಪ್ರಭಾರವು ಗರಿಷ್ಠ ಆರು ತಿಂಗಳನ್ನು ಮೀರಬಾರದು. ಇದಕ್ಕಿಂತ ಹೆಚ್ಚು ಕಾಲ ಅಂದರೆ ಒಂದು ವರ್ಷದವರೆಗೆ ಪ್ರಭಾರದಲ್ಲಿರಿಸಲು ಸರ್ಕಾರದ ಮಂಜೂರಾತಿ ಅವಶ್ಯ.

ಆದರೆ ಖಜಾನೆ ಇಲಾಖೆಯ ನೌಕರನಿಗೆ ಒಂದು ತಿಂಗಳಿಗಿಂತ ಕಡಿಮೆ ಅವಧಿಗೂ ನೀಡುವುದಕ್ಕೆ ಅವಕಾಶ ಉಂಟು. ಖಜಾನೆ ನಿರ್ದೇಶಕರು ಕನಿಷ್ಠ 14 ದಿನಗಳಿಗೆ ಮತ್ತು ಗರಿಷ್ಠ 12 ತಿಂಗಳವರೆಗೆ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲು ಅಧಿಕಾರ ಹೊಂದಿರುತ್ತಾರೆ.

ಪ್ರಭಾರ ಭತ್ಯೆಯು ತುಟ್ಟಿಭತ್ಯೆ, ಮನೆಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ನಿವೃತ್ತಿ ವೇತನ ಹಾಗೂ ಉಪದಾನಗಳಿಗೆ ಪರಿಗಣಿತವಾಗುವುದಿಲ್ಲ. ಅಲ್ಲದೆ, ದಲಾಯತ್, ದಫೇದಾರ್ ಮತ್ತು ಕಾವಲುಗಾರರಿಗೆ ಅಧಿಕ ಪ್ರಭಾರದಲ್ಲಿಟ್ಟರೆ ಪ್ರಭಾರ ಭತ್ಯೆ ಲಭ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಬಹುದು.

No comments:

Post a Comment