10 ವರ್ಷದ ಬಾಲಕನೊಬ್ಬ ಜೂಡೋ (ಜಪಾನ್ನ ಸಮರಕಲೆ) ಕಲಿಯಲು ನಿರ್ಧರಿಸಿದ. ಅವನ್ನು ತನ್ನ ಆಸೆಯನ್ನು ಹೇಳಿಕೊಂಡಾಗ ಹೆಚ್ಚಿನವರು ಜೋರಾಗಿ ನಕ್ಕುಬಿಟ್ಟರು. ಯಾಕೆಂದರೆ ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಅವನು ಎಡಗೈ ಕಳೆದುಕೊಂಡಿದ್ದ. ‘ಅಯ್ಯೋ ಹುಚ್ಚು ಹುಡುಗ ಎಂಥದ್ದೋ ನಿನ್ನ ಆಸೆ’ ಎಂದು ಹೀಯಾಳಿಸಿದವರೂ ಇದ್ದರು.
ಆದರೂ ಛಲ ಬಿಡದ ಹುಡುಗ ಜಪಾನಿನ ಜೂಡೋ ಮಾಸ್ಟರ್ ಬಳಿ ಹೋಗಿ ತನ್ನ ಮನದಿಂಗಿತ ವ್ಯಕ್ತಪಡಿಸಿದ. ಆತನ ಮಾತು ಕೇಳಿ ಮಾಸ್ಟರ್ ನಗಲಿಲ್ಲ. ಅವನಿಗೆ ಜೂಡೋ ಕಲಿಸಲು ಒಪ್ಪಿಕೊಂಡರು. ಕಲಿಕೆ ಶುರುವಾಯಿತು. ಮೂರು ತಿಂಗಳುಗಳೇ ಕಳೆಯುತ್ತಾ ಬಂದರೂ ಮಾಸ್ಟರ್ ಇವನಿಗೆ ಕೇವಲ ಒಂದೇ ಒಂದು ಪಟ್ಟನ್ನು ಹೇಳಿಕೊಟ್ಟರು. ಹುಡುಗನಿಗೆ ಸಣ್ಣಗೆ ಅನುಮಾನ ಶುರುವಾಯಿತು. ತಿಂಗಳು ಮೂರಾದರೂ ಕೇವಲ ಒಂದೇ ಒಂದು ಪಟ್ಟು ಕಲಿಸಿದ್ದಾರೆ. ಹಾಗಾದರೆ ನನಗೆ ಕಲಿಯುವ ಸಾಮರ್ಥ್ಯವಿಲ್ಲವೆ?
ಕೊನೆಗೆ ‘ಮಾಸ್ಟರ್ ನನಗೆ ಉಳಿದ ಪಟ್ಟುಗಳನ್ನು ಯಾವಾಗ ಕಲಿಸಿಕೊಡುತ್ತೀರಿ?’ ಎಂದು ಕೇಳಿಯೇ ಬಿಟ್ಟ.
‘ನಿನಗೆ ಈಗ ಗೊತ್ತಿರುವುದು ಒಂದೇ ಒಂದು ಪಟ್ಟು ಹಾಗೂ ನೀನು ಕಲಿಯಬೇಕಾಗಿರುವುದು ಈ ಒಂದು ಪಟ್ಟನ್ನು ಮಾತ್ರ’ ಎಂದರು ಮಾಸ್ಟರ್.
ಹುಡುಗನಿಗೆ ಏನೂ ಅರ್ಥವಾಗಲಿಲ್ಲ. ಇವರು ನನಗೆ ಉಳಿದದ್ದನ್ನು ಕಲಿಸುವುದು ಯಾವಾಗ? ನನಗೆ ಕೈ ಇಲ್ಲವೆಂದು ಇವರು ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆಯೇ? ಎಂಬೆಲ್ಲ ಪ್ರಶ್ನೆಗಳು ಆತನಲ್ಲಿ ಮೂಡಿದವು. ಕೆಲವು ತಿಂಗಳುಗಳ ನಂತರ ಮಾಸ್ಟರ್ ಇವನನ್ನು ಜೂಡೋ ಪಂದ್ಯಾವಳಿಗೆ ಕರೆದುಕೊಂಡು ಹೋದ. ಆಗ ಅವನಿಗೆ ಗೊತ್ತಿದ್ದದ್ದೂ ಕೇವಲ ಒಂದೇ ಒಂದು ಪಟ್ಟು. ಕೈಯಿಲ್ಲದ ಹುಡುಗನೊಬ್ಬ ಜೂಡೋಗೆ ಸ್ಪರ್ಧಿಸುವುದೇ ದೊಡ್ಡ ಅಚ್ಚರಿಯಲ್ಲವೆ? ಇನ್ನೂ ಆಶ್ಚರ್ಯವೆಂಬಂತೆ ಆತ ಮೊದಲೆರಡು ಪಂದ್ಯಗಳನ್ನು ಬಹಳ ಸುಲಭವಾಗಿ ಗೆದ್ದು ಬಿಟ್ಟ! ಮೂರನೆಯ ಪಂದ್ಯ ಸ್ವಲ್ಪ ಕಠಿಣವಾಗಿತ್ತು. ಮೊದಮೊದಲು ಎದುರಾಳಿಯ ಕೈ ಮೇಲಾಗಿತ್ತು. ಕೊನೆಕ್ಷಣದಲ್ಲಿ ಹುಡುಗ ತನಗೆ ಗೊತ್ತಿದ್ದ ಒಂದೇ ಒಂದು ಪಟ್ಟಿನಿಂದ ಎದುರಾಳಿಗೆ ಮಣ್ಣು ಮುಕ್ಕಿಸಿದ.
ಈಗ ಆತ ಫೈನಲ್ ಸ್ಪರ್ಧೆ ಎದುರಿಸಬೇಕಿತ್ತು. ಎದುರಾಳಿ ಇವನಿಗಿಂತ ಗಾತ್ರದಲ್ಲಿ, ಶಕ್ತಿಯಲ್ಲಿ, ಅನುಭವದಲ್ಲಿ ದೊಡ್ಡವನಂತೆ ಕಾಣುತ್ತಿದ್ದ. ಸಮಬಲರಂತೆ ಕಾಣದ ಸ್ಪರ್ಧಿಗಳನ್ನು ನೋಡಿದ ಮೇಲೆ ಪಂದ್ಯ ನಡೆಸುವುದೋ, ಬೇಡವೋ ಎಂದು ರೆಫರಿಗೆ ಗೊಂದಲವಾಯಿತು. ಮೊದಲೇ ಹುಡುಗನಿಗೆ ಒಂದು ಕೈ ಇಲ್ಲ. ಏನಾದರೂ ಹೆಚ್ಚು ಕಡಿಮೆ ಆದರೆ ಎಂದು ಚಿಂತಿಸಿದ. ಆಗ ಮಧ್ಯ ಪ್ರವೇಶಿಸಿದ ಮಾಸ್ಟರ್ ಹೇಳಿದ- ‘ಇಲ್ಲ ನನ್ನ ಶಿಷ್ಯ ಸಮರ್ಥನಿದ್ದಾನೆ. ಪಂದ್ಯ ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ’ ಎಂದು ಭರವಸೆ ನೀಡಿದ. ಪಂದ್ಯದಲ್ಲಿ ಎದುರಾಳಿ ಅನುಭವಸ್ಥನಂತೆ ಕಂಡರೂ ಹುಡುಗನದ್ದೇ ಕೈ ಮೇಲಾಯ್ತು. ಕೊನೆಗೂ ಹುಡುಗ ಮೊದಲ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದ!
ಪಂದ್ಯ ಮುಗಿಸಿ ವಾಪಸಾಗುವಾಗ ಹುಡುಗ ಅನುಮಾನದಿಂದ ಮಾಸ್ಟರ್ನನ್ನು ಕೇಳಿದ- ‘ಮಾಸ್ಟರ್, ಅದ್ಹೇಗೆ ನಾನು ಕೇವಲ ಒಂದೇ ಒಂದು ಪಟ್ಟಿನಿಂದ ಚಾಂಪಿಯನ್ ಆದೆ. ನನ್ನ ಕೈ ಬೇರೆ ಸರಿಯಿಲ್ಲ’. ಅವನ ಗೆಲುವಿನ ಬಗ್ಗೆ ಅವನಿಗೇ ಆಶ್ಚರ್ಯ, ಅನುಮಾನಗಳು ಹುಟ್ಟಿದ್ದವು. ‘ನೀನು ಗೆಲ್ಲಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು, ಜೂಡೋನಲ್ಲಿ ಅತಿ ಕಷ್ಟ ಎನಿಸಿಕೊಂಡಿರುವ ಪಟ್ಟನ್ನು ನೀನು ಲೀಲಾಜಾಲವಾಗಿ ಸಿದ್ಧಿಸಿಕೊಂಡಿದ್ದೀಯ. ಎರಡನೆಯದು ನಿನ್ನ ಪಟ್ಟಿಗೆ ಪ್ರತಿ ಪಟ್ಟು ಕೊಡಲು ಎದುರಾಳಿ ನಿನ್ನ ಎಡಭುಜವನ್ನು ಹಿಡಿಯಬೇಕು. ಬೇರಾವ ರೀತಿಯಿಂದಲೂ ನಿನ್ನನ್ನು ಎದುರಿಸಲು ಸಾಧ್ಯವಿಲ್ಲ!’.
ಆ ಹುಡುಗನ ಅತಿದೊಡ್ಡ ದೌರ್ಬಲ್ಯವನ್ನೇ ಆ ಮಾಸ್ಟರ್ ಅತಿದೊಡ್ಡ ಸಾಮರ್ಥ್ಯವನ್ನಾಗಿ ನಿಭಾಯಿಸುವುದನ್ನು ಕಲಿಸಿದ್ದರು.
ನೀವು ಯಾವುದನ್ನು ನಿಮ್ಮ ವೀಕ್ನೆಸ್, ದೌರ್ಬಲ್ಯ ಎಂದುಕೊಳ್ಳುತ್ತೀರೋ, ಅದೇ ನಿಮ್ಮ ಶಕ್ತಿಯಾಗಿ ಹೊರಹೊಮ್ಮಬಹುದು. ಹಾಗೆ ಕೊರತೆಯನ್ನೇ ಕೌಶಲವನ್ನಾಗಿಸಿಕೊಂಡ ಅನೇಕ ಸಾಧಕರು ನಮ್ಮ ನಡುವಿದ್ದಾರೆ. ಹಲವು ಇಲ್ಲಗಳ ನಡುವೆಯೇ ಎಲ್ಲವನ್ನೂ ಸಾಧಿಸಿ ಪಡೆದುಕೊಂಡವರು ನಮ್ಮ ಬದುಕಿಗೂ ಮಾದರಿಯಾಗಲಿ.
Gour Gopal prabhu
🌿🍃🌿🍃🌿🍃🌿🍃🌿🍃🌿
No comments:
Post a Comment