Wednesday, 19 October 2016

ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ ಅನುವಾದ ಇಂತಿದೆ :

ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ ಅನುವಾದ ಇಂತಿದೆ :

‘‘ಅಮೇರಿಕೆಯ ಸೋದರಿಯರೇ ಮತ್ತು ಸೋದರರೇ!

ನೀವು ನಮಗಿತ್ತ ಪ್ರೀತಿಯ, ಹೃತ್ಪೂರ್ವಕ ಸ್ವಾಗತವನ್ನು (ಕರತಾಡನರೂಪೀ ಸ್ವಾಗತವನ್ನು) ಕಂಡಾಗ, ಶಬ್ದಗಳಿಂದ ಬಣ್ಣಿಸಲು ಅಸಾಧ್ಯಾವಾದ ಸಂತಸದಿಂದ ನನ್ನ ಹೃದಯ ತುಂಬಿ ಬಂದಿದೆ. ಅತ್ಯಂತ ಪುರಾತನವಾದ ಸನಾತನ ಧರ್ಮ ಪ್ರತಿನಿಧಿಸುವ ಸನ್ಯಾಸಿಯಾದ ನಾನು ನಿಮಗೆಲ್ಲ ಕೃತಜ್ಞ. ಸರ್ವ ಧರ್ಮಗಳ ಮಹಾಮಾತೆಯ ಹೆಸರಿನಲ್ಲಿ ನಿಮಗೆ ಕೃತಜ್ಞ. ಎಲ್ಲ ವರ್ಗ ಮತ್ತು ಮತಗಳನ್ನು ಪ್ರತಿನಿಧಿಸುವ ಲಕ್ಷಾವಧಿ ಹಿಂದೂ ಜನತೆಯ ಪರವಾಗಿ ನಾನು ನಿಮಗೆ ಕೃತಜ್ಞ.

ಈ ವೇದಿಕೆಯ ಮೇಲೆ ಭಾಷಣ ಮಾಡಿದ ಪೌರ್ವಾತ್ಯ ದೇಶಗಳ ಪ್ರತಿನಿಧಿಗಳಿಗೆ ನಾನು ಕೃತಜ್ಞ. ದೂರ ದೂರದ ರಾಷ್ಟ್ರಗಳಿಂದ ಇಲ್ಲಿಗೆ ಬಂದ ಜನತೆ, ಅವರು ಕೂಡ ಸೌಹಾರ್ದ ಭಾವ ತಾಳಿದವರಾಗಿದ್ದಾರೆ. ಜಗತ್ತಿಗೆ ಸಹಿಷ್ಣುತೆಯನ್ನು, ಒಪ್ಪಿಗೆಯ ಸ್ವೀಕಾರವನ್ನು ಕಲಿಸಿದ ಧರ್ಮದ ಪ್ರತಿನಿಧಿ ನಾನು ಎಂದು ಹೇಳಿಕೊಳ್ಳುವುದರಲ್ಲಿ ನನಗೆ ಅಭಿಮಾನವಿದೆ. ನಾವು ವಿಶ್ವದ ಸಹಿಷ್ಣುತೆಯಾಡನೆ ನಾವು ವಿಶ್ವದ ಎಲ್ಲ ಧರ್ಮಗಳನ್ನು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ, ಸ್ವೀಕರಿಸುತ್ತೇವೆ.

ಈ ಭೂಮಂಡಲದ ಎಲ್ಲ ಧರ್ಮಾನುಯಾಯಿ ಸಂತ್ರಸ್ತರನ್ನು, ಅವರು ಪೀಡೆಗೆ ಒಳಗಾದಾಗ ಅಶ್ರಯ ಕೊಟ್ಟು, ರಕ್ಷಣೆ ನೀಡಿದ ಭಾರತದೇಶದವನು ನಾನು ಎಂಬ ಅಭಿಮಾನ ನನಗಿದೆ. ರೋಮನ್‌ ದಬ್ಬಾಳಿಕೆಯ ಪರಿಣಾಮದಿಂದ ತಮ್ಮ ಪವಿತ್ರ ಗುಡಿಗಳು ನಾಶಗೊಂಡಾಗ ಇಸ್ರೇಲ್‌ ವಾಸಿಗಳು ದಕ್ಷಿಣ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು ಎಂಬ ಮಾತನ್ನು ಅಭಿಮಾನದಿಂದ ನೆನೆಯುತ್ತೇನೆ. ಝರತುಷ್ಟ್ರ ದೇಶದ ನಿವಾಸಿಗಳಿಗೂ ಆಶ್ರಯ ನೀಡಿದ ಧರ್ಮದ ಅನುಯಾಯಿ ನಾನು ಎಂದು ಅಭಿಮಾನದಿಂದ ಹೇಳುತ್ತೇನೆ.

ಬಂಧುಗಳೇ, ನಾನು ಬಾಲ್ಯದಲ್ಲಿ ಪಠಣಮಾಡುತ್ತಿದ್ದ ಸ್ತೋತ್ರದ ಸಾಲುಗಳನ್ನು ಇಲ್ಲಿ ಉದಾಹರಿಸುತ್ತೇನೆ. ಈ ಸ್ತೋತ್ರವನ್ನು ಲಕ್ಷಾವಧಿ ಮನೆಗಳಲ್ಲಿ ಇಂದು ಕೂಡ ಪ್ರತಿನಿತ್ಯ ಪಠಿಸಲಾಗುತ್ತದೆ. ‘ಎಲ್ಲ ದಿಶೆಗಳಿಂದ ಹರಿದು ಬಂದ ತೊರೆಗಳ ನೀರು ಸಾಗರವನ್ನು ಸೇರುವಂತೆ, ಓ ದೇವರೇ, ಬೇರೆ ಬೇರೆ ದಿಕ್ಕಿನಿಂದ ನಿನ್ನೆಡೆಗೆ ಬರುವ ಜನರ ದಾರಿಗಳು ಸರಳವಾಗಿರಲಿ, ವಕ್ರವಾಗಿರಲಿ, ಅವೆಲ್ಲ ಕೊನೆಗೆ ನಿನ್ನೆಡೆಗೇ ಬರುತ್ತವೆ.’

ಇಂದು ಇಲ್ಲಿ ನಡೆದ ಸಮಾವೇಶದಂತಹದು ಹಿಂದೆಂದೂ ನಡೆದಿರಲಿಲ್ಲ. ಇದು ಅತಿ ಮಹತ್ವದ ಸಮಾವೇಶ. ಇದು ಭಗವದ್ಗೀತೆ ಸಾರಿದಂತಹ ಮಹಾನ್‌ ತತ್ವದ ಘೋಷಣೆಯಾಗಿದೆ, ಸಮರ್ಥನೆಯಾಗಿದೆ. ‘‘ನನ್ನೆಡೆಗೆ ಯಾವನೇ ಬರಲಿ, ಯಾವ ರೂಪದಿಂದಲೇ ಬರಲಿ, ನಾನು ಅವನನ್ನು ತಲುಪುತ್ತೇನೆ. ಹಲವಾರು ದಾರಿ ತುಳಿದು ಕಷ್ಟಪಟ್ಟು ಬರುವ ಜನರು ಕೊನೆಯಲ್ಲಿ ನನ್ನ ಕಡೆಗೇ ಬರುತ್ತಾರೆ.’’

ಕೋಮುವಾದ, ಮತಾಭಿಮಾನ ಇವುಗಳ ಸಂತಾನ ಮತಾಂಧತೆ. ಇವು ನಮ್ಮ ಸುಂದರ ನೆಲದಲ್ಲಿ ಭೂತದಂತೆ ಹಮ್ಮಿಕೊಂಡಿವೆ. ಇವುಗಳಿಂದ ಜಗದಲ್ಲಿ ಹಿಂಸಾಚಾರ ನಡೆದಿದೆ, ಈ ನೆಲ ಮಾನವ ರಕ್ತದಿಂದ ಸಿಕ್ತವಾಗಿದೆ. ಈ ಭಯಂಕರ ಭೂತಗಳು ನಮ್ಮನ್ನು ಕಾಡಿರದಿದ್ದರೆ ಮಾನವ ಸಮಾಜ ಇನ್ನಷ್ಟು ಪ್ರಗತಿ ಸಾಧಿಸಬಹುದಾಗಿತ್ತು. ಈ ಭೂತಗಳ ಕಾಲ ಇನ್ನು ಮುಗಿದಿದೆ. ಇಂದು ಮುಂಜಾನೆ ಬಾರಿಸಿದ ಘಂಟಾನಾದ ಧರ್ಮಾಂಧತೆಯ ಸಾವಿನ ಗಂಟೆಯಂತಿತ್ತು, ಖಡ್ಗದಿಂದ ಅಥವಾ ಲೆಕ್ಕಣಿಕೆಯಿಂದ ಈ ನೆಲದಲ್ಲಿ ನಡೆದ ಹಿಂಸಾಚಾರಗಳ ಕೊನೆಯ ಹಾಡಿನಂತಿತ್ತು, ಮನುಷ್ಯ ಮನುಷ್ಯರ ನಡುವೆ ಇರುವ ಕುತ್ಸಿತ ಭಾವನೆಗಳಿಗೆ ಅಂತ್ಯದ ಕರೆಯಂತಿತ್ತು, ಎಲ್ಲರೂ ತಲುಪಬೇಕಾದ ಒಂದೆ ಗುರಿಯ ದಿಕ್ಸೂಚಿಯಂತಿತ್ತು.’’

No comments:

Post a Comment