Wednesday, 1 February 2017

ದುಃಖಕ್ಕೆ ಕಾರಣವೇನು?

*ದುಃಖಕ್ಕೆ ಕಾರಣವೇನು?*


-ಡಾ. ಡಿ. ವೀರೇಂದ್ರ ಹೆಗ್ಗಡೆ,

 ಧರ್ಮಸ್ಥಳ ನಮ್ಮ ಮನೆ, ನಮ್ಮ ವಸ್ತುಗಳು, ಅದರಲ್ಲೂ ನಮಗೆ ಉಡುಗೊರೆಯಾಗಿ ಸಿಕ್ಕಿದ್ದು, ಯಾರೋ ಪ್ರೀತಿಯಿಂದ ಕೊಟ್ಟ ವಸ್ತುಗಳ ಬಗ್ಗೆ ನಮಗೆ ವಿಶೇಷವಾದ ಅಕ್ಕರೆ, ಪ್ರೀತಿ ಇರುತ್ತದೆ. ಅದರಲ್ಲೂ ಒಂದು ವಿಶೇಷವಾದ, ಅಮೂಲ್ಯ ವಸ್ತುವಿದೆ ಎಂದರ ಅದರ ಬಗ್ಗೆ ನಾವು ವಿಶೇಷವಾದ ಪ್ರೀತಿ-ಸ್ನೇಹ ಹೊಂದಿರುತ್ತೇವೆ. ಒಂದೊಮ್ಮೆ ಆಕಸ್ಮಿಕವಾಗಿ ಅದು ಕಳೆದು ಹೋದರೆ, ಯಾರೋ ಕಳ್ಳರು ಬಂದು ಅದನ್ನು ಕದ್ದೊಯ್ದರೆ ನಮಗೆ ತುಂಬ ದುಖವಾಗುತ್ತದೆ. ಕೂಡಲೇ ಪೊಲೀಸರಿಗೆ ದೂರು ಕೊಡುತ್ತೇವೆ, ಕಂಡ ಕಂಡಲ್ಲೆಲ್ಲ ಅಲೆದು ಹುಡುಕಾಡುತ್ತೇವೆ. ಯಾಕೆ ಹೀಗೆ?


 ಪ್ರೀತಿಯ ವಸ್ತು ಕಳೆದು ಹೋದಾಗ ಇಷ್ಟೊಂದು ದುಃಖ-ವೇದನೆಯುಂಟಾಗಲು ಕಾರಣವೇನು? ಎಂಬುದನ್ನು ಹೃದಯಸ್ಪರ್ಶಿ ವಿಧಾನದಿಂದ ವಿಶ್ಲೇಷಿಸುವ ಪ್ರಸಂಗವೊಂದು ಇಲ್ಲಿದೆ.


ನಾಗಪುರದಲ್ಲಿ ನರೇಂದ್ರ ಸೇಠ್‌ ಎಂಬ ಧನಿಕರ ಮನೆಯೊಂದಿತ್ತು. ಆ ಮನೆಯಲ್ಲಿ ಪ್ಯಾರೇಲಾಲ್‌ ಎಂಬ ಒಬ್ಬ ಪ್ರಾಮಾಣಿಕ ಸೇವಕನಿದ್ದರು. ಮನೆ ಮಂದಿಗೆ ಪ್ರೀತಿ ಪಾತ್ರರಾಗಿ, ಸರ್ವ ರೀತಿಯ ಸೇವೆಯಲ್ಲಿ ತಲ್ಲೀನರಾಗಿದ್ದರು. ಒಮ್ಮೆ ಸಂಜೆ ವೇಳೆಗೆ ಸೇಠ್‌ಜೀ ನೋಡುತ್ತಾರೆ- ಅವರ ಹಜಾರದಲ್ಲಿದ್ದ ಸುಂದರವಾದ ಗೋಡೆ ಗಡಿಯಾರ ನೆಲಕ್ಕೆ ಬಿದ್ದು ಪುಡಿಪುಡಿಯಾಗಿದೆ. ತಕ್ಷ ಣವೇ ನೌಕರನನ್ನು ಕರೆದು 'ಇದೇಕೆ ಹೀಗಾಯ್ತು?' ಎಂದು ಪ್ರಶ್ನಿಸಿದರು. ಆಗ ಪ್ಯಾರೇಲಾಲ್‌,- 'ಧಣಿಗಳೇ, ಗಡಿಯಾರವನ್ನು ಸ್ವಚ್ಛ ಮಾಡುತ್ತಿರುವಾಗ ಜಾರಿ ಕೆಳಗೆ ಬಿತ್ತು. ನನ್ನನ್ನು ಮನ್ನಿಸಿರಿ' ಎಂದು ವಿನಂತಿಸಿದರು. ಕ್ರುದ್ಧರಾದ ಸೇಠ್‌ಜೀ ಹೇಳಿದರು- 'ನನಗೆ ಅತ್ಯಂತ ಪ್ರಿಯವಾದ ಗಡಿಯಾರವಾಗಿತ್ತು. ನೀನು ಅದನ್ನು ಬೀಳಿಸಿ ತಪ್ಪು ಮಾಡಿದ್ದೀಯಾ'. ಸೇಠ್‌ಜೀಗೆ ಎಷ್ಟೊಂದು ಬೇಸರವಾಗಿತ್ತೆಂದರೆ ಆ ರಾತ್ರಿ ಇಡೀ ಅವರಿಗೆ ನಿದ್ದೆಯೇ ಬರಲಿಲ್ಲ. ಹಾಸಿಗೆಯ ಮೇಲೆ ಅತ್ತಿಂದಿತ್ತ ಹೊರಳಾಡುತ್ತಿದ್ದರು. ಅಕಸ್ಮಾತ್ತಾಗಿ ಅವರ ದೃಷ್ಟಿ ನೌಕರ ಪ್ಯಾರೇಲಾಲನ ಕಡೆ ಹೋಯಿತು. ಆತ ನಿಶ್ಚಿಂತೆಯಿಂದ ಗಾಢ ನಿದ್ರಾ ಮಗ್ನನಾಗಿದ್ದ. ಇಡೀ ರಾತ್ರಿ ನಿದ್ರಿಸದ ಸೇಠ್‌ಜೀ ಮರುದಿನ ಬೆಳಗ್ಗೆ ನೌಕರ ಪ್ಯಾರೇಲಾಲ್‌ನನ್ನು ಕರೆದು ಹೇಳಿದರು- 'ನಿನ್ನೆ ನನಗೆ ಗಡಿಯಾರ ಪುಡಿಯಾದ್ದರಿಂದ ಬೇಸರವಾಗಿತ್ತು. ಇಂದು ಬಹಳ ಪ್ರಸನ್ನನಾಗಿದ್ದೇನೆ. ನಿನ್ನ ಸೇವೆಗೆ ಪ್ರತಿಫಲವಾಗಿ ಆ ಗೋಡೆ ಗಡಿಯಾರವನ್ನು ಕೊಡಬೇಕೆಂದಿದ್ದೆ. ಆದರೆ ನಿನ್ನ ಕೈಯಿಂದಲೇ ಬಿದ್ದು ಪುಡಿಯಾಯ್ತಲ್ಲ. ಏನು ಮಾಡೋಣ? ತುಂಬಾ ಬೇಸರವಾಗುತ್ತಿದೆ'. ಇದನ್ನು ಹೇಳಿದ ಸೇಠ್‌ಜೀ ಆನಂದದಿಂದ ಮಲಗಿ ನಿದ್ರಿಸಿದರು. ಆದರೆ ಪ್ಯಾರೇಲಾಲ್‌ನಿಗೆ ಮಾತ್ರ ಆವತ್ತು ನಿದ್ರೆಯೇ ಸುಳಿಯಲಿಲ್ಲ. 'ಎಂಥ ಸದವಕಾಶ! ಎಷ್ಟೊಂದು ಸುಂದರ ಗಡಿಯಾರ! ನನ್ನ ತಪ್ಪಿಂದಾಗಿಯೇ ಸದವಕಾಶ ತಪ್ಪಿಹೋಯ್ತಲ್ಲ ಎಂದು ಪ್ಯಾರೇಲಾಲ್‌ಗೆ ತುಂಬ ಬೇಸರವಾಯಿತು.


ಒಂದು ವಸ್ತುವಿನ ಬಗ್ಗೆ ಸ್ನೇಹ-ಪ್ರೇಮವಿದ್ದಾಗ, ಅದು ಕಳೆದು ಹೋದರೆ ನಮಗೆ ಅಪಾರ ದುಃಖವುಂಟಾಗುತ್ತದೆ. ಈ ಥರದ ದುಃಖಕ್ಕೆ ಮೂಲ ಕಾರಣ ಆ ವಸ್ತುವಿನ ಬಗೆಗಿರುವ ಅಪರಿಮಿತ ಮೋಹ. ಇಂತಹ ಮೋಹವನ್ನು ಮರೆತಾಗ ನಮ್ಮಿಂದ ದುಃಖವೂ ದೂರವಾಗಲು ಸಾಧ್ಯ. ಮೋಹ ನಿವಾರಣೆಗೆÜ ಸುಲಭೋಪಾಯವೆಂದರೆ ಆ ಮೋಹದ ತ್ಯಾಗವೇ ಸರಿ. ಸೇಠ್‌ಜಿ ಆ ವಸ್ತುವಿನ ಮೇಲಿದ್ದ ಮೋಹವನ್ನು ತ್ಯಜಿಸುವ ಮೂಲಕ ತನ್ನೊಳಗೆ ಶಾಂತಿಯನ್ನು ಸ್ಥಾಪಿಸಿಕೊಂಡರು. ಅದೇ ಪ್ಯಾರೇಲಾಲ್‌ ತನ್ನದಲ್ಲದ ವಸ್ತುವಿನ ಮೇಲೆ ಮೋಹವನ್ನು ಬೆಳೆಸಿಕೊಂಡು ನಿದ್ದೆಯಿಲ್ಲದ ಒದ್ದಾಡಿದ. ಇದರಿಂದ ನಾವು ಕಲಿಯಬಹುದಾದ ಪಾಠ ತುಂಬ ದೊಡ್ಡದು ಅಲ್ಲವೇ?

No comments:

Post a Comment