Wednesday, 15 February 2017

ಮೋಹ ಮಿತಿಯಲ್ಲಿರಲಿ

*ಮೋಹ ಮಿತಿಯಲ್ಲಿರಲಿ*

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೨.೦೬.೨೦೦೩ರಂದು ಪ್ರಕಟವಾಗಿತ್ತು)

ಸ್ವಾಮೀಜಿಯೊಬ್ಬರು ಕಾನ್ಪುರದಲ್ಲಿ ಒಬ್ಬರ ಮನೆಗೆ ಅತಿಥಿಯಾಗಿ ಹೋಗಿದ್ದಾಗ ನಡೆದ ಘಟನೆ ಇದು. ಸಂಸಾರದಲ್ಲಿ ವಿಪರೀತ ಮೋಹ ಇಟ್ಟುಕೊಂಡಿದ್ದ ಆ ಮನೆಯ ಹಿರಿಯರಾದ ವಯೋವೃದ್ಧರ ಮನಃಸ್ಥಿತಿಯನ್ನು ಬಿಂಬಿಸುವಂತಿದೆ ಈ ಪ್ರಸಂಗ.

ಆ ಹಿರಿಯರ ಕುಟುಂಬದಲ್ಲಿ ಅವರ ಮಗ ಸೊಸೆ ಇಬ್ಬರೂ ನೌಕರಿಯಲ್ಲಿದ್ದರು. ಮನೆಯಲ್ಲಿ ಕಸಗುಡಿಸುವುದರಿಂದ ಮೊಮ್ಮಕ್ಕಳ ಪಾಲನೆಯವರೆಗೆ ಎಲ್ಲಾ ಕೆಲಸವನ್ನೂ ಆ ಹಿರಿಯರು ವಹಿಸಿಕೊಂಡು ಮಾಡುತ್ತಿದ್ದರು. ಇಷ್ಟೆಲ್ಲಾ ಮಾಡಿದರೂ ಆ ವೃದ್ಧರಿಗೆ ಅವರ ಮುಂಗೋಪಿಯಾದ ಮಗನಿಂದ ಸಿಕ್ಕಾಪಟ್ಟೆ ಬೈಗುಳ ಕೇಳುವುದು ತಪ್ಪಿರಲಿಲ್ಲ!

ಒಂದು ಸಲ ಆ ಮಗ ತನ್ನ ತಂದೆಗೆ ಈ ಸ್ವಾಮೀಜಿ ಎದುರಿಗೇ ಕಪಾಳಕ್ಕೆ ಹೊಡೆದುಬಿಟ್ಟನಂತೆ!ಸ್ವಾಮೀಜಿಗೆ ತುಂಬಾ ಕರುಣೆಯುಂಟಾಗಿ, ನಂತರ ಆ ಹಿರಿಯರಿಗೆ, "ಏನಪ್ಪಾ, ನೀನ್ಯಾಕೆ ಈ ವಯಸ್ಸಿನಲ್ಲಿ ಇಷ್ಟು ಕಷ್ಟ ಪಡ್ತೀಯ. ನನಗೆ ತುಂಬಾ ಪರಿತಾಪವಾಗುತ್ತೆ. ನಾಲ್ಕೈದು ಆಶ್ರಮವಿದೆ. ನಮ್ಮ ಆಶ್ರಮಕ್ಕೆ ಬಂದುಬಿಡು. ನಿನ್ನನ್ನು ತುಂಬಾ ಚೆನ್ನಾಗಿ ನೋಡ್ಕೋತೀನಿ. ಈ ವಯಸ್ಸಿನಲ್ಲಿ ವದೆಗಿದೆ ತಿನ್ಕೊಂಡು ಯಾಕಿರ್ತೀರ ಈ ಮಕ್ಕಳ ಜೊತೆ! ಯಾಕಿಂಥ ಜೀವನ ಮಾಡಬೇಕು ಬಂದುಬಿಡು" ಅಂದರಂತೆ.

ಇಲ್ಲಿಯತನಕ ತನ್ನ ಕೊರಗನ್ನೆಲ್ಲಾ ಹೇಳಿಕೊಳ್ಳುತ್ತಿದ್ದ ಆ ಮನುಷ್ಯ ಒಂದೇ ಸಲ ಕಣ್ಣೆಲ್ಲಾ ಕೆಂಪು ಮಾಡಿಕೊಂಡು ಸ್ವಾಮೀಜೀನ ಕೇಳಿದರಂತೆ "ಏನು, ನಿಮಗೆ ಹಾಳು ಮಾಡೋಕೆ ಬೇರೆ ಯಾವುದೂ ಮನೆ ಸಿಕ್ಕಲಿಲ್ಲವಾ? ನಮ್ಮನೇನೇ ಆಗಬೇಕಾ? ಹೋಗಿ, ಬೇರೆ ಯಾವುದಾದರೂ ಮನೆ ಹುಡುಕಿಕೊಳ್ಳಿ, ಹಾಳುಮಾಡಿ. ನಾನು ಈ ಮನೆ ಬಿಟ್ಟು ಹೋಗಿಬಿಟ್ಟರೆ ಮಕ್ಕಳ  ಮೊಮ್ಮಕ್ಕಳ ಗತಿ ಏನಾಗಬೇಕು? ಮಗ ಸೊಸೆ ಇಬ್ಬರೂ ಕೆಲ್ಸಕ್ಕೆ ಹೋಗಿಬಿಟ್ಟರೆ, ಮನೆಯ ಎಲ್ಲಾ ಕೆಲಸ ಮಾಡೋರು ಯಾರು? ಸುಮ್ಮನೆ ನಮ್ಮನೆ ಹಾಳುಮಾಡಬೇಡಿ. ನಿಮ್ಮ ದಾರಿ ನೋಡ್ಕೊಂಡು ಹೋಗಿ" ಅಂದರಂತೆ. ಸ್ವಾಮೀಜಿಗೆ ಏಕ್ದಂ ಗಾಬರಿಯಾಗಿ ಹೋಯ್ತು!!...

’ಮೋಹ’! ಆ ಮೋಹದಲ್ಲಿ ವದೆ ತಿಂದುಕೊಂಡಾದ್ರೂ ಅಲ್ಲೇ ಇರಬೇಕು. ಸತ್ತರೂ ಪರವಾಗಿಲ್ಲ, ಅಲ್ಲೇ ಇರಬೇಕು.
ಕೆಲವರು ಹಾಗೇ ತಮ್ಮ ಹಳೇಮನೆ ಬಿಟ್ಟು ಬೇರೆ ಮನೆಗೆ ಹೋಗಲ್ಲ. ’ನಾನು ಸತ್ತರೂ ಪರವಾಗಿಲ್ಲ, ಇದೇ ಮನೇಲಿರ್ತೀನಿ’, ಅಥವಾ ’ಇದೇ ಊರಲ್ಲಿರುತ್ತೀನಿ’ ಅಂತಾರೆ! ಊರಿನ ಬಗ್ಗೆ ಮೋಹ, ವ್ಯಕ್ತಿಗಳ ಬಗ್ಗೆ ಮೋಹ! ಈ ಮೋಹ ಒಂದು ಮಿತಿಯಲ್ಲಿ ಇದ್ದರೆ ಸಿದ್ಧಿಯುಂಟಾಗುತ್ತದೆ. ಅದೇ ಮೋಹ ಮಿತಿಮೀರಿದಾಗ, ಅತೀವ ದುಖಕ್ಕೆ ಕಾರಣವಾಗುತ್ತೆ. "ಮೋಹಾವರಣಾತ್ ಸಿದ್ಧಿಃ"

* * * * *

No comments:

Post a Comment