ಪ್ರಶ್ನೆ: ನಿಜವಾದ ಸೇವೆ ಯಾವುದು? ನನ್ನ ಪ್ರತಿಯೊಂದು ಕ್ರಿಯೆಯೂ ಹೇಗೆ ಸೇವೆಯಾಗಬಲ್ಲದು?
ಶ್ರೀ ಶ್ರೀ ರವಿ ಶಂಕರ್: ಸೇವೆಯೆಂದರೆ, ಅವನಂತೆ ಮಾಡುವುದು. ’ಅವನು’ ಎಂದರೆ, ಸೃಷ್ಟಿಕರ್ತ. ಅವನು ನಿಮಗಾಗಿ ಎಲ್ಲವನ್ನೂ ಮಾಡುತ್ತಾನೆ ಮತ್ತು ಅವನು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದುದರಿಂದ, ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೆಯೇ, ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುವುದು; ಇದು ಸೇವೆಯೆಂದು ಕರೆಯಲ್ಪಡುತ್ತದೆ.
ಖಂಡಿತವಾಗಿಯೂ ಅಲ್ಲೊಂದು ಪ್ರತಿಫಲವಿದೆ. ನಿಸ್ಸಂಶಯವಾಗಿ ಅದರಿಂದ ಒಂದು ಲಾಭವಿದೆ, ಆದರೆ ನೀವು ಪ್ರತಿಫಲವನ್ನು ನಿರೀಕ್ಷಿಸುವಾಗ, ಅದು ಸೇವೆಯಾಗುವುದಿಲ್ಲ. ಏನನ್ನೂ ನಿರೀಕ್ಷಿಸದೆಯೇ, ಏನನ್ನೂ ಬಯಸದೆಯೇ, ಕೇವಲ ಮಾಡುವುದಕ್ಕೋಸ್ಕರ ಮಾಡುವುದು ಸೇವೆಯೆಂದು ಕರೆಯಲ್ಪಡುತ್ತದೆ.
ಪ್ರಶ್ನೆ: ಗುರುದೇವ, ಯಾರನ್ನೂ ಕೆಟ್ಟವರೆಂದು ಪರಿಗಣಿಸಬಾರದೆಂದು ನೀವು ಈಗಷ್ಟೇ ಹೇಳಿದಿರಿ. ಇತರರು ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡರೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
ಶ್ರೀ ಶ್ರೀ ರವಿ ಶಂಕರ್: ಇತರರಿಗೆ ನಿಮ್ಮ ಬಗ್ಗೆ ಒಂದು ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ಸಮಸ್ಯೆ, ನಿಮ್ಮದಲ್ಲ. ನಿಮ್ಮ ಕಡೆಯಿಂದ, ಯಾರನ್ನೂ ಕೆಟ್ಟವರಾಗಿ ಪರಿಗಣಿಸಬೇಡಿ. ಹೀಗೆ ಮಾಡುವುದರಿಂದ, ನಿಮ್ಮ ಮನಸ್ಸು ಸ್ಪಷ್ಟವಾಗಿಯೂ ಆಹ್ಲಾದಕರವಾಗಿಯೂ ಇರುವುದು ಮತ್ತು ನಿಮ್ಮ ಬುದ್ಧಿಯು ತೀಕ್ಷ್ಣವಾಗಿರುವುದು. ಇಲ್ಲದಿದ್ದರೆ, ಯಾವ ಜನರನ್ನು ನೀವು ಕೆಟ್ಟವರೆಂದು ಪರಿಗಣಿಸುವಿರೋ ಅವರು ಒಂದು ಭೂತದಂತೆ ನಿಮ್ಮ ಮನಸ್ಸನ್ನು ಕಾಡಲು ತೊಡಗುವರು. ಅಂತಹ ಯೋಚನೆಗಳು ನಿಮ್ಮ ಮನಸ್ಸನ್ನು ಹೊಕ್ಕಾಗ, ಸೃಜನಾತ್ಮಕವಾದ ಏನನ್ನಾದರೂ ಮಾಡಲು ನಿಮಗೆ ಸಾಧ್ಯವಾಗದು.
No comments:
Post a Comment