Saturday, 24 February 2018

▪▪▪▪▪▪▪▪▪▪▪

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನು ಜನರ ಬಗ್ಗೆ ಯಾವಾಗಲೂ ಕಾಳಜಿ ವಹಿಸುತ್ತಿದ್ದ. ತನ್ನ ಜನರಿಗೆ ರಾಜ್ಯದ ಬಗ್ಗೆ, ನನ್ನ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿದುಕೊಳ್ಳಬೇಕು ಎಂದೆನಿಸಿತು. ಅದಕ್ಕಾಗಿ ಊರಿನ ರಸ್ತೆ ಮಧ್ಯದಲ್ಲಿ ದೊಡ್ಡ ಕಲ್ಲೊಂದನ್ನು ಇರಿಸಿದ. ಅದನ್ನು ಯಾರಾದರೂ ತೆಗೆದು ಪಕ್ಕಕ್ಕಿಡುತ್ತಾರೋ ಅಥವಾ ಹಾಗೆ ಓಡಾಡುತ್ತಾರೋ ಎಂದು ಅವನು ನೋಡಬೇಕಿತ್ತು. ದಾರಿಯ ಮಧ್ಯೆ ಇಟ್ಟು ಪಕ್ಕದಲ್ಲೇ ಅವಿತು ಕುಳಿತ. ಪಂಡಿತರೊಬ್ಬರು ಬಂದರು. ಇವರು ಖಂಡಿತಾ ಕಲ್ಲನ್ನು ಸರಿಸಿ ಮುಂದೆ ಹೋಗುತ್ತಾರೆ ಎಂದುಕೊಂಡ ರಾಜ. ಆದರೆ ಅವರು ಕಲ್ಲನ್ನು ದಾಟುತ್ತಾ, ‘ಮೂರ್ಖ ರಾಜ ಸರಿಯಾಗಿ ರಾಜ್ಯವನ್ನು ನೋಡಿಕೊಳ್ಳಲು ಬರುವುದಿಲ್ಲ’ ಎಂದು ಬೈಯುತ್ತಾ ಹೋದ. ನಂತರ ಹೆಂಗಸೊಬ್ಬಳು ಮೊಸರು ಮಾರುತ್ತಾ ಬಂದಳು.


ತಲೆಯ ಮೇಲೆ ಗಡಿಗೆ ಇದ್ದ ಕಾರಣ ಅದನ್ನು ಇಳಿಸಿ ಕಲ್ಲು ಸರಿಸಿ ಹೋಗುವ ಕಷ್ಟ ತೆಗೆದುಕೊಳ್ಳಲಿಲ್ಲ. ರಾಜನಿಗೆ ನಿರಾಸೆಯಾಯಿತು. ಯಾರಿಗೂ ಬೇರೊಬ್ಬರ ಬಗ್ಗೆ ಇಲ್ಲ. ಎಲ್ಲ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಬೇಸರಿಸಿಕೊಂಡ. ಸ್ವಲ್ಪ ಹೊತ್ತಿನಲ್ಲೇ ಸೈನಿಕನೊಬ್ಬ ಬಂದ. ಆತ ಕಲ್ಲನ್ನು ನೋಡಿ ‘ ಇದ್ಯಾರು ರಸ್ತೆ ಬದಿ ಹೀಗೆ ಕಲ್ಲನ್ನು ಇಟ್ಟವರು, ಹೆಂಗಸರು ಮಕ್ಕಳು ಓಡಾಡುತ್ತಾರೆ ಎಂಬ ಪರಿಜ್ಞಾನವೇ ಇಲ್ಲ’ಎಂದು ಬೈಯುತ್ತಾ ಕಲ್ಲನ್ನು ಎತ್ತಿ ಪಕ್ಕಕ್ಕಿಡಲು ಪ್ರಯತ್ನಿಸಿದ. ಕಲ್ಲನ್ನು ಎತ್ತಿದಾಗ ಅವನಿಗೆ ಆಶ್ಚರ್ಯ. ಒಂದು ಚಿನ್ನದ ನಾಣ್ಯವಿರುವ ಚೀಲ, ಒಂದು ಚೀಟಿ ಇತ್ತು. ಚೀಟಿಯಲ್ಲಿ ‘ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟವರಿಗೆ ಈ ನಾಣ್ಯಗಳು’ ಎಂದು ಬರೆದಿತ್ತು.

*ದಾರಿಗೆ ಅಡ್ಡ ಬಂದ ಕಲ್ಲುಗಳು, ಜೀವನದಲ್ಲಿ ಅಡ್ಡ ಬಂದ ಸಮಸ್ಯೆಗಳು ಯಾವಾಗಲೂ ನಿಮ್ಮನ್ನು ಪರೀಕ್ಷಿಸುತ್ತವೆ. ಅದರಿಂದ ತಪ್ಪಿಸಿಕೊಳ್ಳುವುದು, ಓಡಿ ಹೋಗುವುದು ಸುಲಭ. ಆದರೆ ಹಾಗೆ ಮಾಡಿದರೆ, ಕಷ್ಟದ ನಂತರ ಸಿಗುವ ಸುಖದಿಂದ ವಂಚಿತರಾಗುತ್ತೀರಿ.*

▪▪▪▪▪▪▪▪▪▪▪

No comments:

Post a Comment