Wednesday, 19 October 2016

ಮಾರ್ಗದರ್ಶನ ಮಾಡುವವರ ಅರ್ಹತೆಗಳು

ಮಾರ್ಗದರ್ಶನ ಮಾಡುವವರ ಅರ್ಹತೆಗಳು


ದೇಶ ವಿದೇಶಗಳಲ್ಲಿ ಖ್ಯಾತಿವೆತ್ತ ಧರ್ಮಗುರುವೊಬ್ಬರು ಇದ್ದರು. ಅವರ ಬಳಿ ವಿದ್ಯೆ ಕಲಿತವರೆಲ್ಲ ತಾವು ದೊಡ್ಡ ವಿದ್ವಾಂಸರು, ಪ್ರಜ್ಞಾವಂತರು ಎನ್ನುವ ಅಭಿದಾನಕ್ಕೆ ಪಾತ್ರರಾಗುತ್ತಿದ್ದರು. ಅಲ್ಲಿ ಕನಿಷ್ಠ ಮೂರು ವರ್ಷವಾದರೂ ಕಲಿಯಲೇಬೇಕಿತ್ತು. ಆದರೂ ಅಲ್ಲಿನ ಕಲಿಕೆಯ ಮಹತ್ವದ ಕಾರಣಕ್ಕೆ ನಾಮುಂದು ತಾಮುಂದು ಎಂದು ಆ ಗುರುವಿನ ಬಳಿ ಕಲಿಯಲು ಹಾತೊರೆಯುವವರ ದೊಡ್ಡ ಸಾಲು ಇತ್ತು.

ಈಗಾಗಲೇ ಒಂದಿಷ್ಟು ತಾತ್ವಿಕ ತಿಳುವಳಿಕೆ, ಧಾರ್ಮಿಕ ಜ್ಞಾನ ಬೋಧಿಸುವ ಸಾಮರ್ಥ್ಯವಿದ್ದವನೊಬ್ಬ ‘ಮೂರು ವರ್ಷ ನಾನೂ ಕೂಡಾ ಅಲ್ಲಿ ಹೋಗಿ ಕಲಿತು ಬಂದಲ್ಲಿ ನನಗೆ ಮಹಾಜ್ಞಾನಿಯ ಪಟ್ಟ ಸಿಗಬಹುದು’ ಎಂದು ಭಾವಿಸಿ, ಆ ಗುರು ಶಿಷ್ಯರಲ್ಲೊಬ್ಬನಾಗಿ ಸೇರ್ಪಡೆಯಾದ.

ಮೂರು ವರ್ಷ ತಾನೇ ಎಂದು ಸೇರಿದವನಿಗೆ ದಿನ ಕಳೆಯುವುದು ಕಷ್ಟ ಅನ್ನಿಸಿತು. ಅವನಿಗೆ ತಾನು ಎಲ್ಲ ಬಲ್ಲೆ. ಈತನಿಂದ ಬೋಧನೆಯ ಅರ್ಹತೆ ಪಡೆದರೇ ಸಾಕು ಎನ್ನುವ ಧೋರಣೆಯಲ್ಲೇ ಕಾಲ ಕಳೆದ. ಈ ಅವಧಿಯಲ್ಲಿ ನಾನು ಏನು ಮಾಡುತ್ತಿದ್ದೇನೆ? ನನ್ನ ಸಮಯ ಹೇಗೆ ವ್ಯಯಿಸುತ್ತಿದ್ದೇನೆ? ನನ್ನ ತಿಳುವಳಿಕೆ ಸಾಮರ್ಥ್ಯದ ಮಿತಿ ಏನು? ಹೀಗೆ ಏನೊಂದನ್ನೂ ಅವನು ಪರಾಮರ್ಶಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅಲ್ಲಿ ಪ್ರತಿಯೊಬ್ಬರು ತುಂಬಾ ಪ್ರಜ್ಞಾಪೂರ್ವಕವಾಗಿ ಕಲಿಕೆಯಲ್ಲಿ ತೊಡಗಿದ್ದವರಾದ್ದರಿಂದ ಈತನ ಚಲನವಲನ ಗಮನಿಸುವಷ್ಟು ಸಮಯ ಅವರಿಗಿರಲಿಲ್ಲ. ಮೂರನೇ ವರ್ಷದ ದಿನ ಮುಗಿಯುವುದನ್ನೇ ಕಾಯುತ್ತಿದ್ದ ಆತ ನಿಯಮಾವಳಿಯಂತೆ ಧರ್ಮಗ್ರಂಥವನ್ನಿಡಿದು ಅಲ್ಲಿದ್ದ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ನೇರವೇರಿಸಿ, ಗುರುಗಳ ಬಳಿ ಬಂದು ತನ್ನ ಶಿಕ್ಷಣಾವಧಿ ಮುಗಿದಿರುವುದಾಗಿಯೂ ತಾವು ಆಶೀರ್ವದಿಸಿದಲ್ಲಿ ತಾನಿನ್ನು ಪೂರ್ಣ ಪ್ರಮಾಣದ ಧಾರ್ಮಿಕ ಬೋಧಕನಾಗಿ ಮುಂದಿನ ಜೀವನ ಕಳೆಯುವುದಾಗಿಯೂ ನಿವೇದಿಸಿಕೊಂಡ.


ಶಿಷ್ಯನ ಆತುರ ಗಮನಿಸಿದ ಗುರುಗಳು,‘‘ನೀನು ದೇವರಿಗೆ ನಮಿಸಿ ಬಂದೆಯಲ್ಲವೇ?,’’ ಎಂದು ಪ್ರಶ್ನಿಸಿದರು. ಶಿಷ್ಯ ‘‘ಹೌದು ಸ್ವಾಮಿ’’ ಎಂದು ಪ್ರತಿಕ್ರಿಯಿಸಿದ.‘‘ಹಾಗೆ ನಮಿಸುವಾಗ ಯಾವ ಬಗೆಯ ಮತ್ತು ಎಷ್ಟು ಹೂವನ್ನು ದೇವರಿಗೆ ಸಮರ್ಪಿಸಿದೆ?,’’ ಎಂದು ಕೇಳಿದರು. ‘‘ಶಿಷ್ಯ ಅದೂ...,’’ ಎಂದು ನಿರುತ್ತರನಾದ. ಹೋಗಲಿ ಬಿಡು. ‘‘ನೀನು ಧರ್ಮಗ್ರಂಥವನ್ನಿಡಿದು ಬಂದೆಯಲ್ಲವೇ?,’’ ಎಂದು ಗುರುಗಳು ಪ್ರಶ್ನಿಸುತ್ತಿದ್ದಂತೆ ‘‘ಗುರುಗಳೇ ಅದು ನಮಿಸುವಾಗ ಅಲ್ಲಿಯೇ ಬಿಟ್ಟು ಬಂದೆ,’’ ಎಂದು ಹೇಳಿ, ಅದನ್ನು ತರಲಿಕ್ಕೆಂದು ಎದ್ದು ನಿಲ್ಲಲು ಸಜ್ಜಾದ.

ಶಿಷ್ಯನನ್ನು ತಡೆದ ಗುರುಗಳು. ‘‘ಜನ ಯಾರ ಮಾರ್ಗದರ್ಶನವಿಲ್ಲದೆಯೂ ಅವರ ಪಾಡಿಗೆ ಅವರಿಗಿರುವ ತಿಳುವಳಿಕೆಯ ಮಿತಿಯಲ್ಲಿ ಬದುಕುತ್ತಿದ್ದಾರೆ. ಅವರ ಗ್ರಹಿಕೆ, ಕ್ರಿಯೆಗಳಲ್ಲಿ ಏನೇ ಏರುಪೇರುಗಳಾದರೂ ಸಹಿಸಿಕೊಂಡು ಮುನ್ನಡೆಯುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡುವ ಹೆಸರಿನಲ್ಲಿ ಬೋಧಿಸುವ ನಾವು ಮೈಮರತರೇ ಹೇಗೆ?,’’ಎಂದು ಪ್ರಶ್ನಿಸಿದರು. ಶಿಷ್ಯನಿಗೆ ತನ್ನ ತಪ್ಪಿನ ಅರಿವು ಆಯಿತು. ಆತ ಮತ್ತೆ ಕಲಿಯುವ ಶಿಷ್ಯರ ಜತೆ ಸೇರಿಕೊಂಡ.

ಸಮಾಜದಲ್ಲಿ ಮಾರ್ಗದರ್ಶನ ಬೇಕಾಗಿರುವುದೇ ಪ್ರಜ್ಞಾವಂತಿಕೆಯ ಕೊರತೆ ಇರುವವರಿಗೆ. ಹಾಗಾಗಿ, ಮಾರ್ಗದರ್ಶನ, ಬೋಧನೆ ಮಾಡುವವರು ತುಂಬಾ ಪ್ರಜ್ಞಾವಂತರಾಗಿರಬೇಕು. ಅನುದಿನ, ಅನುಕ್ಷಣದ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಅರಿವು ಇರುವವರು ಮಾತ್ರ ಈ ಸಮಾಜದ ಬದುಕನ್ನು ನಿರ್ದೇಶಿಸಬಲ್ಲರು. ಅಂತಹವರಿಗೆ ನಿರಂತರ ಎಚ್ಚರ, ಜಾಗೃತಿ, ಪ್ರಜ್ಞೆ ಬೇಕು. ಆಚರಣೆಗಿಂತ ಬೋಧಿಸುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಈ ನಿದರ್ಶನ ಎಲ್ಲರನ್ನೂ ಎಚ್ಚರಿಸುವಂತಿದೆ ಅಲ್ಲವೇ?

-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

No comments:

Post a Comment