Wednesday, 19 October 2016

ವಿರಳವಾದ ಸರಳತೆ

ವಿರಳವಾದ ಸರಳತೆ

ಚಿಂತನ -


ಉಡುಗೆ ತೊಡುಗೆಗಳಲ್ಲಿ, ರೀತಿನೀತಿಗಳಲ್ಲಿ ಅಥವಾ ಸಾಮಾಜಿಕ ನಡವಳಿಕೆಗಳಲ್ಲಿ ಸರಳತೆಯನ್ನು ರೂಢಿಸಿಕೊಂಡು ಬರುವುದು ತುಂಬ ಕಷ್ಟದ ಕೆಲಸ.ಏಕೆಂದರೆ ಮಾನವ ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರದರ್ಶನಪ್ರಿಯತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ.ಶ್ರೀಮಂತಿಕೆ, ಸ್ಥಾನಮಾನ, ಅಧಿಕಾರ ಉಳ್ಳವರಂತೂ ಅವುಗಳಿಗೆ ತಕ್ಕುದಾಗಿ ಅಥವಾ ಅವುಗಳಿಗೂ ಮಿಕ್ಕಿದ್ದಾಗಿ ಮೆರೆಯಲು ಕಾತುರಪಡುತ್ತಾರೆ. ಒಂದು ವೇಳೆ ಒಳ್ಳೆಯ ಹುದ್ದೆಯಲ್ಲಿ ಇದ್ದವರು ಸರಳವಾಗಿ ವ್ಯವಹರಿಸಲು ಹೊರಟರೆ ಅವರನ್ನು ಕಡು ಬಡವರೆಂದೂ ಏನೂ ಗತಿಯಿಲ್ಲದವರೆಂದೂ ತಪ್ಪಾಗಿ ಭಾವಿಸುವವರೇ ಹೆಚ್ಚು.ಸುತ್ತಮುತ್ತ ಸರಳತೆಯೇ ವಿರಳವಾಗಿರುವಾಗ ಅದನ್ನು ನಿಜಜೀವನದಲ್ಲಿ ಆಚರಿಸಿಕೊಂಡು ಬರುವುದು ಎಷ್ಟು ಕಷ್ಟದ ಸಂಗತಿ ಎನ್ನುವುದನ್ನು ತೋರಿಸಿಕೊಡುವ ಕಥೆಯೊಂದು ಮನಸ್ಸನ್ನು ತಟ್ಟುವಂತಿದೆ.

ಪೇಶ್ವೆ ಮಾಧವರಾಯನ ಗುರು ರಾಮಾಶಾಸ್ತ್ರಿಯವರು ರಾಜ್ಯದ ವರಿಷ್ಠ ನ್ಯಾಯಾಧೀಶರೂ ಆಗಿದ್ದು ತುಂಬ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಆದರೆ ಅವರು ತಮ್ಮ ಉನ್ನತ ಪದವಿಗೆ ತಕ್ಕಂತೆ ವೈಭವದಿಂದ ಮೆರೆಯದೆ ಅತ್ಯಂತ ಸರಳರೀತಿಯ ಜೀವನ ವಿಧಾನಕ್ಕೆ ಅಂಟಿಕೊಂಡಿದ್ದರು. ಅಲ್ಲದೆ ತಮ್ಮ ಕುಟುಂಬದ ಸದಸ್ಯರು ಕೂಡ ನಿರಾಡಂಬರವನ್ನು ಅನುಸರಿಸುವಂತೆ ತಾಕೀತು ಮಾಡಿದ್ದರು.

ಹೀಗಿರಲು ಒಮ್ಮೆ ಶಾಸ್ತ್ರಿಯವರ ಧರ್ಮಪತ್ನಿ ಯಾವುದೋ ಒಂದು ಹಬ್ಬದ ದಿನ ರಾಜನ ಅರಮನೆಗೆ ಹೋಗಬೇಕಾಯಿತು. ಆಕೆಯ ವೇಷಭೂಷಣಗಳನ್ನು ಕಂಡು ಅಚ್ಚರಿ ಹಾಗೂ ಬೇಸರಗೊಂಡ ರಾಣಿ ಒತ್ತಾಯಪೂರ್ವಕವಾಗಿ ಅವರಿಗೆ ಅಮೂಲ್ಯವಾದ ಉಡುಪುಗಳನ್ನು ಉಡಿಸಿದಳು. ರತ್ನ ಖಚಿತವಾದ ಆಭರಣಗಳನ್ನು ತೊಡಿಸಿದಳು. ‘‘ವರಿಷ್ಠ ನ್ಯಾಯಾಧೀಶರ ಪತ್ನಿ ರಾಜೋಚಿತ ಪಲ್ಲಕಿಯಲ್ಲಿ ಸಂಚರಿಸಬೇಕಲ್ಲದೆ ಸಾಮಾನ್ಯರಂತೆ ನಡೆದುಕೊಂಡು ಹೋಗಬಾರದು’’ ಎಂದು ತಾಕೀತು ಮಾಡಿದಳು. ಆದ್ದರಿಂದ ಅವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮನೆಗೆ ಕರೆತರಲಾಯಿತು.

ತನ್ನ ಪತ್ನಿಯ ಪೋಷಾಕು ಅಲಂಕಾರಗಳಾಗಲಿ, ಪಲ್ಲಕ್ಕಿಯ ಮೆರವಣಿಗೆಯಾಗಲಿ ರಾಮಾಶಾಸ್ತ್ರಿಯವರಿಗೆ ಎಳ್ಳಷ್ಟೂ ಹಿಡಿಸಲಿಲ್ಲ. ‘‘ನನ್ನ ಪತ್ನಿ ಇಂತಹ ದುಬಾರಿ ಬೆಲೆಯ ಅರಿವೆಗಳನ್ನು ಉಡಲಾರಳು. ಚಿನ್ನರನ್ನಗಳ ಒಡವೆ ಧರಿಸಲಾರಳು. ಆದ್ದರಿಂದ ನೀವು ವಾಪಸ್ ಹೋಗಿ’’ ಎಂದು ಅವರು ಪಲ್ಲಕ್ಕಿಯವರಿಗೆ ಹೇಳಿದರು.

ಪತಿಯ ಸ್ವಭಾವವನ್ನು ಚೆನ್ನಾಗಿ ಬಲ್ಲ ಶಾಸ್ತ್ರಿಯವರ ಹೆಂಡತಿ ಅರಮನೆಗೆ ಹೋಗಿ ರಾಜೋಚಿತ ಪೋಷಾಕು -ಆಭರಣಗಳನ್ನು ಕಳಚಿಟ್ಟರು. ತಮ್ಮ ದೈನಂದಿನ ಸೀದಾ ಸಾದಾ ಬಟ್ಟೆಯನ್ನು ಧರಿಸಿ ಕಾಲ್ನಡಿಗೆಯಲ್ಲೇ ಮನೆಗೆ ಹಿಂತಿರುಗಿದರು.

ಆಗ ಶಾಸ್ತ್ರೀಜಿ, ‘‘ಬಹಳ ಬೆಲೆಯ ಮಿರುಗುವ ಬಟ್ಟೆಯ -ಒಡವೆಗಳನ್ನು ರಾಜ ಮನೆತನದವರು ಪ್ರದರ್ಶನಕ್ಕಾಗಿ ತೊಟ್ಟುಕೊಳ್ಳುತ್ತಾರೆ. ಮೂರ್ಖರು ತಮ್ಮ ದೋಷ ಮುಚ್ಚಿಡಲು ಬಳಸುತ್ತಾರೆ. ಆದರೆ ನಮ್ಮಂತಹ ಸಜ್ಜನರಿಗೆ ಸರಳತೆಯೇ ಶೋಭೆ’’ ಎಂದರು. ಪತ್ನಿ ಇದಕ್ಕೆ ಹ್ಞೂಗುಟ್ಟಿದರು.

ಅರ್ತಿಕಜೆ

No comments:

Post a Comment