Sunday, 24 December 2017

*ಅಂಗವಿಕಲರ ವಿವಾಹಕ್ಕೆ ಪ್ರೋತ್ಸಾಹ ಧನ*

  ವಿಜಯವಾಣಿ ಸುದ್ದಿಜಾಲ 

*ಕೇಂದ್ರ, ರಾಜ್ಯ ಸರ್ಕಾರಗಳು ಕಾಲ ಕಾಲಕ್ಕೆ ಜಾರಿಗೊಳಿ ಸುತ್ತಿರುವ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿ ಸುವ ನಿಟ್ಟಿನಲ್ಲಿ ವಿಜಯವಾಣಿ ಪ್ರತಿ ವಾರ ಯೋಜನೆಗಳ ಮಾಹಿತಿ ಕೈಪಿಡಿ ನೀಡುತ್ತಿದ್ದು, ಈ ವಾರ ‘ಸರ್ಕಾರ ಅಂಗವಿಕಲರ ಮದುವೆಗೆ ನೀಡುತ್ತಿರುವ ಪ್ರೋತ್ಸಾಹ ಧನ ಯೋಜನೆ’ ಕುರಿತ ಸಮಗ್ರ ನೋಟ ನಿಮ್ಮ ಮುಂದೆ…*



‘ಸರ್ವರಿಗೂ ಸಮಬಾಳು’ ಎಂಬಂತೆ ಸಮಾಜದಲ್ಲಿ ಎಲ್ಲರಿಗೂ ಎಲ್ಲದರಲ್ಲೂ ಸಮಾನತೆ ಒದಗಿಸುವುದು ಕೇಂದ್ರ, ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಹುಟ್ಟಿನಿಂದಲೋ, ಆಕಸ್ಮಿಕವಾಗಿಯೋ ಜರುಗಿಬಿಡುವ ಘಟನೆಗಳಿಂದ ಆಗುವ ಅಂಗವೈಕಲ್ಯದಿಂದಾಗಿ ಸಾಮಾನ್ಯ ಜನರಂತೆ ವಿವಾಹವಾಗಿ ಬಾಳು ನಡೆಸುವುದು ಅಂಗವಿಕಲರಿಗೆ ಕಷ್ಟಸಾಧ್ಯವೇ ಸರಿ. ಈ ನಿಟ್ಟಿನಲ್ಲಿ ಅಂಗವಿಕಲರನ್ನು ಸಾಮಾನ್ಯ ವ್ಯಕ್ತಿಗಳು ವಿವಾಹವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಪ್ರೋತ್ಸಾಹ ಧನ ನೀಡುತ್ತಿದೆ. ಸಾಮಾನ್ಯ ಜನರಂತೆ ಅಂಗವಿಕಲ ಯುವಕ/ಯುವತಿಯರನ್ನು ಸಾಮಾನ್ಯ ಯುವಕ/ಯುವತಿಯರು ವಿವಾಹವಾಗಲು ಈ ಯೋಜನೆಯಿಂದ ಪ್ರೋತ್ಸಾಹ ಧನ ದೊರೆಯಲಿದೆ. ಈ ಯೋಜನೆ 2013ರಿಂದಲೂ ಜಾರಿಯಲ್ಲಿದೆ.

*ಉದ್ದೇಶವೇನು?*

ಸಾಮಾನ್ಯ ವ್ಯಕ್ತಿಗಳು ಅಂಗವಿಕಲರನ್ನು ವಿವಾಹವಾಗಲು ಮುಂದೆ ಬಂದು ಅಂಗವಿಕಲರು ವೈವಾಹಿಕ ಜೀವನ ಸುಗಮವಾಗಿ ನಡೆಸಲು ಅನುಕೂಲವಾಗುತ್ತದೆ.ಸಾಮಾನ್ಯ ವ್ಯಕ್ತಿಗಳು ಅಂಗವಿಕಲರನ್ನು ವಿವಾಹವಾಗಲು ನಿರ್ಲಕ್ಷ್ಯ ವಹಿಸುವುದನ್ನು ತಡೆಯಲು.ಅಂಗವಿಕಲರು ಸಾಮಾನ್ಯ ವ್ಯಕ್ತಿಗಳು ಮದುವೆಯಾದಲ್ಲಿ ಅಂಗವಿಕಲರು ಸಹ ಸಾಮಾನ್ಯರಂತೆ ವೈವಾಹಿಕ ಜೀವನ ಸಾಗಿಸಲು ಸಾಧ್ಯವಾಗುವುದು.

*ಯೋಜನೆಯ ಲಾಭವೇನು?*

ಸರ್ಕಾರದಿಂದ ಅಂಗವಿಕಲರ ಮದುವೆಗೆ 50 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ನೀಡುವ ಧನಸಹಾಯವನ್ನು ಐದು ವರ್ಷಗಳ ಅವಧಿಗೆ ಬ್ಯಾಂಕಿನಲ್ಲಿ ಠೇವಣಿ ರೂಪದಲ್ಲಿ ಇಡಬೇಕು. ಹಾಗೂ ಈ ಠೇವಣಿಯಿಂದ ಬಂದ ಬಡ್ಡಿ ಹಣವನ್ನು ದಂಪತಿ ಅವರ ಜೀವನ ನಿರ್ವಹಣೆಗೆ ಬಳಸಿಕೊಳ್ಳಬಹುದು. 5 ವರ್ಷದ ನಂತರ ಪೂರ್ಣ ಹಣ ಪಡೆಯುವುದು, ಮುಂದುವರೆಸುವುದು ಅವರ ಇಚ್ಛೆಗೆ ಒಳಪಟ್ಟಿರುತ್ತದೆ.

*ಆದಾಯ ಮಿತಿಯಿಲ್ಲ*

ಅಂಗವಿಕಲ ವ್ಯಕ್ತಿಗಳೊಡನೆ ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ಯಾವುದೇ ಆದಾಯ ಮಿತಿ ಇಲ್ಲ.

*ವಯೋಮಿತಿ*

ವಿವಾಹವಾಗುವ ಯುವತಿಯರ ವಯಸ್ಸು 18 ಹಾಗೂ ಯುವಕರ ವಯಸ್ಸು 21 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.



*ಯಾರಿಗಿಲ್ಲ?*: ಈ ಯೋಜನೆಯಡಿ ಸೌಲಭ್ಯ ಪಡೆಯುವ ಅಂಗವಿಕಲ ವ್ಯಕ್ತಿಗಳು/ಸಾಮಾನ್ಯ ವ್ಯಕ್ತಿಗಳು 2ನೇ ಮದುವೆ ಮಾಡಿಕೊಂಡಲ್ಲಿ ಈ ಸೌಲಭ್ಯ ಪಡೆಯಲು ಅರ್ಹರಲ್ಲ.



*ಯಾರಿಗೆ ಲಭ್ಯ?*

ಅಂಗವಿಕಲ ಯುವಕ/ಯುವತಿಯರ ಅಂಗವಿಕಲತೆಯ ಪ್ರಮಾಣ ಶೇ.40ಕ್ಕಿಂತ ಹೆಚ್ಚಾಗಿರಬೇಕು.ವಿವಾಹವಾಗುವ ಯುವಕ/ಯುವತಿಯರು ಕಡ್ಡಾಯವಾಗಿ ಸಂಬಂಧಪಟ್ಟವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ ನೀಡಬೇಕು.ವಿವಾಹವನ್ನು ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.ಪ್ರೋತ್ಸಾಹ ಧನವನ್ನು ಮಂಜೂರು ಮಾಡುವ ಪ್ರಾಧಿಕಾರವು ಆಯಾ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳದ್ದಾಗಿರುತ್ತದೆ.

*ಅರ್ಜಿ ಎಲ್ಲಿ ಸಿಗುತ್ತೆ?*

ಇಲಾಖೆಯ ಆನ್​ಲೈನ್​ನಲ್ಲಿ ಅರ್ಜಿ ಲಭ್ಯವಿದ್ದು, ಅರ್ಹರು ಡೌನ್​ಲೋಡ್ ಮಾಡಿಕೊಂಡು, ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಬಹುದು.



*ಹೆಚ್ಚಿನ ಮಾಹಿತಿಗೆ* : ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೋಡಿಯಂ ಬ್ಲಾಕ್, ನೆಲಮಹಡಿ, ವಿಶ್ವೇಶ್ವರಯ್ಯ ಕೇಂದ್ರ, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು – 560 001. ವೆಬ್​ಸೈಟ್- welfareofdisabled.kar.nic.in

No comments:

Post a Comment