Wednesday, 19 October 2016

ಕಥೆ

ಒಬ್ಬ ಹುಡ್ಗ ಇದ್ದ. ಅವ್ನಿಗೆ ಮೂಗಿನ ತುದೀಲೇ ಕೋಪ. ಚಿಕ್ಕಚಿಕ್ಕ ವಿಷಯಗಳಿಗೂ ಸಿಕ್ಕಾಪಟ್ಟೆ ಸಿಟ್ಟಾಗಿ ಅನಾಹುತಕಾರಿಯಾಗೆಲ್ಲ ಪ್ರತಿಕ್ರಿಯಿಸಿಬಿಡ್ತಿದ್ದ. ದೊಡ್ಡವನಾಗ್ತಾ ಆಗ್ತಾ ಇದು ಅತಿರೇಕಕ್ಕೆ ಹೋಗಿ ಅವನಿಗೇ ಅಪಾಯ ತಂದೊಡ್ಡಬಹುದು ಅಂತ ಅವನ ಅಪ್ಪನಿಗೆ ಅನಿಸಿತು. ಈಗಲೇ ಇವನನ್ನು ತಿದ್ದಬೇಕು ಎಂದು ನಿರ್ಧರಿಸಿದ. ಅದೊಂದು ದಿನ ಮಗ ತುಂಬ ಆರಾಮಾಗಿ ಇರುವಾಗ ಕರೆದ. ಒಂದು ಪ್ಯಾಕೆಟ್ ಮೊಳೆ ಕೊಟ್ಟ. ಅದರಲ್ಲಿ ಸುಮಾರು ನೂರಿನ್ನೂರು ಮೊಳೆಗಳಿದ್ದವು. ಜತೆಗೊಂದು ಸುತ್ತಿಗೇನೂ ಕೊಟ್ಟ. ಸೀದಾ ಮನೆ ಮುಂದಿದ್ದ ಮರದ ಬೇಲಿಯ ಬಳಿ ಕರೆತಂದು ಮಗನಿಗೆ ಹೇಳಿದ..
'ನೋಡು.. ಯಾಕೆ ಅಂತ ಈಗ ಹೇಳಲ್ಲ. ನೀನೂ ಕೇಳಬೇಡ. ನೀನು ಯಾವಾಗೆಲ್ಲ ತಾಳ್ಮೆ ಕಳೆದುಕೊಂಡು ಕೋಪಗೊಳ್ತೀಯೋ ಅಂಥ ಪ್ರತಿ ಸಂದರ್ಭದಲ್ಲೂ ಈ ಮರದ ಬೇಲಿಗೆ ಒಂದು ಮೊಳೆ ಹೊಡಿ'.  ಮಗನಿಗೆ ವಿಚಿತ್ರ ಅನಿಸಿದರೂ ಅಪ್ಪನ ಮಾತಿಗೆ ಒಪ್ಪಿದ. ಈ ಟಾಸ್ಕ್ ನ ಮೊದಲ ದಿನ, ಒಂದೇ ದಿನಕ್ಕೆ ಬರೋಬ್ಬರಿ ಮೂವತ್ತೇಳು ಮೊಳೆ ಹೊಡೆದ! ನಿಜಕ್ಕೂ ಮೊಳೆ ಹೊಡೆದು ಹೊಡೆದು ಅವನ ಕೋಪ ಹೆಚ್ಚಿತ್ತು ಅನಿಸುತ್ತೆ. ಇನ್ನೂ ಎರಡು ಮೊಳೆ ಹೊಡೆದ. ಕೆಲವು ಮೊಳೆಗಳು ಬೆಂಡಾಗಿದ್ದವು. ಕೆಲವು ಎಷ್ಟು ಹೊಡೆದರೂ ಒಳಗೆ ಹೋಗುತ್ತಿರಲಿಲ್ಲ. ಕೆಲವು ಮೊಳೆ ಹೊಡೆಯುವ ಭರದಲ್ಲಿ ಕೈಗೇ ಏಟು ಬಿದ್ದಿದ್ದವು. ಆದರೆ ಹುಡುಗ ಕೊಟ್ಟಿದ್ದ ಟಾಸ್ಕ್ ನ ನಿಲ್ಲಿಸಲಿಲ್ಲ. ಪ್ರತಿ ದಿನ ಆತ ಕೋಪಗೊಳ್ಳುವುದು ಮೊಳೆ ಹೊಡೆಯುವುದು ಮುಂದುವರಿಯಿತು. ಆದರೆ ಅವನಿಗೇ ಗೊತ್ತಿಲ್ಲದಂತೆ ಎರಡೇ ವಾರದಲ್ಲಿ ಬೇಲಿಗೆ ಹೊಡೆವ ಮೊಳೆಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿತ್ತು. ಹೀಗೆ ಬೇಲಿಗೆ ಮೊಳೆ ಹೊಡೆಯೋದಕ್ಕಿಂತ ಕೋಪ ಅದುಮಿಟ್ಟುಕೊಳ್ಳೋದೇ ಸಲೀಸು ಎಂದು ಅವನಿಗೆ ಅನಿಸತೊಡಗಿತ್ತು.
ಅದೊಂದು ದಿನ ಖುದ್ದು ಅವಧಿಯಲ್ಲಿ ಅಚ್ಚರಿ ಕಾದಿತ್ತು. ಒಂದಿಡೀ ದಿನ ಆತ ಒಮ್ಮೆಯೂ ಕೋಪಗೊಳ್ಳಲೇ ಇಲ್ಲ. ಬೇಲಿಗೆ ಒಂದು ಮೊಳೆಯೂ ಬೀಳಲಿಲ್ಲ! ಹುಡುಗನಿಗೆ ತನ್ನ ಮೇಲೆ ತನಗೇ ಹೆಮ್ಮೆ ಎನಿಸತೊಡಗಿತು. ಸೀದಾ ಓಡಿ ಹೋಗಿ ಅಪ್ಪನ ಬಳಿ ಹೇಳಿಕೊಂಡ… 'ಅಪ್ಪಾ ಇವತ್ತು ಒಂದೇ ಒಂದು ಮೊಳೆ ಕೂಡಾ ಹೊಡೀಲಿಲ್ಲ. ನಾನೊಂದ್ಸಲಾನೂ ಕೋಪ ಮಾಡ್ಕೊಳ್ಲಿಲ್ಲ!' ಅಪ್ಪನಿಗೆ ತುಂಬ ಖುಷಿಯಾಯ್ತು. 'ಈಗ ಕೋಪಾನೇ ಬರ್ತಿಲ್ವಾ ಮರಿ' ಅಂತ ಕೇಳ್ದ. ಮಗ ಹೇಳ್ದ ಬರುತ್ತೆ ಅಪ್ಪಾ… ಆದರೆ ಅದನ್ನ ಕಂಟ್ರೋಲ್ ಮಾಡ್ಕೊಳೋದನ್ನು ಕಲಿತುಕೊಂಡಿದ್ದೀನಿ ನಿಮ್ಮೀ ಟಾಸ್ಕ್ ನಿಂದ. ಆದರೆ ಟಾಸ್ಕ್ ಇಲ್ಲಿಗೇ ಮುಗಿದಿರಲಿಲ್ಲ. ಬೇಲಿಯ ಬಳಿ ಕರೆದುಕೊಂಡು ಬಂದ ಅಪ್ಪ ಹೇಳಿದ. ಇವತ್ತಿಂದ ನಿನಗೆ ಇನ್ನೊಂದು ಸವಾಲು. 'ಒತ್ತರಿಸಿಬಂದ ಕೋಪವನ್ನು ನೀನು ಯಾವಾಗೆಲ್ಲ ಕಂಟ್ರೋಲ್ ಮಾಡ್ಕೊಳ್ತೀಯೋ ಆಗೆಲ್ಲ ನೀನು ಹೊಡೆದಿರೋ ಒಂದೊಂದೇ   ಮೊಳೆಯನ್ನು ಬೇಲಿಯಿಂದ ಕಿತ್ತು ತೆಗೀತಾ ಬಾ. ಯಾಕೆ ಏನು ಅಂ  ತ ಆಮೇಲೆ ಹೇಳ್ತೀನಿ'. ಮಗನಿಗೆ ವಿಸ್ಮಯ ಎನಿಸಿತು.
ನಾನಾಗಲೇ ಕೋಪ ಕಳ್ಕೊಂಡಿದೀನಿ. ಆದರೂ ಯಾಕೆ ಇನ್ನೊಂದು ಚಾಲೆಂಜು ಅಂತ. ಆದರೆ ಅಪ್ಪನ ಮಾತಿಗೆ ಮರುಮಾತಾಡದೇ ಒಪ್ಪಿಕೊಂಡ. ಒಂದಷ್ಟು ವಾರಗಳಲ್ಲಿ ಬೇಲಿಗೆ ಅವನೇ ಚಚ್ಚಿದ್ದ ಅಷ್ಟೂ ಮೊಳೆಗಳನ್ನೂ ಒಂದೊಂದಾಗಿ ತೆಗೆದು ಮುಗಿಸಿದ್ದ. ಅಪ್ಪನ ಎದುರು ಬಂದು ನಿಂತು 'ಟಾಸ್ಕ್ ಕಂಪ್ಲೀಟ್' ಅಂದ. ಅಪ್ಪ ತುಂಬ ಪ್ರೀತಿಯಿಂದ ಮಗನ ಕೈ ಹಿಡಿದುಕೊಂಡ. ತಲೆನೇವರಿಸುತ್ತಾ ಬೇಲಿಯ ಬಳಿ ಕರೆದೊಯ್ದ. ಒಣಮರದ ಬೇಲಿಯನ್ನು ಗಮನಿಸಿದ. ಒಂದೇ ಒಂದು ಮೊಳೆಯೂ ಇರಲಿಲ್ಲ. 'ಭೇಷ್ ಮಗನೇ..' ಮಗನ ಮುಖದಲ್ಲಿ ತಾನೇನೋ ಯಾವುದೋ ದೊಡ್ಡ ಸಾಧನೆ ಮಾಡಿದ ಖುಷಿ. ಆಗ ತಂದೆ ಬೇಲಿಯನ್ನು ತೋರಿಸಿ ಹೇಳಿದ 'ಈ ಬೇಲಿ ನೀನು ಮೊಳೆ ಹೊಡೆಯೋಕೆ ಮೊದಲು ಹೇಗಿತ್ತು.. ಮೊಳೆ ಹೊಡೆದು ಮತ್ತೆ ಕಿತ್ತು ತೆಗೆದ ಮೇಲೆ ಹೇಗಿದೆ ಅಂತ ಒಮ್ಮೆ ನೋಡು. 'ಮಗ ನೂರಾರು ಮೊಳೆ ಹೊಡೆದು ಕಿತ್ತೆಗೆದಿದ್ದ ಆ ಬೇಲಿಯನ್ನು ಸೂಕ್ಷ್ಮವಾಗಿ ನೋಡ್ತಾ ಹೋದ. ಎಲ್ಲೆಡೆ ತೂತುತೂತುಗಳು. ಅಪ್ಪ ಶಾಂತವಾಗಿ ಹೇಳಲಾರಂಭಿಸಿದ.. ಮಗ ಅಷ್ಟೇ ಶಾಂತ ಚಿತ್ತದಲ್ಲಿ ಕೇಳಿಸಿಕೊಳ್ಳತೊಡಗಿದ… 'ಮಗೂ.. ಕೋಪದಲ್ಲಿ ನೀನಾಡೋ ಮಾತುಗಳು, ನೀನು ನೀಡೋ ಪ್ರತಿಕ್ರಿಯೆಗಳು ಎಂದೂ ಅಳಿಸೋಕಾಗದ ಗಾಯ ಮಾಡಿಬಿಡ್ತವೆ. ಈ ಬೇಲಿಗಾಗಿದೆ ನೋಡು.. ಆ ಥರ. ನೀನೆಷ್ಟೇ ಸಲ ಆಮೇಲೆ ಕ್ಷಮೆ ಕೇಳು, ಗಾಯ ಹುಷಾರಾಗಬಹುದು. ಆದರೆ ಗಾಯದ ಕಲೆ ಮಾಸೋದೇ ಇಲ್ಲ. 'ಮಗ ಪಾಠ ಕಲಿತದ್ದು ಮೊಳೆ ಹೊಡೆದಾಗಲೂ ಅಲ್ಲ, ಮೊಳೆ ತೆಗೆದಾಗಲೂ ಅಲ್ಲ. ಆನಂತರ ಉಳಿದಿದ್ದ ಗಾಯದ ಕಲೆಗಳನ್ನು ಕಂಡ ಮೇಲೆ. ತುಂಬ ಸಾಂದರ್ಭಿಕ ಎಂಬಂತೆ ಈ ಕಿರುಗತೆ ಇಂದು ಕಣ್ಣಿಗೆ ಬಿತ್ತು. 'ಲಾ ಆಫ್ ಸೀಕ್ರೆಟ್ಸ್' ಅಂತೊಂದು ಪುಸ್ತಕ ಇದೆ. ನಾವು ಏನನ್ನು ಯೋಚಿಸ್ತಾ ಇರ್ತೀವೋ ಅದಕ್ಕೆ ಸಂಬಂಧಿಸಿದ್ದು ನಮ್ಮತ್ತ ಸೆಳೆಯಲ್ಪಡ್ತವಂತೆ. ಈ ಕತೆಯೂ ಹಾಗೇ ಬಂದಿರಬಹುದೆನೋ ಗೊತ್ತಿಲ್ಲ.

No comments:

Post a Comment