Sunday, 31 July 2016


ಪ್ರಶ್ನೆ: ನನ್ನ ದೈನಂದಿನ ಬದುಕಿನಲ್ಲಿ ಮತ್ತು ಸಂಕಟದ ಸಮಯದಲ್ಲಿ ದೇವರೊಂದಿಗೆ ನನ್ನ ಸಂಪರ್ಕವನ್ನು ಇಟ್ಟುಕೊಳ್ಳುವುದು ಹೇಗೆ ಎಂದು ದಯವಿಟ್ಟು ನನಗೆ ತಿಳಿಸಿ.



ಶ್ರೀ ಶ್ರೀ ರವಿ ಶಂಕರ್: ಸಂಪರ್ಕವನ್ನಿಟ್ಟುಕೊಳ್ಳಲಿರುವ ಈ ಉದ್ದೇಶವೇ, ನೀನು ಮತ್ತೆ ಮತ್ತೆ ಸಂಪರ್ಕವನ್ನು ಅನುಭವಿಸುತ್ತಿರುವೆ ಎಂಬುದನ್ನು ಸೂಚಿಸುತ್ತದೆ.
ಕೇವಲ ಇದನ್ನೊಂದು ಅಭ್ಯಾಸವನ್ನಾಗಿ ಮಾಡು. ನೀನು ಎದ್ದ ಕೂಡಲೇ ಸಂಪರ್ಕವನ್ನು ಅನುಭವಿಸು. ಮಲಗುವ ಮುನ್ನ, ನೀನು ಪಡೆದಿರುವುದಕ್ಕೆಲ್ಲಾ ದೇವರಿಗೆ ಧನ್ಯವಾದವನ್ನರ್ಪಿಸು. ಇದನ್ನು ಕೂಡಾ ನೀನು ಮಾತಿನ ಮೂಲಕ ಪುನರಾವರ್ತಿಸುವ ಅಗತ್ಯವಿಲ್ಲ, ಅದಿದೆಯೆಂದು ನೀನು ಸುಮ್ಮನೇ ಭಾವಿಸಿಕೊಳ್ಳಬೇಕು ಮತ್ತು ಸಹಜವಾಗಿರಬೇಕು.
ದೈವಿಕತೆಯೆಂಬುದು ಅರಿವಿನ ಅತ್ಯಂತ ಸರಳವಾದ ರೂಪವಾಗಿದೆ. ದೈವಿಕತೆಯು ನಮ್ಮ ಅತ್ಯಂತ ಸಹಜವಾದ ಸ್ಥಿತಿಯಾಗಿದೆ. ನೀವು ಸಂಪೂರ್ಣವಾಗಿ ನಿರಾಳವಾಗಿರುವ ಹಾಗೂ ಆತ್ಮೀಯವಾಗಿರುವ ಯಾವುದೇ ಕ್ಷಣವಿರಲಿ, ಆಗ ನೀವು ದೈವಿಕತೆಯಲ್ಲಿರುವಿರಿ ಎಂಬುದನ್ನು ತಿಳಿಯಿರಿ. ಅಷ್ಟೇ.
ಅತ್ಯಂತ ದೊಡ್ಡ ಅವಶ್ಯಕತೆಗಳಲ್ಲಿ ಒಂದು ಸಂಪೂರ್ಣ ತೃಪ್ತಿಯಾಗಿದೆ. ನೀವು ಸಂಪೂರ್ಣ ತೃಪ್ತಿಯನ್ನು ಅನುಭವಿಸುವಾಗ, ಆ ಕ್ಷಣದಲ್ಲಿ ನೀವು ದೇವರೊಂದಿಗಿರುತ್ತೀರಿ ಮತ್ತು ಅದು ನೀವು ಆ ಕ್ಷಣದಲ್ಲಿರುವ, ’ಈಗ’ದಲ್ಲಿರುವ ಸಮಯವಾಗಿದೆ, ಯಾಕೆಂದರೆ ’ಈಗ’ ಎಂದರೆ ’ಸಂಪೂರ್ಣ ತೃಪ್ತಿ’ ಎಂದರ್ಥ.
’ಈಗ’ ಎಂಬುದು ’ಸಂಪೂರ್ಣ ತೃಪ್ತಿ’ಗೆ ಮತ್ತು ’ನಾಳೆ’ ಎಂಬುದು ’ಆಸೆಗಳು, ಯೋಜನೆಗಳು ಮತ್ತು ಬಯಕೆಗಳು’ ಇವುಗಳಿಗೆ. ಹೀಗಾಗಿ, ಇಲ್ಲಿರಿ ಮತ್ತು ಈಗ ಇರಿ; ಸಂಪೂರ್ಣ ತೃಪ್ತಿ ಮತ್ತು ಸಂಪೂರ್ಣ ಶಾಂತಚಿತ್ತತೆಯಲ್ಲಿ. ಸಂಪೂರ್ಣ ತೃಪ್ತಿ ಮತ್ತು ಸಂಪೂರ್ಣ ಶಾಂತಚಿತ್ತತೆ ನಿಮ್ಮಲ್ಲಿ ಎಷ್ಟು ಸಲ ಬರುತ್ತದೆಯೆಂಬುದು ನಿಮಗೆ ಬಿಟ್ಟದ್ದು. ಕೆಲವೊಮ್ಮೆ ಅದು ನಿಮಗೆ ಆಗಿಹೋಗುತ್ತದೆ. ಹಿಂದಿನ ಅನೇಕ ಸಂತರು ಅದನ್ನು ತಾವು ಪಡಕೊಂಡ ಒಂದು ಉಡುಗೊರೆಯೆಂದು ಹೇಳಿದುದು ಅದಕ್ಕಾಗಿಯೇ.


✨🔹✨🔹✨🔹✨🔹✨


ಪ್ರಶ್ನೆ: ಗುರುದೇವ, ಸಂಕಟಕಾಲದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:ಉಸಿರಾಡುವುದು, ಉಸಿರಾಡುವುದು ಮತ್ತು ಉಸಿರಾಡುವುದು.
ಉಸಿರಾಟವೆಂಬುದು ಪ್ರಕೃತಿಯು ನಿಮ್ಮಲ್ಲಿ ಹಾಕಿರುವ ಅತ್ಯಂತ ದೊಡ್ದ ರಹಸ್ಯವಾಗಿದೆ. ಅದು ನಿಮ್ಮ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಉಸಿರಾಟದ ಅಭ್ಯಾಸದ ತಂತ್ರದ ಮೂಲಕ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬಹುದು. ನಿಮ್ಮಲ್ಲಿ ಹಲವರು ಇದನ್ನು ಅನುಭವಿಸಿರುವಿರಿ ಎಂದು ನನಗನಿಸುತ್ತದೆ, ಅಲ್ಲವೇ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಯಾರು ಇದನ್ನು ಅನುಭವಿಸಿಲ್ಲವೋ ಅವರು ನಿಯಮಿತವಾಗಿ ಸ್ವಲ್ಪ ಉಸಿರಾಟದ ಅಭ್ಯಾಸಗಳನ್ನು ಮಾಡಬೇಕು. ಆಗ ನಿಮಗೆ ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಹಿಡಿತವಿರುವುದು.

🔹✨🔹✨🔹✨🔹✨🔹

No comments:

Post a Comment