Sunday, 24 December 2017

ನೌಕರರ ನಿವೃತ್ತಿ ವೇತನದ ನಿಯಮಗಳು

*ನೌಕರರ ನಿವೃತ್ತಿ ವೇತನದ ನಿಯಮಗಳು*


ಲ. ರಾಘವೇಂದ್ರ

ಸರ್ಕಾರಿ ನೌಕರರು 1958ರ ಏಪ್ರಿಲ್ 1ರಿಂದ 2006ರ ಮಾರ್ಚ್ 31ರವರೆಗೆ ಸರ್ಕಾರಿ ಸೇವೆಗೆ ಸೇರಿದ್ದರೆ ಅಂತಹವರಿಗೆ ಹಳೆಯ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ಆದರೆ 2006ರ ಏಪ್ರಿಲ್ 1ರಿಂದ ಸರ್ಕಾರಿ ಸೇವೆಗೆ ಸೇರಿದ ಸರ್ಕಾರಿ ನೌಕರನಿಗೆ ನೂತನ ಪಿಂಚಣಿ ಸೌಲಭ್ಯಗಳನ್ನು ನೀಡಲಾಗುವುದು. ಈ ಕೆಳಗೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯಗಳ ಬಗ್ಗೆ ವಿವರ ನೀಡಲಾಗಿದೆ.

★★★★★
ನಿವೃತ್ತಿ ವೇತನದ ಬಗ್ಗೆ ಗಮನಿಸ ಬೇಕಾದ ಅಂಶಗಳು:

★ನಿವೃತ್ತಿ ವೇತನ ಸೌಲಭ್ಯಗಳುಳ್ಳ ಸಿಬ್ಬಂದಿ ವರ್ಗದ ಸೇವೆಯನ್ನು ಮಾತ್ರ ನಿವೃತ್ತಿ ವೇತನ ಸೌಲಭ್ಯಗಳಿಗೆ ಪರಿಗಣಿಸಲಾಗುವುದು.

★ಪೂರ್ಣ ಪ್ರಮಾಣದ ಪಿಂಚಣಿ ಸೌಲಭ್ಯಗಳನ್ನು ಪಡೆಯಲು ಉದ್ಯೋಗಿಯ ಸೇವೆ ಸಂಪೂರ್ಣವಾಗಿ ತೃಪ್ತಿಕರವಾಗಿರಬೇಕು.

★ನಿವೃತ್ತಿಯ ನಂತರವೂ ಉದ್ಯೋಗಿ ಸನ್ನಡತೆಯವನಾಗಿ ಇರಬೇಕೆಂಬುದು ನಿವೃತ್ತಿ ವೇತನ ನಿಯಮಗಳ ಸೂಚ್ಯ ಷರತ್ತು.

★ದುರ್ನಡತೆ, ಅಧಕ್ಷತೆ ಹಾಗೂ ದಿವಾಳಿತನದ ಕಾರಣಕ್ಕಾಗಿ ಸೇವೆಯಿಂದ ವಜಾ ಮಾಡಿದ ಉದ್ಯೋಗಿಗೂ, ವಿಶೇಷ ಸಂದರ್ಭಗಳಲ್ಲಿ ‘ಅನುಕಂಪಭತ್ಯೆ’ಯನ್ನು ಸರ್ಕಾರ ಮಂಜೂರು ಮಾಡಬಹುದು.

★ನಿವೃತ್ತಿ ವೇತನ ತಡೆಹಿಡಿಯುವುದು, ಹಿಂಪಡೆಯುವುದು ಹಾಗೂ ಕಡಿತಗೊಳಿಸುವುದು ಸರ್ಕಾರದ ಅಧಿಕಾರಕ್ಕೆ ಒಳಪಟ್ಟಿದೆ.

★ಇಲಾಖಾ/ನ್ಯಾಯಾಂಗ ವಿಚಾರಣೆಗೆ ಒಳಪಟ್ಟ ಉದ್ಯೋಗಿ 60 ವರ್ಷ ತಲುಪಿ ನಿವೃತ್ತಿ ಹೊಂದಿದ ಪ್ರಕರಣದಲ್ಲಿ ‘ತಾತ್ಕಾಲಿಕ ಪಿಂಚಣಿ’ ಮಂಜೂರು ಮಾಡಲಾಗುವುದು.

★ನಿವೃತ್ತಿ ವೇತನ ಸೌಲಭ್ಯಗಳ ಇತ್ಯರ್ಥ ವಿಳಂಬವಾಗುವುದು ಕಂಡುಬಂದಲ್ಲಿ ನಿರೀಕ್ಷಣಾ ನಿವೃತ್ತಿ ಮತ್ತು ನಿರೀಕ್ಷಣಾ ಉಪದಾನವನ್ನು ಸಂದಾಯ ಮಾಡಬಹುದು.

★ಉದ್ಯೋಗಿ ನಿವೃತ್ತನಾದ ನಂತರವೂ ನಾಲ್ಕು ವರ್ಷಗಳೊಳಗೆ ಸಂಭವಿಸಿದ ಘಟನೆಗಳ ಬಗ್ಗೆ ಸರ್ಕಾರದ ಪೂರ್ವಾನುಮತಿ ಪಡೆದು ಇಲಾಖಾ ವಿಚಾರಣೆಗೆ ಹೂಡಬಹುದು.

★ಸರ್ಕಾರಕ್ಕೆ ಅಥವಾ ಸರ್ಕಾರೇತರ ಸಂಸ್ಥೆಗಳಿಗೆ ಬರಬೇಕಾದ ಬಾಕಿಗಳನ್ನು ನಿವೃತ್ತಿ ವೇತನ ಪರಿವರ್ತಿತ ನಿವೃತ್ತಿ ವೇತನದ ಮೊಬಲಗುಗಳಿಂದ ಹಾಗೂ ಕುಟುಂಬ ನಿವೃತ್ತಿಯಿಂದ ವಸೂಲಿಗೆ ಅವಕಾಶವಿಲ್ಲ.

★ನಿವೃತ್ತಿ/ಮರಣ ಉಪದಾನ ಮತ್ತು ಗಳಿಕೆ ರಜೆ ನಗದೀಕರಣದ ವೇತನದಿಂದ, ಸರ್ಕಾರಕ್ಕೆ ಬರಬೇಕಾದ ಬಾಕಿಗಳನ್ನು ಉದ್ಯೋಗಿಯ/ಕುಟುಂಬದ ಒಪ್ಪಿಗೆಯಿಲ್ಲದೆಯೂ ವಸೂಲಿ ಮಾಡಬಹುದು.

★ಸಾಲದ ವಸೂಲಾತಿಗಾಗಿ ನಿವೃತ್ತಿ ವೇತನ, ಪರಿವರ್ತಿತ ನಿವೃತ್ತಿ ವೇತನದ ಮೊಬಲಗು, ಉಪದಾನಗಳನ್ನು ಜಪ್ತಿ ಮಾಡಲು ಅವಕಾಶವಿಲ್ಲ.

★ನಿವೃತ್ತಿ/ಮರಣ ಉಪದಾನ, ನಿವೃತ್ತಿ ವೇತನದ ಪರಿವರ್ತಿತಾ ಮೊಬಲಗು ನಿವೃತ್ತಿ ಅಥವಾ ಮರಣದ ವೇಳೆಯಲ್ಲಿ ಗಳಿಕೆ ರಜೆ ನಗದೀಕರಿಸಿದ ರಜಾ ವೇತನ – ಇವುಗಳು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ.

★ಮಾನಸಿಕ ಅಸ್ವಸ್ಥತೆ ಅಥವಾ ದೈಹಿಕ ಅಸಮರ್ಥತೆಯ ಮಕ್ಕಳಿಗೆ ಜೀವನ ಪರ್ಯಂತ ಕುಟುಂಬ ಪಿಂಚಣಿ ಸಂದಾಯ ಮಾಡಲಾಗುವುದು.

★ವಿಚ್ಛೇದನ ಪಡೆದ ಪತಿ/ಪತ್ನಿ ಹಾಗೂ ಮರು ಮದುವೆಯಾದ ವಿಧುರ/ವಿಧವೆಯರು ಕುಟುಂಬ ಪಿಂಚಣಿಗೆ ಅರ್ಹರಲ್ಲ.

★ಕಾನೂನಿನ್ವಯ ಬೇರೊಬ್ಬ ಪತ್ನಿ ಹೊಂದಿರುವ ಪುರುಷ ಕುಟುಂಬ ಪಿಂಚಣಿಗೆ ಅರ್ಹನಲ್ಲ.

★ನಿವೃತ್ತಿಯ ನಂತರ ಮದುವೆಯಾದ ಪಿಂಚಣಿದಾರನ ಪತ್ನಿ ಕುಟುಂಬ ಪಿಂಚಣಿಗೆ ಅರ್ಹಳು.

★ಉದ್ಯೋಗಿಯ ಕೊಲೆಗೆ ಕಾರಣರಾದ ಅಥವಾ ದುಷ್ಪೇರಣೆ ನೀಡಿದ ಕುಟುಂಬದ ಸದಸ್ಯರಿಗೆ ಕುಟುಂಬ ಪಿಂಚಣಿ ಮತ್ತು ಉಪದಾನದ ಸಂದಾಯಕ್ಕೆ ಅವಕಾಶವಿಲ್ಲ.

★ಕಾಣೆಯಾದ ಸರ್ಕಾರಿ ಉದ್ಯೋಗಿಯ ಕುಟುಂಬಕ್ಕೆ ಕುಟುಂಬ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಮಂಜೂರು ಮಾಡಬಹುದು.

★ನಿವೃತ್ತಿಯನ್ನು 1/3ನೇ ಭಾಗದವರೆಗೆ ಪರಿವರ್ತಿಸಿ ಇಡುಗಂಟಿನಲ್ಲಿ ಪಡೆಯಬಹುದು. 15 ವರ್ಷ ಪೂರ್ಣಗೊಂಡ ನಂತರ ಮೂಲ ನಿವೃತ್ತಿ ಸಂದಾಯ ಮಾಡಲಾಗುವುದು.

★ನಿವೃತ್ತಿ ವೇತನ ಸೌಲಭ್ಯಗಳ ಇತ್ಯರ್ಥದ ವಿಳಂಬಕ್ಕೆ ಶೇ.12 ಬಡ್ಡಿ ಪಾವತಿಸಬೇಕು.

★ಉದ್ಯೋಗಿಯಿಂದ ಸರ್ಕಾರಕ್ಕೆ ಬರಬೇಕಾದ ಬಾಕಿಯನ್ನು ಕಾಲ ಮಿತಿಯಲ್ಲಿ ನಿರ್ಧರಿಸದೆ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರರು.

★ಕಚೇರಿ ಮುಖ್ಯಸ್ಥರು ಪತ್ರಾಂಕಿತರಲ್ಲದ ಅಧಿಕಾರಿಗಳ ಪಿಂಚಣಿ ದಾಖಲೆಗಳನ್ನು ಮಹಾಲೇಖಪಾಲರಿಗೆ ರವಾನಿಸಬೇಕು. ಪತ್ರಾಂಕಿತ ಅಧಿಕಾರಿಗಳು ನೇರವಾಗಿ ಮಹಾಲೇಖಪಾಲರಿಗೆ ರವಾನಿಸಬಹುದು. ಅನ್ಯಸೇವೆಯಲ್ಲಿನ ಎಲ್ಲ ಸರ್ಕಾರಿ ಅಧಿಕಾರಿಗಳ ಪಿಂಚಣಿ ದಾಖಲೆಗಳನ್ನು ಇಲಾಖಾ ಮುಖ್ಯಸ್ಥರ ಮೂಲಕ ರವಾನಿಸಬೇಕು.

★ಪತ್ರಾಂಕಿತರಲ್ಲದ ಉದ್ಯೋಗಿಗಳ ಪಿಂಚಣಿ ದಾಖಲೆಗಳನ್ನು ಮುಷ್ಕರದ ಅವಧಿಯನ್ನು ಸರ್ಕಾರ ರಜೆಯೆಂದು ಪರಿಗಣಿಸದಿದ್ದಲ್ಲಿ ಉದ್ಯೋಗಿಯ ಹಿಂದಿನ ಸೇವೆಯನ್ನು ನಿವೃತ್ತಿ ವೇತನ ಸೌಲಭ್ಯಗಳಿಗೆ ಅರ್ಹ ಸೇವೆಗಾಗಿ ಪರಿಗಣಿಸುವಂತಿಲ್ಲ.

No comments:

Post a Comment